i
ಲೋಕಸಭಾ ಕ್ಷೇತ್ರಕ್ಕೆ ಕುರುಬರಿಗೆ ಟಿಕೆಟ್ ನೀಡಲು ಒತ್ತಾಯ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕಾಂಗ್ರೆಸ್ ವಕ್ತಾರ ಹಾಗೂ ಚಿಂತಕ ನಿಕೇತ್ರಾಜ್ ಮೌರ್ಯ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಕುರುಬ ಸಮುದಾಯದ ಮುಖಂಡರು ಒಕ್ಕೊರಲಿನ ಸಭೆ ನಡೆಸಿದರು.ನಗರದ ಖಾಸಗೆ ಕನ್ವೆನ್ಷಲ್ ಹಾಲ್ನಲ್ಲಿ ಏರ್ಪಡಿಸಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿದ ಮುಖಂಡರು, ಇದೇ ಕ್ಷೇತ್ರದಿಂದ ಬಾಸ್ಕರಪ್ಪ ನವರು ಲೋಕಸಭೆಗೆ ನಿಂತು ಗೆದ್ದಿದ್ದರು. ಈಗ ನಮ್ಮ ಸಮುದಾಯದವರೆ ಆದ ನಿಕೇತ್ ರಾಜ್ ಮೌರ್ಯ ಅವರು ಎಲ್ಲಾ ವರ್ಗ, ಜನಾಂಗದವರನ್ನು ಒಗ್ಗೂಡಿಸಿಕೊಂಡು ರಾಜಕಾರಣ ಮತ್ತು ಅಭಿವೃದ್ಧಿಯ ರಥ ಎಳೆಯುವ ವಿದ್ವತ್ ಶಕ್ತಿ ಹೊಂದಿದ್ದಾರೆ. ಇವರಿಗೆ ಲೋಕಸಭಾ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಗೆಲುವು ಸಾಧಿಸಲಿದ್ದಾರೆ. ಈ ನಿಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿ ನಿಕೇತ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಂದು ಒತ್ತಾಯಿಸಲಾಯಿತು.ಸಿದ್ದರಾಮಯ್ಯನವರ ದೂರದೃಷ್ಟಿಯ ಜನಪರ ಚಿಂತನೆಗಳು ನಿಕೇತ್ ರಾಜ್ ಅವರಲ್ಲಿ ಕಾಣಬಹುದು. ವಿದ್ಯಾವಂತ ಒಬ್ಬ ಲೋಕಸಭೆ ಪ್ರವೇಶಿಸಿದರೆ ಬಡವರ ಪರವಾದ ದನಿಯಾಗಲು ಸಾಧ್ಯವಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆ ಆಶಯ ಈಡೇರಿಸಲು ಶ್ರಮಿಸುತ್ತಾರೆ ಎಂಬ ನಂಬಿಕೆ ಇದೆ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಇರುವ ಸ್ಪಷ್ಟ ನಿಲುವು ಅವರನ್ನು ಇಲ್ಲಿಯವರೆಗೆ ಕರೆತಂದಿದೆ. ಹಾಗಾಗಿ ನಮ್ಮೆಲ್ಲರ ಪೂರ್ಣ ಸಹಕಾರ ಇರಲಿದೆ. ಕುರುಬ ಸಮಾವೇಶ ಮಾಡಿ ಟಿಕೆಟ್ ಕೇಳಲಿದ್ದೇವೆ. ಮತವನ್ನೂ ಮತ್ತು ಹಣವನ್ನೂ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವ ವಿಶ್ವಾಸ ವ್ಯಕ್ತಪಡಿಸಲಾಯಿತು.ಇವರ ಬಗ್ಗೆ ಜಿಲ್ಲೆಯ ಮತದಾರರಲ್ಲೂ ಒಲವಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವ ಸಮರ್ಥರೂ ಹೌದು. ಇಂತಹವರು ರಾಜಕಾರಣಕ್ಕೆ ಬಂದರೆ ಅಮೂಲಾಗ್ರ ಬದಲಾವಣೆಯಾಗಲಿದೆ. ಹಿಂದುಳಿದ ಸಮುದಾಯದವನೊಬ್ಬ ಪಾರ್ಲಿಮೆಂಟ್ಗೆ ಹೋಗುವುದಾದರೆ ಎಲ್ಲರೂ ಬೆಂಬಲಿಸಲು ಸಿದ್ಧರಿದ್ದಾರೆ ಎಂದು ಚರ್ಚಿಸಿದರು.ನಿಕೇತ್ ರಾಜ್ ಅವರು ಕುರುಬ ಸಮುದಾಯಕ್ಕಷ್ಟೇ ಸೀಮಿತವಾಗಿರದೆ ಸರ್ವರ ಹಿತವನ್ನು ಬಯಸುವವರಾಗಿದ್ದಾರೆ. ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಸಚಿವರಾದ ಡಾ.ಜಿ.ಪರಮೇಶ್ವರ್, ರಾಜಣ್ಣ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡೋಣ. ಇದಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ನಿಕೇತ್ ರಾಜ್ ಆಗರ್ಭ ಶ್ರೀಮಂತನಲ್ಲದಿದ್ದರೂ ಹೃದಯ ಶ್ರೀಮಂತಿಕೆ ಇದೆ. ಅವರು ಲೋಕಸಭೆಗೆ ಹೋಗದಿದ್ದರೆ ಅದು ಜನಸಾಮಾನ್ಯರ ಸೋಲಾಗುತ್ತದೆ. ನಾವೆಲ್ಲಾ ನಮ್ಮ ಮನೆಯ ಮಗನ ಬೆಂಬಲಕ್ಕೆ ನಿಲ್ಲಬೇಕೆಂಬ ದೃಢ ನಿರ್ಧಾರ ಕೈಗೊಳ್ಳಲಾಗಿತ್ತು.ಸಭೆಯಲ್ಲಿ ರೇವಣಸಿದ್ದೇಶ್ವರ ಮಠದ ಗುರುಗಳಾದ ಬಿಂದುಶೇಖರ ಒಡೆಯರ್, ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಕರ್ನಾಟಕ ಯುವ ಪ್ರದೇಶ ಕುರುಬರ ಸಂಘದ ಮಹಾಲಿಂಗಯ್ಯ, ಕಾರ್ಪೊರೇಟರ್ ಮಹೇಶ್, ಶಫರ್ಡ್ಸ್ ಇಂಡಿಯಾ ಸಂಘಟನೆಯ ರವೀಶ್, ಮುಖಂಡರಾದ ನರಸಿಂಹರಾಜು, ಚಿ.ನಾ.ಹಳ್ಳಿ ಸಿದ್ದರಾಮಯ್ಯ, ಸಂಘದ ಕಾರ್ಯಾಧ್ಯಕ್ಷ ಆರ್ಎಂಸಿ ರಾಜು, ವಕೀಲ ಮಲ್ಲಿಕಾರ್ಜುನ್ ಮತ್ತು ಸಮಾಜದ ಎಲ್ಲಾ ಹಿರಿಯ ನೂರಾರು ಮುಖಂಡರು ಹಾಜರಿದ್ದರು.