i
ಮಿತಿ ಮೀರಿರುವ ಸೊಳ್ಳೆ ಹಾವಳಿ ತಡೆಯಲು ಮನವಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದಲ್ಲಿ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ ರೋಗಗಳು ಹರಡುತ್ತಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಮಹಾನಗರ ಪಾಲಿಕೆ ಕೂಡಲೇ ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸುವ ಜೊತೆಗೆ ಫಿನಾಯಲ್ ಸಿಂಪಡಣೆ, ಫಾಂಗಿಂಗ್ ಮಾಡಲು ಮುಂದಾಗಬೇಕೆಂದು ಮಲೆನಾಡು ಕೇಸರಿ ಪಡೆ ಆಗ್ರಹಿಸಿದೆ.
ಈ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಪಡೆಯ ಕಾರ್ಯಕರ್ತರು, ಪ್ರತಿ ವಾರ್ಡ್ಗಳಲ್ಲಿ ಸರ್ಕಾರದ ಆದೇಶದಂತೆ ವಾರ್ಡ್ ಸಮಿತಿಗಳನ್ನು ಅನುಷ್ಠಾನಕ್ಕೆ ತರುವುದರೊಂದಿಗೆ ವಾರ್ಡಿನ ನಾಗರೀಕರ ಜೊತೆಗೆ ಉತ್ತಮವಾದ ಸಂಬAಧವನ್ನು ಇಟ್ಟುಕೊಂಡು ವಾರ್ಡ್ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ಮತ್ತು ಕೊಳಚೆ ಎಲ್ಲೆಂದರೆಲ್ಲಿ ತುಂಬಿದೆ. ಅವುಗಳ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಹಂದಿ, ಬೀಡಾಡಿ ದನಗಳ ಕಾಟಕ್ಕೆ ಮುಕ್ತಿಯಿಲ್ಲ. ಕಸ ಮತ್ತು ತ್ಯಾಜ್ಯವನ್ನು ತಿಂದು ರಸ್ತೆ ತುಂಬಾ ದನ ಮತ್ತು ಹಂದಿ ಎಳೆದಾಡುತ್ತಿವೆ. ಕೂಡಲೇ ಇದನ್ನು ತಡೆಗಟ್ಟಬೇಕು. ನಗರದ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂದು ಮನವಿ ಮಾಡಿದರು.
ಹೆಚ್ಚುತ್ತಿರುವ ಬಿಸಿಲಿಗೆ ಸೊಳ್ಳೆ ಕಾಟ ಹೆಚ್ಚಿದೆ. ಕೂಡಲೇ ಸೊಳ್ಳೆ ನಿರ್ಮೂಲನೆಗೆ ಮುಂದಾಗಬೇಕು. ಮನೆಯಲ್ಲಿ ನಾಗರಿಕರು ನೆಮ್ಮದಿಯಿಂದ ಇರಲು ಅಸಾಧ್ಯವಾಗಿದೆ. ವಿಪರೀತ ಪ್ರಮಾಣದಲ್ಲಿರುವ ಕೊಳಚೆ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ನಗರದಲ್ಲೆಡೆ ಸ್ವಚ್ಛತೆಗೆ ಮಹತ್ವ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಡೆಯ ಅಧ್ಯಕ್ಷ ಎಸ್ ಜಿ ಚಂದ್ರಶೇಖರ್, ವಿಜಯಕುಮಾರ್, ಎಸ್ ಜನಾರ್ದನ್, ನಾಗೇಶ, ರಾಹುಲ್, ಸಂಜಯ್, ಗುರು ಮೊದಲಾದವರಿದ್ದರು.