i
ಕೃಷಿಕರ ಕಪ್ಪು ಚಿನ್ನ “ಎರೆಹುಳು ಗೊಬ್ಬರ”– ರಜನೀಕಾಂತ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿಕರ ಕಪ್ಪು ಚಿನ್ನ ಎರೆಹುಳು ಗೊಬ್ಬರ ಉಪಯೋಗದಿಂದ ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ರೈತರಿಗೆ “ಎರೆಹುಳು ಗೊಬ್ಬರ ಉತ್ಪಾದನಾ ತಾಂತ್ರಿಕತೆ” ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರೆಹುಳುವಿನ ಪಾತ್ರ ಕೃಷಿಯಲ್ಲಿ ಅಪಾರವಾದದ್ದು ಅಲ್ಲದೆ ಲಾಭದಾಯಕವಾದುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಎರೆಹುಳುವನ್ನು ಭೂಮಿ ಕರುಳು, ರೈತ ಬಂಧು, ರೈತ ಮಿತ್ರ, ಮತ್ತು ನಿಸರ್ಗದ ನೇಗಿಲು ಎಂದು ಕರೆಯುತ್ತಾರೆ. ಎರೆಹುಳು ಭೂಮಿಯ ಮೇಲಿನ ಕಸ, ಕಡ್ಡಿ ಎಲೆ ಮತ್ತು ಇತರ ಪದಾರ್ಥಗಳನ್ನು ಬಳಸಿ ಹಿಕ್ಕೆಯನ್ನು ಹೊರಹಾಕುತ್ತದೆ. ಇದನ್ನು “ವರ್ಮಿಕಾಂಪೋಸ್ಟ್ಅಥವಾ ಎರೆಗೊಬ್ಬರ” ಎಂದು ಕರೆಯುತ್ತಾರೆ. ಈ ಎರೆಗೊಬ್ಬರದ ಗುಣಮಟ್ಟ ನಾವು ಬಳಸುವ ಕಚ್ಚಾವಸ್ತುವಿನ ಮೇಲೆ ಅವಲಂಬಿಸಿರುತ್ತದೆ ಎಂದರು.
ಎರೆಗೊಬ್ಬರದಲ್ಲಿ ಸಾವಯವ ಅಂಶ ಹೆಚ್ಚಾಗಿರುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸಸ್ಯ ಪ್ರಚೋದಕಗಳು ಇರುವುದರಿಂದ ಸಸ್ಯಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಎರೆಗೊಬ್ಬರ ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳನ್ನು ಉತ್ತಮಪಡಿಸುತ್ತದೆ. ಎರೆಗೊಬ್ಬರದ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಾಣುಗಳ ಚಟುವಟಿಕೆ ಹೆಚ್ಚುತ್ತದೆ. ಮಣ್ಣಿನಕೊಚ್ಚಣೆಯನ್ನು ಮತ್ತು ನೀರಿನ ಹರಿಯುವಿಕೆಯನ್ನು ಕಡಿಮೆ ಮಾಡುತ್ತದೆ ಎಂದರು.
ಹಿರಿಯೂರು ತಾಲ್ಲೂಕಿನ ಗುಳಗೊಂಡನಹಳ್ಳಿ ಗ್ರಾಮದ ಎರೆಹುಳು ಗೊಬ್ಬರ ಉತ್ಪಾದನಾ ಪ್ರಗತಿಪರ ಕೃಷಿಕ ನಾಗರಾಜಪ್ಪ ಮಾತನಾಡಿ, ಸಾವಯವ ಗ್ರಾಮ ಯೋಜನೆಯಡಿ ಹತ್ತು ವರ್ಷದ ಹಿಂದೆ ಕೃಷಿ ಇಲಾಖೆಯಿಂದ ತರಬೇತಿ ಪಡೆದು ಸಹಾಯಧನದಡಿ ನಿರ್ಮಿಸಿಕೊಂಡು ಕ್ರಮೇಣ 7 ಘಟಕಗಳನ್ನು ನಿರ್ಮಿಸಿಕೊಂಡ ತಮ್ಮ ಎರೆಹುಳು ಘಟಕದಿಂದ ಪ್ರತಿ ವರ್ಷವೂ ಎರೆಹುಳು ಮತ್ತು ಎರೆಗೊಬ್ಬರವನ್ನು ಮಾರಾಟ ಮಾಡಿ ರೂ.5 ರಿಂದ 6 ಲಕ್ಷ ಲಾಭ ಗಳಿಸಿ ಆರ್ಥಿಕವಾಗಿ ಸಧೃಡನಾಗಲು ಸಹಕರಿಯಾಗಿದೆಂದರು.
