i
ಕುಂಚಿಟಿಗ ಹನುಮಂತೇಗೌಡ-ಲಿಂಗಾಯಿತ ರವಿಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯ ಒಳ ನೋಟ…
ವರದಿ-ಎನ್.ಎಂ.ಗೌಡ, ತುಮಕೂರು.
ಚಂದ್ರವಳ್ಳಿ ನ್ಯೂಸ್, ತುಮಕೂರು/ಮಧುಗಿರಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಳೆದು ತೂಗಿ ತುಮಕೂರು ಜಿಲ್ಲೆಯಲ್ಲಿ ಜನಸಂಖ್ಯಾತ್ಮಕವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯಿತ ಮತ್ತು ಕುಂಚಿಟಿಗ ಜಾತಿಯ ಮುಖಂಡರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೂರಿಸುವ ಮೂಲಕ ದೊಡ್ಡ ಆಟ ಕಟ್ಟಿದ್ದಾರೆ.
ಚಿತ್ರದುರ್ಗ-ತುಮಕೂರು ಜಿಲ್ಲೆಗಳ ಎರಡು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕಾದರೆ ಈ ಎರಡು ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕುಂಚಿಟಿಗ ಮತ್ತು ಲಿಂಗಾಯಿತ ಜಾತಿಗಳಿಗೆ ಆದ್ಯತೆ ನೀಡಲಾಗಿದೆ. ಜಾತಿ ಲೆಕ್ಕಾಚಾರದಲ್ಲೇ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಆದರೂ ಬಿಜೆಪಿಯ ಒಳ ನೋಟವೇ ಬೇರೆ ಇದ್ದಂತೆ ಕಾಣುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತರು, ಒಕ್ಕಲಿಗರಿಗೆ ಅಷ್ಟೊಂದು ಮಹತ್ವ ನೀಡಿಲ್ಲ, ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರ ಮೂಲಕ ಒಕ್ಕಲಿಗರಾದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರನ್ನು ಕಟ್ಟಿ ಹಾಕಲು ಲೋಕಸಭಾ ಚುನಾವಣೆಗೂ ಮುನ್ನ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಠಿಸಬೇಕು ಎನ್ನುವ ವಿವಾದ ಒಂದು ಕಡೆಯಾದರೆ ಲಿಂಗಾಯಿತ ಜಾತಿ ಅಧಿಕಾರಿಗಳನ್ನು ಸರ್ಕಾರದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವುದನ್ನು ಸ್ವತಃ ಕಾಂಗ್ರೆಸ್ ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಒಕ್ಕಲಿಗರು, ಲಿಂಗಾಯಿತ ಜಾತಿಗಳ ವಿರೋಧದ ಮಧ್ಯಯೇ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೆ ತರಲು ಶತಗತಾಯ ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಸಮಾವೇಶ ಮಾಡಿ ಜಾತಿ ವರದಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ರಾಜ್ಯದ ಪ್ರಮುಖ 2 ರಾಜಕೀಯ ಶಕ್ತಿಗಳಾದ ಒಕ್ಕಲಿಗ ಮತ್ತು ಲಿಂಗಾಯಿತರನ್ನು ರಾಜಕೀಯವಾಗಿ ಕಟ್ಟಿ ಹಾಕುವ ಷಡ್ಯಂತ್ರ ಮುಖ್ಯಮಂತ್ರಿ ಮತ್ತು ಅವರ ಹಿಂಭಾಲಕರಿಗೆ ಇದ್ದಂತೆ ಕಾಣುತ್ತಿದೆ. ಹಾಗಾಗಿ ಬಿಜೆಪಿ ವರಿಷ್ಠರು ಲಿಂಗಾಯಿತ ಒಕ್ಕಲಿಗ ಜಾತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಇದರ ಮಧ್ಯ ಕರ್ನಾಟಕದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ಕುಂಚಿಟಿಗ ಜಾತಿಗೂ ಬಿಜೆಪಿ ಆದ್ಯತೆ ನೀಡುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕ ಜಾತಿಯಾಗಿರುವ ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯ ಉಪ ಜಾತಿ ಎಂದೇ ಹೇಳುತ್ತಾ ಎಲ್ಲ ಅಧಿಕಾರಿವನ್ನು ಮೂಲ ಒಕ್ಕಲಿಗರಿಗೆ ನೀಡುತ್ತಾ ಕುಂಚಿಟಿಗ ಜಾತಿಯನ್ನು ಕಡೆಗಣನೆ ಮಾಡುತ್ತಿವೆ. ಕುಂಚಿಟಿಗ ಜಾತಿಯ ಅತ್ಯಂತ ಹಿರಿಯ ಮುತ್ಸದ್ದಿ ರಾಜಕಾರಣಿ ಶಿರಾ ವಿಧಾನಸಭಾ ಕ್ಷೇತ್ರದ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ಮಾನ ನೀಡದೇ ದೆಹಲಿಯ ಗಂಜಿ ಕೇಂದ್ರಕ್ಕೆ ದೂಡಿದರು. ಇದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಈ ಮೂವರಲ್ಲಿ ಯಾರು ಕಾರಣರೋ ಅಥವಾ ಪಕ್ಷದ ತೀರ್ಮಾನವೋ ತಿಳಿಯುತ್ತಿಲ್ಲ, ಆದರೆ ಕುಂಚಿಟಿಗ ಜಾತಿಗೆ ರಾಜಕೀಯವಾಗಿ ಅನ್ಯಾಯ ಆಗಿದ್ದಂತು ಸತ್ಯ. ಬಹುತೇಕ ಕುಂಚಿಟಿಗ ಜಾತಿ ಕಾಂಗ್ರೆಸ್ ತೀರ್ಮಾನದ ವಿರುದ್ಧ ತಿರುಗಿ ಬಿದ್ದಂತೆ ಕಾಣುತ್ತಿದೆ. ಈ ಸತ್ಯ ಅರಿತ ಬಿಜೆಪಿ ವರಿಷ್ಠರು ಕುಂಚಿಟಿಗ ಜಾತಿಯನ್ನು ಬಿಜೆಪಿಯತ್ತಾ ಸೆಳೆಯಲು ಕುಂಚಿಟಿಗ ಜಾತಿಯ ಬಿ.ಸಿ.ಹನುಮಂತೇಗೌಡರನ್ನು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ. ಇಂತಹ ಸೂಕ್ಷ್ಮ ಒಳ ನೋಟಗಳನ್ನು ಬಿಜೆಪಿ ಸಾಕಷ್ಟು ಗ್ರಹಿಸಿಯೇ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿದೆ.ಯಾರು ಹನುಮಂತೇಗೌಡ?-
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಭೀಮನಕುಂಟೆ ಗ್ರಾಮದ ರೈತ ಕುಟುಂಬದಿಂದ ಬಂದಿರುವ ಬಿ.ಸಿ.ಹನುಮಂತೇ ಗೌಡರು ಮೂಲತಃ ಎಬಿವಿಪಿ, ಸಂಘಪರಿವಾರದ ಕುಡಿ.
ಶಿಕ್ಷಣ-ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ತುಮಕೂರು ಜಿಲ್ಲೆಯಲ್ಲಿ ಪೂರ್ಣಗೊಳಿಸಿ ಪಿಯುಸಿ ನಂತರ ಬಿಇ ಪದವಿ ಅಧ್ಯಯನ ಮಾಡಲು ಚಿತ್ರದುರ್ಗದ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸೇರ್ಪಡೆಯಾದರು. ಈ ಸಂದರ್ಭದಲ್ಲೇ ಎಬಿವಿಪಿ ಸಂಘಟನೆಗೆ ಸೇರಿ ಸಂಘ ಪರಿಹಾರದ ಅಚ್ಚು ಮೆಚ್ಚಿನ ಆಜ್ಞಾ ಪಾಲಕನಾಗಿ ಸಾಕಷ್ಟು ಹೆಸರು ಮಾಡಿದರು. 12 ವರ್ಷಗಳಿಂದ ನಿರಂತರವಾಗಿ ಎಬಿವಿಪಿ ಸಂಘಟನೆ ಮಾಡಿರುವ ಅವರು 10 ವರ್ಷಗಳ ಕಾಲ ರಾಜ್ಯ ಮಟ್ಟದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಪ್ರಮುಖ್ ಕರ್ತವ್ಯವನ್ನು ನಿಷ್ಠೆಯಿಂದ ಪೂರ್ಣಗೊಳಿಸಿದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ಶಿರಾ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿತು. ಅಲ್ಲೂ ಉತ್ತಮ ಕೆಲಸ ನಿರ್ವಹಿಸಿದರು.
ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಎಂಟೆಕ್ ಶಿಕ್ಷಣ ಪೂರ್ಣಗೊಳಿಸಿ ಚಿತ್ರದುರ್ಗದ ಜೆಎಂಐಟಿ ಇಂಜಿನಿಯರ್ ಕಾಲೇಜಿನಲ್ಲೇ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ರಾಜಕೀಯ ಸೆಳೆತ ಹೆಚ್ಚಾಯಿತು.
