i
ಜೈಲಿನ ಗ್ರಂಥಾಲಯದಲ್ಲಿ ಗಾಂಜಾ, ಅಧೀಕ್ಷಕಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಿಲ್ಲಾ ಕಾರಾಗೃಹದಲ್ಲಿನ ಗ್ರಂಥಾಲಯದಲ್ಲಿರುವ ಪುಸ್ತಕಗಳಲ್ಲಿ ನಿಷೇಧಿತ ವಸ್ತುವಾದ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬುದನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ಪತ್ತೆ ಹಚ್ಚಿದೆ.
ಜಿಲ್ಲಾ ಕಾರಾಗೃಹದಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ನಡೆದಿದ್ದ ವಿಚಾರಣಾಧೀನ ಕೈದಿಗಳ ಮಧ್ಯೆಯ ಮಾತಿನ ಚಕಮಕಿ, ಹೊಡೆದಾಟ ಮತ್ತು ಗುಂಪು ಘರ್ಷಣೆ ಪ್ರಕರಣದ ಕುರಿತು ಮುಚ್ಚಿದ ಲಕೋಟೆಯಲ್ಲಿ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಡಿಜಿಪಿ ಅವರಿಗೆ 2024ರ ಫೆ.3ರಂದು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಗಾಂಜಾ ಸೇರಿದಂತೆ ಮತ್ತಿತರ ಸಂಗತಿಗಳ ಕುರಿತು ವರದಿಯಲ್ಲಿ ಹಲವು ಮಹತ್ವದ ಅಂಶಗಳಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಭಾಗೀರಥಿ ಮತ್ತಿತರರ ವಿರುದ್ಧ ಎಫ್ಐಆರ್ದಾಖಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿಯು ಗೃಹ ಸಚಿವ ಡಾ ಜಿ ಪರಮೇಶ್ವರ್ ಮೇಲೆ ಮುಗಿಬಿದ್ದಿತ್ತು. ಇದರ ನಡುವೆಯೇ ದಾವಣಗೆರೆ ಜಿಲ್ಲೆಯ ಕಾರಾಗೃಹದ ಗ್ರಂಥಾಲಯದಲ್ಲಿಯೇ ಗಾಂಜಾ ಸಿಗುತ್ತಿತ್ತು ಎಂದು ಸಲ್ಲಿಕೆಯಾಗಿರುವ ತನಿಖಾ ವರದಿಯು ಮುನ್ನೆಲೆಗೆ ಬಂದಿದೆ
ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಹಲವು ಬಾರಿ ಗುಂಪು ಘರ್ಷಣೆಗಳಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ಅವರು ಈ ಬಗ್ಗೆ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.
ತನಿಖಾ ವರದಿ ಆಧರಿಸಿ ದಾವಣಗೆರೆ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಭಾಗೀರಥಿ ಮತ್ತಿತರ ವಿರುದ್ಧ ಐಪಿಸಿ ಮತ್ತು ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಹಾಗೂ ಕಲಂ 42 ಹಾಗೂ ಎನ್ಡಿಪಿಎಸ್ಕಾಯ್ದೆ 20(ಬಿ) (ii) ಎನ್ಡಿಪಿಎಸ್ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.