i
ಕೆರೆಯಲ್ಲಿ ಮೀನುಗಳ ಮಾರಣಹೋಮ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ.
ಕಸಬಾ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಕಾರ್ಖಾನೆಗಳ ರಾಸಾಯನಿಕ ಘನ ತ್ಯಾಜ್ಯ ನೀರು ಕೆರೆಗೆ ಸೇರಿರುವ ಪರಿಣಾಮ ಸಾವಿರಾರು ಮೀನುಗಳು ಮೃತಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಯಲ್ಲಿ ಸಾವಿರಾರು ಮೀನುಗಳ ಸಾವಿನಿಂದ ದುರ್ವಾಸನೆ ಉಂಟಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಕೆರೆಗೆ ತ್ಯಾಜ್ಯ ನೀರನ್ನು ನೇರವಾಗಿ ಕಾರ್ಖಾನೆಗಳ ರಾಸಯನಿಕ ಮಿಶ್ರಿತ ತ್ಯಾಜ್ಯ ನೀರು ಹರಿದಿದ್ದರಿಂದ ಮೀನುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರಾದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸೊಣ್ಣೇಗೌಡ ಆರೋಪಿಸಿದ್ದಾರೆ.
ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿ ಮೂರು ದಿನಗಳು ಕಳೆದಿವೆ. ದಡಕ್ಕೆ ಬಂದು ಸೇರಿರುವ ರಾಶಿ ರಾಶಿ ಮೀನುಗಳು ಕೊಳೆತು ಗಬ್ಬುನಾರುತ್ತಿವೆ. ಸತ್ತ ಮೀನುಗಳನ್ನು ನೀರಿನಲ್ಲಿ ಹಾಗೆಯೇ ಬಿಟ್ಟರೆ ನೀರು ಮತ್ತಷ್ಟು ಮಲೀನಗೊಳ್ಳುವ ಆತಂಕ ಎದುರಾಗಿದೆ. ಮೀನುಗಾರಿಕೆ ಇಲಾಖೆ ಅಥವಾ ಸಂಬಂಧಟ್ಟ ಇಲಾಖೆಯವರು ಮೃತ ಮೀನುಗಳನ್ನು ಕೆರೆಯಿಂದ ಹೊರ ತೆಗೆದು ಹಾಕಿ ವಿಲೇವಾರಿ ಮಾಡಬೇಕಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಕೈಗಾರಿಕಾ ಕ್ಲಸ್ಟರ್ ಎಂದೇ ಖ್ಯಾತಿಯಾಗಿರುವ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳು ಚಾಲ್ತಿಯಲ್ಲಿವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಗೆ ಸ್ಥಳಾಂತರವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮಾತ್ರ ವರ್ಷಗಳು ಕಳೆದರೂ ಸಹ ಬೆಂಗಳೂರಿನಿಂದ ಗ್ರಾಮಾಂತರಕ್ಕೆ ಬಂದಿಲ್ಲ. ಇಂತಹ ಘಟನೆಗಳು ಸಂಭವಿಸಿದಾಗ ದೂರು ಕೊಡಲು ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಘಟನೆ ಮಾಸಿ ಹೋಗಿರುತ್ತದೆ ಎಂದು ಬಾಶೆಟ್ಟಿಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಕೆರೆಗಳಲ್ಲಿ ಮೀನುಗಳ ಮಾರಣ ಹೋಮ ಇದೇ ಮೊದಲಲ್ಲ. ಕೊನೆಯೂ ಅಲ್ಲ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಲೇ ಇದೆ. ಕೈಗಾರಿಕಾ ತ್ಯಾಜ್ಯ ನೀರನ್ನು ರಾತ್ರೋರಾತ್ರಿ ಕಳ್ಳದಾರಿಯಲ್ಲಿ ಕೆರೆಗೆ ಹರಿಸಿರುವುದರಿಂದ ಇಂದು ಮೀನುಗಳು ಸಾವನ್ನಪ್ಪಿವೆ. ಇದಕ್ಕೆ ಕಾರಣರಾದವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕ ರ ವೇ ಹೋರಾಟಗಾರ ರಾಜಘಟ್ಟ ರವಿ ಆಗ್ರಹಿಸಿದ್ದಾರೆ.