ಬಿಜೆಪಿ ಯುವ ಘಟಕದ ಅಧ್ಯಕ್ಷ-
ಚಿತ್ರದುರ್ಗ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿ ಪಕ್ಷವನ್ನು ರಚನಾತ್ಮಕವಾಗಿ ಸಂಘಟಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಹನುಮಂತೇಗೌಡ ಸಾಕಷ್ಟು ಹೆಸರು ಮಾಡಿದ್ದಲ್ಲದೆ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವ ಕಾರ್ಯ ಮಾಡಿ ತೋರಿಸಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿದ್ಯಾರ್ಥಿ ಜೀವನದಿಂದ ಇಲ್ಲಿಯ ತನಕ ನೂರಾರು ಹೋರಾಟ ಕಟ್ಟಿ ತನ್ನ ಶಕ್ತಿ ಏನೆಂದು ತೋರಿಸಿರುವ ಹನುಮಂತೇಗೌಡ ಬಿಇ, ಎಂಟೆಕ್ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಪಡೆದು ಶಿಕ್ಷಣ ಪ್ರೇಮಿಯಾಗಿ ಹೊರಹೊಮ್ಮಿದ್ದಾರೆ.
ಹನುಮಂತೇಗೌಡರಲ್ಲಿರುವ ನಾಯಕತ್ವದ ಗುಣಗಳು ಎಲ್ಲರಿಗೂ ಇಷ್ಟ ಆಗಲಿದೆ. ಅವರೊಬ್ಬ ಅತ್ಯುತ್ತಮ ಸಂಘಟನಾ ಚತುರ, ಚುನಾವಣೆ ಎದುರಿಸಬಲ್ಲ ಛಾತಿ, ಸವಾಲುಗಳನ್ನು ಎದುರಿಸುವ ಧೈರ್ಯ, ಯುವಕರ ಕಣ್ಮಣಿ ಹಾಗೂ ಪಕ್ಷವನ್ನು ಮುನ್ನಡೆಸಲು ತನು ಮನ ಧನ ಅರ್ಪಿಸಲು ಹಿಂದೆ ಮುಂದೆ ನೋಡದ ವ್ಯಕ್ತಿತ್ವ ಗೌಡರಲ್ಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಟ್ಟಿಗೆ ಕೈಜೋಡಿಸಿ ದುಡಿಯುವ ಪ್ರಭಾವಿ ಯುವ ನಾಯಕ ಹನುಮಂತೇಗೌಡ ಎಂದರೆ ತಪ್ಪಾಗದು.
2023ರ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿ ಮಧುಗಿರಿಯಲ್ಲಿ ಶೂನ್ಯ ಮಟ್ಟದಲ್ಲಿದ್ದ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಹನುಮಂತೇಗೌಡರತ್ತ ಇತರೆ ಪಕ್ಷಗಳು ನೋಡುವಂತಾದವು.ತುಮಕೂರು ಜಿಲ್ಲೆಯನ್ನು ಇಂಚಿಂಚು ಅರ್ಥ ಮಾಡಿಕೊಂಡಿರುವ ಬಿ.ಸಿ.ಹನುಮಂತೇಗೌಡರು ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಮತ್ತು ಇಬ್ಬರು ಸಂಪುಟ ದರ್ಜೆಯ ಪ್ರಭಾವಿ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್ ಇವರನ್ನು ಎದುರಿಸಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಬಿಜೆಪಿ ಕಮಲವನ್ನು ಅರಳಿಸಬೇಕಿದೆ.
ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ. ಸಂಘಟನಾ ಚತುರ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ, ಕೆ.ಎನ್.ರಾಜಣ್ಣ ಮುಖ್ಯಮಂತ್ರಿಗಳ ಪರಮಾಪ್ತರು. ಇಂತಹ ಘಟಾನುಘಟಿಗಳ ವಿರುದ್ಧ ಹೋರಾಟ ಮಾಡಿ ಪಕ್ಷ ಸಂಘಟಿಸುವ ಜವಾಬ್ಧಾರಿ ಹನುಮಂತೇಗೌಡರ ಹೆಗಲಿಗೆ ಬಿದ್ದಿದೆ.
ಮಧುಗಿರಿ ಸಂಘಟನಾತ್ಮಕ ಜಿಲ್ಲೆ- ಕಂದಾಯ ವಿಭಾಗದಲ್ಲಿ ಮಧುಗಿರಿ ಜಿಲ್ಲೆಯಲ್ಲದಿದ್ದರೂ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಂಘಟನಾತ್ಮಕ ಜಿಲ್ಲೆಯಾಗಿದೆ.
ಮಧುಗಿರಿ ಜಿಲ್ಲೆಗೆ ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಈ ನಾಲ್ಕು ತಾಲೂಕುಗಳು ಚಿತ್ರದುರ್ಗ ಮತ್ತು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತಲಾ 2 ವಿಧಾನಸಭಾ ಕ್ಷೇತ್ರಗಳು ಹಂಚಿಕೆಯಾಗಿವೆ. ಚಿತ್ರದುರ್ಗ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸುವ ಹೊಣೆಗಾರಿಕೆಯೂ ಹನುಮಂತೇಗೌಡರ ಮೇಲಿದೆ ಎಂದರೆ ತಪ್ಪಾಗದು.
