i
ಅಂದತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಶಾಕಿರಣ ಕಾರ್ಯಕ್ರಮ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಂದತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ “ಆಶಾಕಿರಣ” ವಿನೂತನ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಈಚೆಗೆ ಆಶಾ ಕಾರ್ಯಕರ್ತೆಯರಿಗೆ, ಸಮುದಾಯ ಆರೋಗ್ಯ ಅಧಿಕಾರಿಗಳಿಗೆ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಗೆ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ರಾಷ್ಟ್ರೀಯ ಅಂದತ್ವ ನಿವಾರಣ ಕಾರ್ಯಕ್ರಮದ ಅಡಿಯಲ್ಲಿ ವಿನೂತನವಾಗಿ ಪ್ರಾರಂಭಿಸಲಾಗುವ ಆಶಾಕಿರಣ ಕಾರ್ಯಕ್ರಮದ ಬಗ್ಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಮನೆಮನೆಗಳ ಭೇಟಿ ಸಮೀಕ್ಷೆ, ಅಂದತ್ವ ತಪಾಸಣೆ ನಡೆಸುವುದು, ಸಮೀಕ್ಷೆ ನಡೆಸಿದ ಮನೆಗಳಿಗೆ ಹಸಿರು ಹಳದಿ ಕೆಂಪು ಬಣ್ಣದ ಸ್ಟಿಕರ್ಗಳನ್ನು ಹಚ್ಚುವುದು ಸಮೀಕ್ಷೆ ನಡೆಸಿದ ಎಲ್ಲಾ ಮನೆಗಳಿಗ ಕುಟುಂಬದ ಸದಸ್ಯರ ಅಂಧತ್ವದ ಬಗ್ಗೆ ತಪಾಸಣೆ ನಡೆಸುವುದು ಮಾಹಿತಿ ಸಂಗ್ರಹಿಸುವುದು, ಸಮೀಕ್ಷೆಯ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಇಲ್ಲದಿರುವ ಮನೆಗಳಿಗೆ ಹಳದಿ ಬಣ್ಣದ ಸ್ಟಿಕರ್ ಹಚ್ಚುವುದು, ದೃಷ್ಟಿ ದೋಷ ಹೊಂದಿರುವ ಕುಟುಂಬದ ಸದಸ್ಯರ ಮನೆಗಳಿಗೆ ಕೆಂಪು ಬಣ್ಣದ ಸ್ಟಿಕರ್ ಹಚ್ಚುವುದು ಆಶಾಕಿರಣ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ರಾಷ್ಟ್ರೀಯ ಅಂದತ್ವ ನಿವಾರಣಾ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಈ ಸಮೀಕ್ಷೆಯ ಮೇಲುಸ್ತುವಾರಿ ಜವಾಬ್ದಾರಿ ಪಡೆಯಬೇಕು. ಅಂದತ್ವದ ಸಮೀಕ್ಷೆ ನಡೆಸಿ ವರದಿಗಳನ್ನು ಜಿಲ್ಲಾಮಟ್ಟಕ್ಕೆ ರವಾನಿಸಬೇಕು. ಪ್ರತಿ ಸದಸ್ಯರ ತಪಾಸಣೆ ನಡೆಸಿದಾಗ ಕಂಡುಬಂದಂತಹ ಮಾನದಂಡಗಳನ್ನ ದಾಖಲಿಸಲು ದಾಖಲಾತಿ ಪುಸ್ತಕಗಳನ್ನು ವಿತರಿಸಲಾಗಿದೆ, ಸಮೀಪ ದೃಷ್ಟಿ, ದೂರ ದೃಷ್ಟಿ ಕಂಡುಹಿಡಿಯಲು ಅಗತ್ಯ ಪರಿಕರಗಳನ್ನು ನೀಡಲಾಗಿದೆ ಎಂದರು.
ಗ್ರಾಮಮಟ್ಟದಲ್ಲಿ ಕಂಡುಬಂದಂತಹ ದೃಷ್ಟಿ ದೋಷದ ಕುಟುಂಬ ಸದಸ್ಯರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಈಗಾಗಲೇ ಗುರುತಿಸಲಾದ ನೇತ್ರಾಧಿಕಾರಿಗಳನ್ನು ಕರೆಸಿ ಕಣ್ಣಿನ ದೃಷ್ಟಿ ದೋಷಗಳನ್ನು ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕಗಳನ್ನು ಪೊರೆ ಬಂದವರಿಗೆ ಶಸ್ತ್ರಚಿಕಿತ್ಸಾ ಸೇವೆ ಒದಗಿಸುವುದು ಎಂದರು.
ಜಿಲ್ಲಾಸ್ಪತ್ರೆ ಕಣ್ಣಿನ ತಜ್ಞರು ಡಾ.ಬಿ.ಜಿ.ಪ್ರದೀಪ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕಣ್ಣುಗಳನ್ನು ಪರೀಕ್ಷಿಸುವ ವಿಧಾನವನ್ನು ಸಂಗ್ರಹಿಸಬೇಕಾದ ದತ್ತಾಂಶಗಳ ವಿವರಗಳನ್ನು ತುಂಬಬೇಕಾದ ಅಗತ್ಯ ಮಾಹಿತಿಗಳನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಮಟ್ಟದ ಸಿಬ್ಬಂದಿಗಳಿಗೆ ಆಶಾ ಕಿರಣ ಯೋಜನೆ ಅಡಿ ಕಿಟ್ಗಳನ್ನ ಡಿಹೆಚ್ಒ ಡಾ.ರೇಣುಪ್ರಸಾದ್ ವಿತರಿಸಿದರು. ಕಾರ್ಯಕ್ರಮದಲ್ಲಿ ನೇತ್ರಾಧಿಕಾರಿಗಳಾದ ಕೆ.ಸಿ ರಾಮು, ರಜಿನಿ, ಬರ್ಕತ್ ಅಲಿ ಇದ್ದರು.