i
ಹೆಣ್ಣು ಮಕ್ಕಳ ಸಾಮಾಜಿಕ ಸ್ಥಾನಮಾನ ಬಲಪಡಿಸಿ- ಡಾ.ರೇಣುಪ್ರಸಾದ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೆಣ್ಣು ಮಕ್ಕಳ ಸಾಮಾಜಿಕ ಸ್ಥಾನಮಾನ ಬಲಪಡಿಸಿ, ಲಿಂಗ ಅನುಪಾತದ ಅಸಮತೋಲನ ಸರಿದೂಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಕರೆ ನೀಡಿದರು.
ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಿಗೆ ಗರ್ಭ ಪೂರ್ವ ಪ್ರಸವ ಪೂರ್ವ ಲಿಂಗ ಪತ್ತೆ ಅನುಶಾಸನ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದಲ್ಲಿ ಆರೋಗ್ಯ, ಮಾಹಿತಿ ಶಿಕ್ಷಣ ಬಲಪಡಿಸಿ ಸರ್ಕಾರದ ಯೋಜನೆಗಳು ಬೇಟಿ ಬಜಾವ್, ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ, ಭ್ರೂಣ ಲಿಂಗಪತ್ತೆ ಕಾಯ್ದೆಗಳ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಲಿಂಗಾನುಪಾತ 2011ರ ಜನಗಣತಿಯಂತೆ 1000 ಗಂಡು ಮಕ್ಕಳಿಗೆ 949 ಹೆಣ್ಣುಮಕ್ಕಳ ಜನನವಾಗುತ್ತಿದೆ. ಮಹಿಳೆಯರ ಇಳಿಮುಖಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಬಾಲ್ಯ ವಿವಾಹ, ಚಿಕ್ಕ ವಯಸ್ಸಿನಲ್ಲಿ ಮಹಿಳೆ ಗರ್ಭಿಣಿಯಾಗಿ ಹೆರಿಗೆ ಸಂದರ್ಭದಲ್ಲಿ ಮರಣವಾಗುವ ಸಂಭವ ಜಾಸ್ತಿ, ಗಂಡುಮಗು ಬೇಕೆನ್ನುವ ಹಂಬಲ, ಪೋಷಕರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ಅಲಕ್ಷತೆ, ಹೆಣ್ಣುಮಕ್ಕಳ ಅನಕ್ಷರತೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್.ಗೌರಮ್ಮ ಮಾತನಾಡಿ, ಗರ್ಭಿಣಿ ಆರೈಕೆಯ ಬಗ್ಗೆ ತಿಳಿಸುತ್ತಾ, ಮುಂಚೂಣಿ ಕಾರ್ಯಕರ್ತರು, ಗರ್ಭಿಣಿ ನೋಂದಾವಣಿ ಸಮಯದಲ್ಲೇ ಆಪ್ತ ಸಮಾಲೋಚನೆ ನಡೆಸಿ, ಭ್ರೂಣ ಲಿಂಗ ಪತ್ತೆ ಮಾಡಿಸಬಹುದಾದ ಗರ್ಭಿಣಿಯರನ್ನು ಗುರುತಿಸಬಹುದು. ಸಾಮಾನ್ಯವಾಗಿ ಮೊದಲನೇ ಹೆರಿಗೆಯವರು ಗಂಡಾಗಲಿ ಹೆಣ್ಣಾಗಲಿ ಮಕ್ಕಳು ಬೇಕು ಎಂಬ ಬಯಕೆಯನ್ನು ಹೊಂದಿರುತ್ತಾರೆ. ಎರಡನೇ ಮೂರನೇ ಗರ್ಭಧರಿಸಿರುವರಲ್ಲಿ ಗಂಡು ಮಗು ಬೇಕು ಎಂಬ ಹಂಬಲವಿರುತ್ತದೆ. ಅಂತಹ ಅರ್ಹ ದಂಪತಿಗಳಿಗೆ ಸಮಾಲೋಚನೆ ಮೂಲಕ ಭ್ರೂಣ ಲಿಂಗ ಪತ್ತೆಯನ್ನು ಕೆಳಹಂತದಲ್ಲೇ ತಪ್ಪಿಸಬಹುದು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಅಧಿಕಾರಿ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಲಿಂಗ ಪತ್ತೆ ಕಾಯ್ದೆಯ ಬಗ್ಗೆ ತಿಳಿಸಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುವಾಗ ಇರುವ ಎ ದಿಂದ ಎಫ್ ನಮೂನೆಗಳು ಸ್ಕ್ಯಾನ್ ಸೆಂಟರ್ನಲ್ಲಿ ನಿರ್ವಹಿಸಬೇಕಾದ ದಾಖಲಾತಿ, ವಿಧಿಸಬಹುದಾದ ದಂಡ ಮತ್ತು ಶಿಕ್ಷೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ವಿಷಯ ನಿರ್ವಾಹಕ ಹೆಚ್.ಬಿ.ಪೂಜಾರ್, ಸ್ತ್ರೀ ರೋಗ ತಜ್ಞರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇದ್ದರು.