ರಾಜಕೀಯವಾಗಿ ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಶೂನ್ಯವಾಗಿದೆ. ಬಿಜೆಪಿ ಪಕ್ಷಕ್ಕೆ ಮೂಲ ಕಾರ್ಯಕರ್ತೆ ಇಲ್ಲ. ಇಂತಹ ತಾಲೂಕುಗಳಲ್ಲಿ ಬಿಜೆಪಿ ಕಟ್ಟುವುದೆಂದರೆ ಅದು ಸವಾಲಿನ ಕೆಲಸವೇ ಹೌದು. ಆದರೂ ಅವರ ಎದೆಗುಂದದೆ ಪಕ್ಷ ಸಂಘಟನೆಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.ಯುವ ನಾಯಕ ಹನುಮಂತೇಗೌಡರ ಮುಂದಿರುವ ಸವಾಲು ಎಂದರೆ ಮುಂಬರುವ ಲೋಕಸಭಾ ಚುನಾವಣೆ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ, ಜಿಪಂ, ತಾಪಂ ಚುನಾವಣೆಗಳನ್ನು ನಿಭಾಯಿಸುವ ಸವಾಲ್ ಇರುವುದರಿಂದ ಹೆಚ್ಚಿನ ಪರಿಶ್ರಮ ಹಾಕಬೇಕಿದೆ. ಇವರ ಸಂಘಟನೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಉಸಿರಾಗಿ ನಿಲ್ಲಬೇಕಿದೆ. ಬಿಜೆಪಿ ಪಕ್ಷಕ್ಕೆ ಹಿಂದಿನ ಖದರ್ ಇಲ್ಲ, ಹಲವು ಮುಖಂಡರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. 2024ರ ಚುನಾವಣೆಯಲ್ಲಿ ಅಂತಹ ಯಾವುದೇ ಶಕ್ತಿ ಇಲ್ಲ. ಒಬ್ಬೊಬ್ಬರಾಗಿ ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯುವ ನಾಯಕ ಹನುಮಂತೇಗೌಡರಿಗೆ ಬಿಜೆಪಿ ಪಕ್ಷ ಅಳೆದು ತೂಗಿ ಮಧುಗಿರಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅತ್ಯಂತ ಸಕ್ರಿಯವಾಗಿದ್ದರು. ಇಡೀ ಕ್ಷೇತ್ರಾದ್ಯಂತ ಚುರುಕಿನಿಂದ ಸಾಮಾಜಿಕ ಚಟುವಟಿಕೆಗಳ ಮಾಡಿ ಸಾಕಷ್ಟು ಗುರುತಿಸಿಕೊಂಡಿದ್ದರು.ತುಮಕೂರು ಮತ್ತು ಚಿತ್ರದುರ್ಗ ಎರಡು ಜಿಲ್ಲೆಗಳಲ್ಲಿ ಕುಂಚಿಟಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜಾತಿ ಸಮೀ ಕರಣದೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಸಜ್ಜಾಗಿ ಹನುಮಂತೇಗೌಡರಿಗೆ ಮಣೆ ಹಾಕಿದ್ದಾರೆ ಎನ್ನಲಾಗುತ್ತಿದೆ.ತುಮಕೂರು ಜಿಲ್ಲಾಧ್ಯಕ್ಷರಾಗಿರುವ ಎಚ್.ಎಸ್.ರವಿಶಂಕರ್ ಅವರನ್ನು ಬಿಜೆಪಿ ಮುಂದುವರೆಸಿದೆ. ಜಿಲ್ಲಾ ಅಧ್ಯಕ್ಷರಾಗಿರುವ ರವಿಶಂಕರ್ ಅವರು ಲಿಂಗಾಯಿತರಾಗಿದ್ದು ಅವರ ಮೇಲೂ ಹೆಚ್ಚಿನ ಹೊಣೆಗಾರಿಕೆ ಇದೆ. ಕಳೆದ ಒಂದು ವರ್ಷ, 9 ತಿಂಗಳಿಂದ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ರವಿಶಂಕರ್ ಮತ್ತು ಮಧುಗಿರಿ ಬಿ.ಸಿ.ಹನುಮಂತೇಗೌಡ ಇಬ್ಬರು ಜೋಡೆತ್ತುಗಳಂತೆ ದುಡಿದು ಚಿತ್ರದುರ್ಗ ಮತ್ತು ತಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕಾಗಿದೆ.