![](https://www.chandravallinews.com/wp-content/uploads/2024/02/WhatsApp-Image-2024-02-12-at-10.13.35-PM-2.jpeg)
i
ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಕರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಭಾರತದಲ್ಲಿ ಶೇಕಡಾ ೮೦ ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ. ಏಕ ಬೆಳೆ ಬೆಳೆಯುವುದರಿಂದ ಕಡಿಮೆ ಆದಾಯ ಬರುತ್ತದೆ. ಆದ್ದರಿಂದ ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ತಮ್ಮ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ್ ಹೇಳಿದರು.
ಸೋಮವಾರ ಕೃಷಿ ವಿವಿಯಲ್ಲಿ ಆರಂಭವಾದ ಐದು ದಿನಗಳ ಕಾಲದ ಸಮಗ್ರ ಕೃಷಿ ಪದ್ದತಿಗಳು ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ ಸಮಗ್ರ ಕೃಷಿ ಪದ್ದತಿಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿ, ದೇಶ ಅಭಿವೃದ್ಧಿಯಾಗಿ ಬೇಕಾದರೆ ಮೊದಲು ರೈತರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಇರುವ ಸಂಪನ್ಮೂಲಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಸಮಗ್ರ ಕೃಷಿ ಪದ್ದತಿಯು ಮುಖ್ಯ ಪಾತ್ರ ವಹಿಸುತ್ತದೆ. ಕೃಷಿ ಮತ್ತು ಪರಿಸರವು ಜೊತೆಜೊತೆಯಲ್ಲಿ ಅಭಿವೃದ್ಧಿ ಹೊಂದಬೇಕು. ಆದ್ದರಿಂದ ರೈತರು ಪರಿಸರ ಸಂರಕ್ಷಣೆಗೆ ಹೆಚ್ಚಿ ಒತ್ತು ಕೊಡಬೇಕು ಎಂದು ನುಡಿದರು.
ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥ ಡಾ. ಜಿ. ಕೆ. ಗಿರಿಜೇಶ್ ಸ್ವಾಗತಿಸಿದರು. ಕೆವಿಕೆಯ ತರಬೇತಿ ಸಂಯೋಜಕಿ ಹಾಗೂ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ. ಸಹನಾ ವಂದಿಸಿದರು.
ಸಹ ಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ನಿರೂಪಿಸಿದರು. ಶಿವಮೊಗ್ಗ.ದಾವಣಗೆರೆ, ಹಾಸನ, ಉತ್ತರಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸುಮಾರು ೪೦ ರೈತರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.