ಪ್ರಸಕ್ತ ಮಳೆ ಕಡಿಮೆಯಾದರು ಎರೆಗೊಬ್ಬರ ಬಳಕೆಯಿಂದ 1 ಎಕರೆಗೆ 20 ಕ್ವಿಂಟಾಲ್ ಮುಸುಕಿನಜೋಳ ಬೆಳೆದಿರುವುದಾಗಿ ತಿಳಿಸುತ್ತಾ ಎರೆಗೊಬ್ಬರ ತಯಾರಿಸುವ ವಿಧಾನವನ್ನು ಹಾಜರಿದ್ದ ರೈತರಿಗೆ ಮನವರಿಕೆ ಮಾಡಿದರು. ಉತ್ತಮ ಎರೆಹುಳು, ಎರೆಗೊಬ್ಬರ ಖರೀದಿ ಹಾಗೂ ಎರೆಹುಳು ಗೊಬ್ಬರದ ತಾಂತ್ರಿಕತೆ ತಿಳಿಯಲು ಆಸಕ್ತ ರೈತರು ನಾಗರಾಜಪ್ಪ ಇವರ ದೂರವಾಣಿ ಸಂಖ್ಯೆಗೆ 9964649212 ಕರೆ ಮಾಡಬಹುದು. ಈ ಹಿಂದೆ ಗುಳಗೊಂಡನಹಳ್ಳಿ ಗ್ರಾಮದಲ್ಲಿ ಸಾವಯವ ಗ್ರಾಮ ಯೋಜನೆಯಡಿ ಕೃಷಿ ಇಲಾಖೆಯಿಂದ ಸಾವಯವ ಕೃಷಿಯನ್ನು ಉತ್ತೇಜಿಸಲು ಕೈಗೊಂಡಕ್ರಮ, ಸಾವಯವ ಕೃಷಿಯ ಅಗತ್ಯತೆ ಮತ್ತು ಮಹತ್ವದ ಕುರಿತು ಲೊಕೇಶ್ರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ರುದ್ರಮುನಿ ಮಾತನಾಡಿ, ಎರೆಹುಳುಗಳು ಮೃದು ಶರೀರದ ಪ್ರಾಣಿಗಳಾಗಿದ್ದು, ಅವುಗಳ ಶರೀರದಲ್ಲಿ ಪಿಷ್ಟದ ಅಂಶ ಹೆಚ್ಚಾಗಿರುವ ಕಾರಣ ಅವುಗಳಿಗೆ ಶತ್ರುಗಳ ಬಾಧೆ ಅತಿಯಾಗಿರುವುದು. ಈ ಕಾರಣದಿಂದಾಗಿ ಸುಲಭವಾಗಿ ದೊರಕುವಂತಹ ವಸ್ತುಗಳಾದ ಕಲ್ಲಿನ ಚಪ್ಪಡಿ, ಇಟ್ಟಿಗೆ, ಸಿಮೆಂಟ್ ಮೊದಲಾದವುಗಳನ್ನು ಬಳಸಿಕೊಂಡು ತೊಟ್ಟಿಗಳನ್ನು ಕಟ್ಟಿದರೆ ಒಳಿತು. ಈ ತೊಟ್ಟಿಗಳ ಉದ್ದ ಅನುಕೂಲಕ್ಕೆ ತಕ್ಕವಾಗಿರಬಹುದು. ಅಗಲ ಮೂರರಿಂದ ನಾಲ್ಕು ಅಡಿ ಮತ್ತು ಎತ್ತರ (ಆಳ) ಮೂರು ಅಡಿಗಿಂತ ಹೆಚ್ಚಿರಬಾರದು. ತೊಟ್ಟಿಗಳು ಭೂಮಿಯ ಮೇಲಿದ್ದಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗುವುದು ಕಸದಲ್ಲಿ ಗಾಳಿಯಾಡುವುದಕ್ಕೂ ಮತ್ತು ತೇವಾಂಶವನ್ನು ಸರಿಯಾಗಿ ಕಾಪಾಡಿಕೊಳ್ಳುವುದಕ್ಕೂ ಇಂತಹ ತೊಟ್ಟಿಗಳ ಬಳಕೆ ಒಳ್ಳೆಯದು. ಒಂದು ಕೆ.