i
ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ನೆರವು ನೀಡಿ-ಜೆಡಿ ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಹಲವು ಸ್ವ-ಸಹಾಯ ಗುಂಪುಗಳು ಹಾಗೂ ಆಸಕ್ತಿ ಇರುವ ವ್ಯಕ್ತಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಲು ಉತ್ಸಕರಾಗಿದ್ದಾರೆ. ಇಂತಹವರಿಗೆ ರಾಷ್ಟ್ರೀಯ ಬ್ಯಾಂಕುಗಳು ಹಣಕಾಸು ನೆರವು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದರು.
ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ(ಪಿಎಂಎಫ್ಎಂಇ) ಹಾಗೂ ಕೃಷಿ ಮೂಲಭೂತ ಸೌಕರ್ಯ ನಿಧಿ ಕುರಿತು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಉದ್ದಿಮೆಗಳನ್ನು ವಿಸ್ತರಿಸಲು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ 380 ಘಟಕಗಳಿಗೆ ಆರ್ಥಿಕ ನೆರವು ನೀಡಲು ಗುರಿ ಹೊಂದಲಾಗಿದ್ದು, ಒಟ್ಟು 397 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 205 ಅರ್ಜಿಗಳ ಯೋಜನಾ ವರದಿ ಸಿದ್ದವಾಗಿದ್ದು, 192 ಅರ್ಜಿಗಳು ಬ್ಯಾಂಕ್ ಸಹಾಯಧನಕ್ಕೆ ಸ್ವೀಕೃತವಾಗಿವೆ. 2020-21 ಸಾಲಿನಿಂದ 2023-24 ಸಾಲಿನವರಿಗೆ 60 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 59 ಅರ್ಜಿಗಳು ಬ್ಯಾಂಕುಗಳಿಂದ ನಾನಾ ಕಾರಣಗಳಿಗೆ ತಿರಸ್ಕøತಗೊಂಡಿವೆ. 41 ಅರ್ಜಿ ಮಂಜೂರಾತಿ ಕಾರ್ಯಪ್ರಗತಿಯಲ್ಲಿವೆ. ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳು ಈ ಅರ್ಜಿಗಳನ್ನು ಪರಿಶೀಲಿಸಿ ಹಣಕಾಸು ಮಂಜೂರಾತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬ್ಯಾಂಕ್ ಅಧಿಕಾರಿಗಳಲ್ಲಿ ಕೋರಿದರು.
ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ, ಉದ್ದಿಮೆಯ ಮಾಲಿಕತ್ವ ಅಥವಾ ಪಾಲುದಾರಿಕೆ ಹೊಂದಿದಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೆ ವಿದ್ಯಾರ್ಹತೆಯ ಮಾನದಂಡ ಇಲ್ಲ. ಸರ್ಕಾರದ ಇತರೆ ಯೋಜನೆಗಳಲ್ಲಿ ಸಬ್ಸಡಿ ಸಾಲ ಪಡೆದಿದ್ದರೂ ಈ ಯೋಜನೆಯಡಿ ಬಡ್ಡಿ ಹಾಗೂ ಸಹಾಯಧನಕ್ಕಾಗಿ ಅರ್ಹತೆ ಹೊಂದಿರುತ್ತಾರೆ. ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗೀ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ.35 ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ.15 ರಷ್ಟು ಸಹಾಯಧನ ನೀಡಲಾಗುವುದು. ಗರಿಷ್ಠ 15 ಲಕ್ಷ ಅಥವಾ ಶೇ.50 ರಷ್ಟು ಸಹಾಯಧನವನ್ನು ಪಡೆಯಬಹುದು ಎಂದರು.
ಪ್ರಾಥಮಿಕ ಬಂಡವಾಳವಾಗಿ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಠ ರೂ.40,000 ನೀಡಲಾಗುವುದು. ಸ್ವಸಹಾಯ ಸಂಘದವರಿಗೆ ಗರಿಷ್ಠ 4 ಲಕ್ಷ ರೂ. ವರೆಗೆ ಪಡೆಯಲು ಅವಕಾಶವಿದೆ. ಗರಿಷ್ಟ ಯೋಜನಾ ವೆಚ್ಚ ರೂ.10 ಕೋಟಿಗೆ ರೂ.3 ಕೋಟಿ ಗರಿಷ್ಟ ಸಹಾಯಧನ ನೀಡಲಾಗುವುದು. ಆಹಾರ ಪದಾರ್ಥಗಳ ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಸ್ಥಾಪಿಸಲು ಅವಕಾಶವಿದೆ. ಬ್ರಾಂಡಿಗ್, ಮತ್ತು ಮಾರುಕಟ್ಟೆ ವಿಸ್ತರಣೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು ಎಂದರು.
