i
ಅನೈತಿಕ ಚಟುವಟಿಕೆಗಳ ತಾಣವಾದ ಚಿತ್ರದುರ್ಗದ ಸ್ವಾಮಿ ವಿವೇಕಾನಂದ ಪಾರ್ಕ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಯ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪನೆಯಾಗಲಿ ಎಂದು ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕರಿಯಣ್ಣ. ಡಿ. ಆಗ್ರಹಿಸಿದರು.
ನಗರದ ಜಿಲ್ಲಾ ಆಸ್ಪತ್ರೆ ಬಳಿಯ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ನೆಹರು ಯುವ ಕೇಂದ್ರ ಚಿತ್ರದುರ್ಗ ಹಾಗೂ ಶಾರದಾ ರಾಮಕೃಷ್ಣ ಆಶ್ರಮದ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಅವರ ೧೬೧ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ, ಉದ್ಯಾನವನ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಹಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದ ಉದ್ಯಾನವನ ನಗರಸಭೆಯಿಂದ ಕೂಗಳತೆಯ ದೂರದಲ್ಲೇ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರಂತದ ಸಂಗತಿ ಎಂದು ಕರಿಯಣ್ಣ ಅಸಮಾಧಾನ ಹೊರ ಹಾಕಿದರು.
ಈ ಉದ್ಯಾನವನದ ಪಕ್ಕದಲ್ಲೇ ಜಿಲ್ಲಾ ಆಸ್ಪತ್ರೆ ಇದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಆಸ್ಪತ್ರೆ ಮುಂದಿನ ಉದ್ಯಾನವನ ಅನಾರೋಗ್ಯದ ಆವಾಸಿ ತಾಣವಾಗಿ ಪರಿಣಮಿಸಿದೆ. ಇಲ್ಲಿನ ಮುಖ್ಯರಸ್ತೆ ಅಗಲೀಕರಣದ ಸಂದರ್ಭದಲ್ಲಿ ಉದ್ಯಾನವನಕ್ಕೆ ಹಾಕಿದ್ದ ತಂತಿ ಬೇಲಿ ತೆರವು ಮಾಡಲಾಗಿದೆ. ಅಂದಿನಿಂದ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಈ ಉದ್ಯಾನದ ಸ್ಥಿತಿ ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬರದೇ ಇರುವುದು ಬೇಸರದ ಸಂಗತಿ ಎಂದರು. ನಮ್ಮ ದೇಶದ ಕೀರ್ತಿಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಯ ಹೆಸರನ್ನು ಈ ಉದ್ಯಾನವನಕ್ಕೆ ಇಡಲಾಗಿದೆ. ಆದರೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಕಂಡ ಕಂಡಲ್ಲೇ ಮಲ ಮೂತ್ರ ವಿಸರ್ಜನೆ ಮಾಡಲಾಗಿದೆ. ರಾತ್ರಿ ಕುಡುಕರ ಅಡ್ಡವಾಗಿ ಪರಿಣಮಿಸುವ ಈ ಸ್ಥಳದಲ್ಲೇ ಸಾಕಷ್ಟು ಮದ್ಯದ ಬಾಟಲಿಗಳು ಬಿದ್ದಿವೆ. ಹಣಕೊಟ್ಟು ನಾಯಿ ಖರೀದಿಸಿ ಶೋಕಿಗಾಗಿ ಸಾಕಿದ ಜನರು ನಾಯಿ ಸತ್ತ ಮೇಲೆ ಅದರ ಮೃತ ದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ. ಇದರಿಂದ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು. ಇದೇ ಮಾರ್ಗವಾಗಿ ದಿನಂಪ್ರತಿ ಓಡಾಡುವ ಸ್ಥಳೀಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಉದ್ಯಾನವನದ ಸ್ಥಿತಿಯ ಬಗ್ಗೆ ಗಮನ ನೀಡಿಲ್ಲ. ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕೂಡಲೇ ಉದ್ಯಾನವನದ ಅಭಿವೃದ್ಧಿಗೆ ಗಮನ ನೀಡಬೇಕು. ಇಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಮಾಡಬೇಕು. ಉದ್ಯಾನವನದಲ್ಲಿ ಹಸಿರೀಕರಣ ಮಾಡಬೇಕು. ಅಲಂಕಾರಿಕ ಗಿಡಗಳನ್ನು ಬೆಳೆಸಬೇಕು ಎಂದು ಒತ್ತಾಯಿಸಿದರು. ಸಂಘಟನೆಗಳ ಪದಾಧಿಕಾರಿಗಳು ಸ್ವಚ್ಛತಾ ಕಾರ್ಯ ಮಾಡಿ ಸುಮಾರು ಒಂದು ಲೋಡ್ನಷ್ಟು ಕಸ ಸಂಗ್ರಹವಾಗಿದೆ. ಸ್ವಚ್ಛತಾ ಕಾರ್ಯದ ನಂತರ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಲಾಯಿತು. ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಬ್ರಿಜೇಶ್ ಭಗತ್, ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.