i
ಅರಣ್ಯ ಇಲಾಖೆ ನೌಕರನಿಂದ ರಾಜಕಾಲುವೆ ಒತ್ತುವರಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಹೊಳಲ್ಕೆರೆ ಟೋಲ್ಗೇಟ್ ಸಮೀಪವಿರುವ ೧೫೦ ವರ್ಷ ಹಳೆಯದಾದ ರಾಜಕಾಲುವೆಯನ್ನು ಅರಣ್ಯ ಇಲಾಖೆಯ ನಿವೃತ್ತ ನೌಕರನೊರ್ವ ಅಕ್ರಮವಾಗಿ ಮುಚ್ಚಿರುವುದರಿಂದ ಕೊಳಚೆ ನೀರು ಹರಿಯದೆ ನಿಂತಿದ್ದು, ನಲವತ್ತು ವರ್ಷಗಳಿಂದಲೂ ಇಲ್ಲಿ ವಾಸಿಸುತ್ತಿರುವ ೧೪೦ ಬಡ ಕುಟುಂಬಗಳು ದುರ್ವಾಸನೆಯಿಂದ ಸಹಿಸಿಕೊಂಡು ಕಾಲ ಕಳೆಯುವಂತಾಗಿದೆ. ಅರಣ್ಯ ಇಲಾಖೆಯ ನಿವೃತ್ತ ನೌಕರ ತನ್ನ ಹೆಂಡತಿ ಹೆಸರಿನಲ್ಲಿ ಜಮೀನಿದೆ ಎಂದು ದೌರ್ಜನ್ಯವೆಸಗಿ ರಾಜಕಾಲುವೆಯ ಒಂದು ಭಾಗವನ್ನು ಮಣ್ಣಿನಿಂದ ಮುಚ್ಚಿ ಚರಂಡಿ ಹೊಡೆದು ರಾಜಕಾಲುವೆಯ ಹಳ್ಳದ ದಿಕ್ಕನ್ನೆ ಬದಲಾಯಿಸಿದ್ದಾನೆ. ಅಕ್ರಮವಾಗಿ ಇಲ್ಲಿ ಪ್ರವೇಶಿಸಲು ಯಾರಿಗೂ ಅಧಿಕಾರವಿಲ್ಲದಿದ್ದರೂ ಗೂಂಡಾಗಿರಿ ತೋರಿ ರಾಜಕಾಲುವೆಯನ್ನು ಬಂದ್ ಮಾಡಿರುವುದರಿಂದ ಕೊಳಚೆ ನೀರು ಹರಿಯಲು ಜಾಗವಿಲ್ಲದಂತಾಗಿ ಬಡಪಾಯಿಗಳ ಮನೆ ಎದುರು ನಿಂತಿದೆ. ಇದರಿಂದ ಸೊಳ್ಳೆಗಳ ತಾಣವಾಗಿ ವಾಸಿಸಲು ಆಗದೆ ಬೇರೆ ಕಡೆ ಹೋಗಲು ಆಗದಂತ ಅತಂತ್ರ ಸ್ಥಿತಿಯಲ್ಲಿ ಹಳ್ಳದ ಏರಿಯಾ ಕೊಳಚೆ ಪ್ರದೇಶದ ನಿವಾಸಿಗಳು ಮಮ್ಮಲ ಮರುಗುತ್ತಿದ್ದಾರೆ.ಹೊಳಲ್ಕೆರೆ ರಸ್ತೆ, ಬಸವೇಶ್ವರ ಬಾಡಿ ಬಿಲ್ಡಿಂಗ್ ಹಿಂಭಾಗದ ನಿವಾಸಿಗಳಾದ ಅನ್ವರ್ಭಾಷ ಮತ್ತಿತರರು ರಾಜಕಾಲುವೆಯನ್ನು ಬಂದ್ ಮಾಡಿರುವ ವ್ಯಕ್ತಿ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.