ಹಿಟ್ಟಿನ ಗಿರಣಿಗಳು, ಎಣ್ಣೆ ಗಾಣ, ಬೇಕರಿ, ಬಾಳೇಕಾಯಿ ಉತ್ಪನ್ನ, ಅರಿಶಿಣ ಸಂಸ್ಕರಣೆ, ತೆಂಗಿನಕಾಯಿ ಉತ್ಪನ್ನಗಳ ಸಂಸ್ಕರಣೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಸೇರಿದಂತೆ ಆಹಾರ ಉತ್ಪನ್ನಗಳು, ಮಸಾಲ ಹಾಗೂ ಸಾಂಬಾರು ಪದಾರ್ಥಗಳು, ಸಿರಿಧಾನ್ಯ, ಜೇನು, ಕಾಫಿ ಮತ್ತು ಟೀ ಪುಡಿ, ಚಾಕೊಲೇಟ್, ಶ್ಯಾವಿಗೆ, ಸಿಹಿ ಹಾಗೂ ಖಾರ ತಿಂಡಿಗಳ ತಯಾರಿಕೆ ಸ್ಥಾಪಿಸಲು ಯೋಜನೆಯ ಲಾಭಪಡೆಯಬಹುದು. ಆದರೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಘಟಕಗಳ ಸ್ಥಾಪನೆಗೆ ಯೋಜನಯಡಿ ಸಹಾಯಧನ ನೀಡಲಾಗುವುದಿಲ್ಲ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುತ್ತಾರೆ. ಶುದ್ದ ಶೇಂಗಾ ಎಣ್ಣೆ ತಯಾರಿಕೆಗೆ ಗಾಣಗಳನ್ನು ಸ್ಥಾಪಿಸಲು ಬ್ಯಾಂಕುಗಳು ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು. ಇದೇ ರೀತಿ ಅಡಿಕೆ ಉತ್ಪನ್ನ ಸಂಸ್ಕರಣೆಗೂ ಸಾಲ ನೀಡಬಹದು. ಇದೇ ರೀತಿ ಕೃಷಿ ಮೂಲಭೂತ ಸೌಕರ್ಯಗಳ ನಿಧಿ ಅಡಿಯಲ್ಲೂ ಕೃಷಿ ಚಟುವಟಿಕೆಗಳು, ಗೋದಾಮು, ಮಾರುಕಟ್ಟೆ, ಪ್ಯಾಕ್ ಹೌಸ್, ಸಾಗಾಣಿಕೆ, ವಿಂಗಡಣೆ ಮತ್ತು ಶ್ರೇಣೀಕರಣ, ಹಣ್ಣು ಮಾಗಿಸುವ ಉದ್ದಿಮೆಗಳಿಗೂ ಸಹಾಯ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ತಿಳಿಸಿದರು.
ಕೃಷಿ ಉಪನಿರ್ದೇಶಕ ಪ್ರಭಾಕರ್ ಮಾತನಾಡಿ, ಕಿರು ಆಹಾರ ಸಂಸ್ಕರಣ ಉದ್ದಿಮೆಗಳು ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕುಗಳು ಪಟ್ಟಣ ಹಾಗೂ ನಗರಗಳಲ್ಲಿ ಉದ್ದಿಮೆ ಸ್ಥಾಪಿಸುವಂತೆ ಅರ್ಜಿದಾರರ ಮೇಲೆ ಒತ್ತಡ ತರಬಾರದು. ಸರ್ಕಾರ ಆಹಾರ ಸಂಸ್ಕರಣಾ ಉದ್ದಿಮೆಗೆ ಇಂಬು ನೀಡುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಿದೆ. ಈ ಎಲ್ಲಾ ಕೃಷಿ ಆಧಾರಿತ ಉತ್ಪನ್ನಗಳನ್ನು ಒಂದು ಒಕ್ಕೂಟದ ಅಡಿ ತಂದು, ಕೆಎಂಎಫ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸುತ್ತಿದೆ. ಬ್ಯಾಂಕುಗಳು ಅರ್ಜಿದಾರರಿಗೆ ಆಧಾರ ನೀಡುವಂತೆ ಅಥವಾ ಇತರೆ ಕಾರಣ ನೀಡಿ ಯೋಜನೆಗೆ ಮಂಜೂರಾತಿ ನೀಡುವುದನ್ನು ತಡೆಯಬಾರದು ಎಂದು ಕೋರಿದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶಶಿಧರ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಶಾಲು ಹೂವಿನ ಗುಚ್ಛ ನೀಡುವ ಬದಲು ಸಂಸ್ಕರಿಸಿದ ಕೃಷಿ ಉತ್ಪನ್ನಗಳನ್ನು ಅತಿಥಿಗಳಿಗೆ ನೀಡುವುದರ ಮೂಲಕ ಆಹಾರ ಸಂಸ್ಕರಣ ಉದ್ಯಮಕ್ಕೆ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವೇದಾ ನ್ಯಾಚುರಲ್ ವತಿಯಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮರದ ಗಾಣದ ಎಣ್ಣೆಯಲ್ಲಿ ತೆಗೆದ ಉತ್ಪನ್ನಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿ, ಗಾಣದ ಎಣ್ಣೆ ಮಹತ್ವನ್ನು ತಿಳಿಸಲಾಯಿತು.
ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಪಶು ಸಂಗೋಪನ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.