i
ದಲಿತ ರೈತ ರಾಮದಾಸ್ ಜಮೀನಿನಲ್ಲೇ ರಾಮಂದಿರಕ್ಕೆ ಅಡಿಗಲ್ಲು…
ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ಸಮೀಪದ ಹಾರೋಹಳ್ಳಿಯ ದಲಿತ ಕುಟುಂಬದ ರೈತ ರಾಮದಾಸ್ ಎಂಬುವವರ ಜಮೀನಿನಲ್ಲಿ ಸಿಕ್ಕಿದ್ದ ಶಿಲೆಯಿಂದಲೇ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಲಾಗಿತ್ತು. ಹೀಗಾಗಿ ರಾಮ ಶಿಲೆ ಸಿಕ್ಕ ಜಾಗದಲ್ಲೂ ಮಂದಿರ ನಿರ್ಮಾಣ ಮಾಡಬೇಕು ಎಂದು ಜಾಗದ ಮಾಲೀಕರು ಸೇರಿದಂತೆ ಊರಿನವರು ಚಿಂತನೆ ನಡೆಸಿ ರಾಮ ದೇಗುಲ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಮಹತ್ವದ ಕಾರ್ಯಕ್ಕಾಗಿ ದಲಿತ ರೈತ ರಾಮದಾಸ್ತಮ್ಮ ಜಾಗವನ್ನೇ ಬಿಟ್ಟುಕೊಟ್ಟಿದ್ದು ರಾಮ ಮಂದಿರ ನಿರ್ಮಾಣಕ್ಕೆ ಜ.22 ರಂದು ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ.ಪೂಜಾ ಕಾರ್ಯದಲ್ಲಿ ಜಮೀನಿನ ಮಾಲೀಕರಾದ ರಾಮದಾಸ್ ಹಾಗೂ ಕಲ್ಲು ಕಳುಹಿಸಿಕೊಟ್ಟ ಗುತ್ತಿಗೆದಾರ ಶ್ರೀನಿವಾಸ್, ಗ್ರಾಮಸ್ಥರು ಭಾಗಿಯಾಗಿದ್ದರು. ಸ್ಥಳದಲ್ಲಿ ಚಪ್ಪರ ಹಾಕಿ ಸಂಭ್ರಮದಿಂದ ಪೂಜೆಯನ್ನು ನೆರವೇರಿಸಲಾಯಿತು. ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕಲ್ಲು ಸಿಕ್ಕ ಪ್ರದೇಶ ಕಾಡಿನಂತೆ ಇತ್ತು. ಇದೀಗ ರಾಮಮಂದಿರಕ್ಕೆ ಗುದ್ದಲಿ ಪೂಜೆ ಮಾಡಲಾಗಿದ್ದು ಅಭಿವೃದ್ಧಿಗೆ ಮುನ್ನುಡಿ ಎಂದು ಬಣ್ಣಿಸಲಾಗುತ್ತಿದೆ.ಇದೇ ಸಂದರ್ಭದಲ್ಲಿ ಮೈಸೂರು ಸಂಸದ ಪ್ರತಾಪ್ಸಿಂಹ ಅವರು ಹಾರೋಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಬಂದಿದ್ದು ಅವರನ್ನು ಕಂಡೊಡನೆ ಗ್ರಾಮಸ್ಥರು ಆಕ್ರೋಶಗೊಂಡರಲ್ಲದೆ “ನೀವು ದಲಿತ ವಿರೋಧಿ”ಯಾಗಿದ್ದು, ನಿಮಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಇಲ್ಲ. ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕರಾದ ಜಿ.ಟಿ. ದೇವೇಗೌಡ ನೆರವೇರಿಸುತ್ತಾರೆ. ನಿಮ್ಮ ಅಗತ್ಯ ಇಲ್ಲ ಎಂದು ತಡೆದಿದ್ದಾರೆ. ಹೀಗಾಗಿ ಪೂರ್ಣಕುಂಭ ಸ್ವಾಗತ ಸೇರಿದಂತೆ ಕೆಲವು ಸಮಯ ಸ್ಥಳದಲ್ಲಿದ್ದ ಸಂಸದ ಪ್ರತಾಪ್ಸಿಂಹ ಬಳಿಕ ಅಲ್ಲಿಂದ ನಿರ್ಗಮಿಸಿದ್ದು ವಿಶೇಷವಾಗಿತ್ತು.ಹಾರೋಹಳ್ಳಿ ಗ್ರಾಮದ ಯಜಮಾನ ಚಲುವರಾಜು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ಪ್ರತಾಪ್ ಸಿಂಹ 10 ವರ್ಷದಿಂದ ಒಮ್ಮೆಯೂ ನಮ್ಮೂರಿಗೆ ಬಂದಿಲ್ಲ.ನಮ್ಮ ಸಮಸ್ಯೆ ಏನು ಅಂತ ಕೇಳಿಲ್ಲ. ಹೀಗಾಗಿ ಅವರು ಪೂಜೆಯಲ್ಲಿ ಭಾಗವಹಿಸುವುದು ನಮಗೆ ಇಷ್ಟ ಇಲ್ಲ. ಆದ್ದರಿಂದ ಅವರನ್ನು ವಾಪಸ್ ಕಳುಹಿಸಿದ್ದೇವೆ ಎಂದರು.ಮೈಸೂರು ಸಂಸದ ಪ್ರತಾಪ ಸಿಂಹ ಅವರು ಹಾರೋಹಳ್ಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಮಹಿಷ ದಸರಾ ವಿರೋಧ ಮಾಡಿದ್ದಕ್ಕೆ ಕಿಡಿಗೇಡಿಗಳು ಗಲಾಟೆ ಮಾಡಿದರು. ನಾನು ಈ ಕ್ಷಣಕ್ಕೂ ಮಹಿಷಾ ದಸರಾ ವಿರೋಧಿ. ಕಾಂಗ್ರೆಸ್ ಪುಡಾರಿಗಳು ತರಲೆ ಮಾಡಿದ್ದಾರೆ. ಮತ್ತೆ ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಆದರೆ, ಚಾಮುಂಡಿ ತಾಯಿಯ ಭಕ್ತರು ಕೋಟ್ಯಂತರ ಮಂದಿ ಇದ್ದಾರೆ. ನಾನು ಚಾಮುಂಡಿಯ ಭಕ್ತ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತದೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.