i
ಮಾಲೀಕನ ಕುರ್ಚಿಯಲ್ಲಿ ಕಾರ್ಮಿಕ ಕುಳಿತಿದ್ದಕ್ಕೆ ಕೊಲೆ…
ಚಂದ್ರವಳ್ಳಿ ನ್ಯೂಸ್, ಮಡಿಕೇರಿ:
ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾದ ಧಾರುಣ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಚಿಕ್ಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದ್ದು, ಸ್ಕೂಟರ್ ಶೋರೂಂ ಮಾಲೀಕನೊಬ್ಬ ತನ್ನ ಸ್ಕೂಟರ್ ರಿಪೇರಿ ಕೆಲಸಕ್ಕೆ ಬಂದಿದ್ದವನನ್ನು ಕೊಲೆ ಮಾಡಿದ್ದಾನೆ. ಸೋಮವಾರ ತಡರಾತ್ರಿ ಈ ಘಟನೆ ವರದಿಯಾಗಿದ್ದು, ಆರೋಪಿ ಮಾಲೀಕನನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕುಶಾಲನಗರದಲ್ಲಿರುವ ಕೊಡಗಿನ ಮೋಟಾರ್ಸ್ ಶೋರೂಂ ದುರಸ್ತಿ ಕಾರ್ಯಕ್ಕೆಂದು ಬಂದಿದ್ದ ಮಡಿಕೇರಿ ನಿವಾಸಿ ಸಜೀದ್(೨೩) ಎಂಬುವರನ್ನು ಶೋರೂಂ ಮಾಲೀಕ ಶ್ರೀನಿಧಿ ಕೊಲೆ ಮಾಡಿದ್ದಾರೆ. ಸಣ್ಣಪುಟ್ಟ ಮನಸ್ತಾಪವೇ ಹಿಂಸಾಚಾರಕ್ಕೆ ತಿರುಗಿದ್ದು ಕೊಲೆಗೆ ಕಾರಣ. ಶೋರೂಮ್ನ ಕ್ಯಾಶ್ ಕೌಂಟರ್ನಲ್ಲಿ ಇರಿಸಲಾಗಿದ್ದ ಆರೋಪಿ ಮಾಲೀಕ ಶ್ರೀನಿಧಿ ಅವರ ಕುರ್ಚಿಯ ಮೇಲೆ ಕೊಲೆಗೀಡಾದ ಸಜೀದ್ ಕುಳಿತಿದ್ದರು. ಸಜೀದ್ಗೆ ಕುರ್ಚಿ ಖಾಲಿ ಮಾಡುವಂತೆ ಶ್ರೀನಿಧಿ ಒತ್ತಾಯಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ದೊಡ್ಡದಾಗಿದ್ದು, ಶ್ರೀನಿಧಿ ಸಜೀದ್ನ ಎದೆಗೆ ಹರಿತವಾದ ಕಟ್ಟರ್ನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಜಿದ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಆಗಲೇ ಆತ ಸಾವಿಗೀಡಾಗಿದ್ದನು.