i
ಕ್ಯಾನ್ಸರ್ ಬಾರದಂತೆ ಜಾಗೃತಿ ಅಗತ್ಯ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರೋಗವನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಕೊಡುವುದರ ಮೂಲಕ ರೋಗ ಹೆಚ್ಚು ಬಾಧಿಸದಂತೆ ನೊಡಿಕೊಳ್ಳಬೇಕು. ರೋಗ ಬಂದ ಮೇಲೆ ಚಿಕಿತ್ಸೆ ಅನಿವಾರ್ಯ. ಆದರೆ ಆರಂಭಿಕ ಹಂತದಲಿ ಅದನ್ನು ಪತ್ತೆ ಮಾಡಿದರೆ ಚಿಕಿತ್ಸೆ ಹೆಚ್ಚು ಅವಶ್ಯವಿರುವುದಿಲ್ಲ ಎಂದು ಎಸ್ ಎಂಎಸ್ ಎಸ್ ಸೊಸೈಟಿಯ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಹೇಳಿದರು.
ಅವರು ಶಿವಮೊಗ್ಗ ಮಲ್ಟಿಪರ್ಪಸ್ ಸೊಸೈಟಿ ಮತ್ತು ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಆಶ್ರಯದಲ್ಲಿ ಇಲ್ಲಿನ ಸೇಕ್ರೇಡ್ ಹಾರ್ಟ್ ಚರ್ಚ್ ಸ್ನೇಹ ಸದನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ್ವ ಕ್ಯಾನ್ಸರ್ ದಿನಾಚರಣೆ, ಜಾಗೃತಿ ಜಾಥಾ ಮತು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಕುಡಿತ, ಧೂಮಪಾನ ಮೊದಲಾದ ದುಶ್ಚ್ಚಟಗಳಿಂದ ದೂರವಿರಬೇಕು. ಅಂದಂದಿನ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ರೂಢಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ತೀರಾ ಅಗತ್ಯವಿದೆ. ಶಿವಮೊಗ್ಗ ಮಲ್ಟಿಪರ್ಪಸ್ ಸೊಸೈಟಿಯು ಕ್ಯಾನ್ಸರ್ಪೀಡಿತರ ಸಂಬಂಧ ವಿಶೇಷ ಅರಿವನ್ನು ಮೂಢಿಸುತ್ತಿದೆ. ಪ್ರತಿ ವರ್ಷ ಅರಿವು ಕಾರ್ಯಾಗಾರ ಮಾಡುತ್ತಿದೆ. ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ಅಸ್ಪತ್ರೆಯವರ ಸಹಕಾರದಲ್ಲಿ ಚಿಕಿತ್ಸೆ ಕೊಡಿಸುವುದರ ಜೊತೆಗೆ ಆರ್ಥಿಕವಾಗಿಯೂ ನೆರವಾಗುತ್ತಿದೆ. ಇದಕ್ಕಾಗಿ ಕೆಲವು ದಾನಿಗಳು ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಹಳ್ಳಿಗಳಲ್ಲಿ ಹೆಚ್ಚಿನ ಮಾಹಿತಿ ಶಿಬಿರ ನಡೆಯಬೇಕು. ಸಂಸ್ಥೆ ಇದನ್ನು ಮಾಡುತ್ತಿದೆ. ಹೆಚ್ಚೆಚ್ಚು ಜನರಿಗೆ ಮಾಹಿತಿ ಸಿಕ್ಕರೆ ಅರಿವು ಬೆಳೆಯುವ ಮೂಲಕ ಕ್ಯಾನ್ಸರ್ ರೋಗದಿಂದ ದೂರವಿರಲು ಸಹಾಯಕವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಡಿಎಚ್ ಓ ರಾಜೇಶ್ ಸುರಗೀಹಳ್ಳಿ, ಮೆಗ್ಗಾನ್ ಶಸ್ತ್ರ ಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಮೆಗ್ಗಾನ್ ವೈದ್ಯಕೀಯ ಅಧೀಕ್ಷಕ ಡಾ.ಟಿ. ಡಿ. ತಿಮ್ಮಪ್ಪ, ನಂಜಪ್ಪ ಲೈಫ್ ಕೇರ್ನ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರವಿಂದನ್, ನಂಜಪ್ಪದ ಮೆಡಿಕಲ್ ಆಂಕೊಲಜಿಸ್ಟ್ ಡಾ.ನಮ್ರತಾ ಉಡುಪ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಸಾವಿರಾರು ಸಂಖ್ಯೆಯ ಮಹಿಳಾ ಕಾಯಕರ್ತೆಯರು, ಆಸ್ಪತ್ರೆಯ ನರ್ಸ್ಗಳು, ಸಿಬ್ಬಂದಿಗಳು, ಸಾರ್ವಜನಿಕರು ಮತ್ತು ನರ್ಸಿಂಗ್ ವಿದ್ಯಾಥಿಗಳು ಜಾಥಾ ನಡೆಸಿದರು.