ಜಿ. ಹುಳುಗಳು ಒಂದು ದಿನಕ್ಕೆ ಸುಮಾರು 4 ಕೆ.ಜಿ. ಸಾವಯವ ಪದಾರ್ಥವನು ತಿನ್ನುತ್ತವೆ. ಅಂದರೆ 150 ಕೆ.ಜಿಯಷ್ಟು ಗೊಬ್ಬರ ದೊರೆಯುತ್ತದೆ. ಕೃಷಿ ತ್ಯಾಜ್ಯ ಪೂರ್ತಿಯಾಗಿ ಎರೆಗೊಬ್ಬರವಾಗಿ ಪರಿವರ್ತನೆಯಾದ ಮೇಲೆ ಅದನ್ನು ನೆಲದ ಮೇಲೆ ಹಾಕಿ ಗೋಪುರದ ಆಕಾರದಲ್ಲಿ ಹಿಕ್ಕೆಗಳನ್ನು ಹಾಕಬೇಕು. ಈ ರೀತಿ ಗೋಪುರಗಳನ್ನು ಒಂದುರಾತ್ರಿ ಬಿಟ್ಟಲ್ಲಿ ಹುಳುಗಳೆಲ್ಲವೂ ತಳಕ್ಕೆ ಹೋಗಿ ಸೇರುವವು. ಅನಂತರ ಬೇರ್ಪಡಿಸಿದ ಹುಳುಗಳನ್ನು ಹೊಸದಾಗಿ ತಯಾರಿಸಿದ ಮಿಶ್ರಣದಲ್ಲಿ ಬಿಡಬೇಕು. ಎರೆಗೊಬ್ಬರವನ್ನು ನೆರಳಿನಲ್ಲಿ ಒಣಗಿಸಿದ ಮೇಲೆ 3 ಮಿ.ಮೀ. ರಂದ್ರವಿರುವ ಜರಡಿಯಿಂದ ಬೇರ್ಪಡಿಸಬೇಕೆಂದರು.
ತದನಂತರ ರೈತರೊಂದಿಗೆ ಕೃಷಿ ವಿಜ್ಞಾನ ಕೇಂದ್ರದ ಎರೆಹುಳು ಪ್ರಾತ್ಯಕ್ಷಿಕೆ ಘಟಕಕ್ಕೆ ಭೇಟಿ ನೀಡಿ ಎರೆಗೊಬ್ಬರ ತಯಾರಿಸುವ ವಿಧಾನ ಮತ್ತು ಮುಂಜಾಗೃತೆ ಕ್ರಮಗಳನ್ನು ವಿವರಿಸಿದರು. ಎರೆಹುಳು ಸಾಕುವ ತೊಟ್ಟಿಯಲ್ಲಿ ನೀರಿನಂಶ ಶೇ. 40-50ರವರೆಗೆ ಇರುವಂತೆ ನೋಡಿಕೊಳ್ಳಬೇಕು. ಗೆದ್ದಲ ಹುಳು, ಇರುವ, ಜರಿ, ಇಲಿ, ಹೆಗ್ಗಣ, ಕಪ್ಪೆ ಬೆಕ್ಕು ಹಕ್ಕಿ ಮುಂತಾದ ಪ್ರಾಣಿಗಳು ಸೇರದಂತೆ ಎಚ್ಚರವಹಿಸಬೇಕು ಹಾಗೂ ಆಹಾರವೆಲ್ಲ ಖಾಲಿಯಾದ ತಕ್ಷಣ ಅಂದರೆ, ಬರೀ ಹಿಕ್ಕೆ ತುಂಬಿದಾಗ ತಕ್ಷಣ ಹುಳು ಬೇರ್ಪಡಿಸಬೇಕು. ಇಲ್ಲದಿದ್ದರೆ ಅವು ಕ್ರಮೇಣ ಆಹಾರವಿಲ್ಲದೆ ಸಾಯುತ್ತವೆಂದರು.
ಕೃಷಿ ಅಧಿಕಾರಿ ಪವಿತ್ರಾ ಎಂ. ಜೆ. ತರಬೇತಿಗೆ ರೈತರ ನೋಂದಾವಣಿ ಮಾಡಿದರು. ಜಿಲ್ಲಾ ಕೃಷಿ ತರಬೇತಿಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) ಉಷಾರಾಣಿ ಎಂ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ರೈತರು ಹಾಜರಿದ್ದರು.