i
ಕೋಣ ಕೊಂದ ಚಿರತೆ, ಚಿರತೆ ಹಾವಳಿಗೆ ಕಂಗಾಲಾದ ರೈತರು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ಗಡಿಭಾಗದಲ್ಲಿರುವ ಮೊಳಕಾಲ್ಮೂರು ವಿಧಾಸಭಾ ವ್ಯಾಪ್ತಿಯ ದೊಡ್ಡಬಾದಿಹಳ್ಳಿ ಸುತ್ತಮುತ್ತ ಚಿರತೆಯೊಂದು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸಂಜೆ ವೇಳೆಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳುವ ಘಟನೆ ನಿರಂತರವಾಗಿ ನಡೆಯುತ್ತಿದೆ. ದೊಡ್ಡಬಾದಿಹಳ್ಳಿ ಗ್ರಾಮದ ಮೈಲಾರಪ್ಪ ಎಂಬುವವರ ತೋಟಕ್ಕೆ ನುಗ್ಗಿದ ಚಿರತೆ ಕಟ್ಟಿಹಾಕಿದ್ದ ಕೋಣವನ್ನು ಎಳೆದೊಯ್ದು ಅರಣ್ಯಪ್ರದೇಶದಲ್ಲಿ ತಿಂದುಹಾಕಿದೆ. ರೈತ ಮೈಲಾರಪ್ಪ ಕೋಣ ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಸ್ವಲ್ಪದೂರದಲ್ಲಿ ಕೋಣ ಚಿರತೆಗೆ ಬಲಿಯಾಗಿರುವುದು ಕಂಡುಬಂದಿದೆ. ಗ್ರಾಮದ ಕೆಲವೇ ಮೀಟರಗಳ ದೂರ ಆಂಧ್ರಪ್ರದೇಶದ ಗಡಿ ಇದ್ದು ಇಲ್ಲಿಂದಲೂ ಚಿರತೆ ಆಗಾಗಿ ಇಲ್ಲಿಗೆ ಆಗಮಿಸಿ ಕುರಿ, ಮೇಕೆ, ನಾಯಿಗಳ ಮೇಲೆ ದಾಳಿ ನಡೆಸುತ್ತಿರುವುದು ಸ್ವಾಭಾವಿಕವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಬಹುಗುಣರವರನ್ನು ಪ್ರಶ್ನಿಸಿದಾಗ ದೊಡ್ಡಬಾದಿಹಳ್ಳಿಗೆ ಹೊಂದಿಕೊಂಡಿರುವಗುಡ್ಡದಲ್ಲಿ ಚಿರತೆ ಇದೆ. ಚಿರತೆ ಆ ಭಾಗದ ಸುತ್ತಮುತ್ತ ಸಂಜೆ ವೇಳೆ ಓಡಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ, ಆಗಾಗ ಪ್ರಾಣಿಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಭಯವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು ಚಿರತೆಯನ್ನು ಜೀವಸಹಿತ ಸೆರೆಹಿಡಿಯುವ ಬಗ್ಗೆ ಪ್ರಯತ್ನ ಮುಂದುವರೆದಿದೆ ಎಂದರು.