i
ಮಾದಾರ ಸ್ವಾಮೀಜಿ, ಲಕ್ಷ್ಮಿನಾರಾಯಣ, ಕಾರಜೋಳ ಈ ಮೂವರಲ್ಲಿ ಬಿಜೆಪಿ ಅಭ್ಯರ್ಥಿ ಯಾರು?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಮೊದಲೆಲ್ಲ ರಾಜಕೀಯ ಪಕ್ಷಗಳಿಗೆ ಎಸ್ಸಿ ಅಭ್ಯರ್ಥಿಗಳ ಕೊರತೆ ಜಾಸ್ತಿ ಇತ್ತು. ಆಗ ರಾಜಕೀಯ ಪಕ್ಷಗಳೇ ತುಂಬಾಲು ಬಿದ್ದು ವಕೀಲರನ್ನೊ, ಪ್ರಭಾವಿಗಳನ್ನೊ ತಂದು ನಿಲ್ಲಿಸಬೇಕಿತ್ತು. ಈಗ ಕಾಲ ಬದಲಾಗಿದೆ. ಟಿಕೆಟ್ ಬಯಸಿ ಬರುವವರ ಸಂಖ್ಯೆ ಪರಿಶಿಷ್ಟರಲ್ಲೂ ಡಜನ್ ಗಟ್ಟಲೆ ಏರಿಕೆ ಆಗಿದೆ.
ಬಯಲು ಸೀಮೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಾದ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ತುಮಕೂರು ಜಿಲ್ಲೆಯ ಶಿರಾ ಮತ್ತುಪಾವಗಡ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ 8 ವಿಧಾನಸಭಾ ಕ್ಷೇತ್ರಗಲ್ಲಿ 2 ಎಸ್ಸಿ, 2 ಎಸ್ಟಿ, 4 ಸಾಮಾನ್ಯ ವರ್ಗಕ್ಕೆ ಮೀಸಲಿವೆ. 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7 ರಲ್ಲಿ, 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕೇಂದ್ರ ಸಚಿವ, ಹಾಲಿ ಸಂಸದ ಆನೇಕಲ್ ನಾರಾಯಣಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದೇ ತಡ ಬಿಜೆಪಿಯಲ್ಲಿ ಸಾಕಷ್ಟು ಹುರಿಯಾಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಲಾಬಿ ಮಾಡುವುದರ ಜತೆಗೆ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಮಾತ್ರ ಯಾವ ಅಭ್ಯರ್ಥಿಗೂ ಭರವಸೆ ನೀಡಿಲ್ಲ. ಹಲವು ಸರ್ವೆ ವರದಿಗಳ ಪ್ರಕಾರ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಅದರಲ್ಲೂ ರಾಜಕೀಯವಾಗಿ ಅವಕಾಶ ವಂಚಿತವಾದ ಎಡಗೈ(ಮಾದಿಗ) ಸಮುದಾಯದ ಮತಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷಕ್ಕಿಂತ ಹೆಚ್ಚಿದ್ದು ಅದೇ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನೆ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಗಂಭೀರ ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲಾ ಬಿಜೆಪಿ ಘಟಕ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೇರಿದಂತೆ ಇತರೆ ಬಿಜೆಪಿ ಮುಖಂಡರು ಮಾದಿಗ ಸಮುದಾಯಕ್ಕೆ ಚಿತ್ರದುರ್ಗ ಲೋಕಸಭಾ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ಕೋರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಹಿರಿಯ ಮುತ್ಸದ್ದಿ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಮಾದಿಗ ಸಮಾಜದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಹಾಲಿ ಶಾಸಕ ಹೊಳಲ್ಕೆರೆ ಚಂದ್ರಪ್ಪನವರು ಭೋವಿ ಸಮಾಜಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಅದರಲ್ಲೂ ನನ್ನ ಪುತ್ರನಿಗೇ ಟಿಕೆಟ್ ನೀಡಬೇಕು ಎಂದು ವಾದ ಮಂಡಿಸಿದಾಗ ತಿಪ್ಪಾರೆಡ್ಡಿ ಮತ್ತು ಚಂದ್ರಪ್ಪ ಮಧ್ಯ ಸಂಘರ್ಷ ಶುರುವಾಗಿ ಮಾದಿಗ ಸಮಾಜಕ್ಕೆ ಟಿಕೆಟ್ ನೀಡಬೇಕು ಎಂದು ತಿಪ್ಪಾರೆಡ್ಡಿ ಅವರು ಪಟ್ಟು ಹಿಡಿದರು ಎನ್ನಲಾಗುತ್ತಿದೆ. ಇದರ ಜತೆಗೆ ಸಂಘ ಪರಿವಾರದವರು, ರಾಜ್ಯ ಮತ್ತು ಕೇಂದ್ರ ಬಿಜೆಪಿ ವರಿಷ್ಠರು ಮಾದಿಗ ಸಮಾಜಕ್ಕೆ ಟಿಕೆಟ್ ನೀಡುವಂತೆ ಕೇಂದ್ರ ನಾಯಕರಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದರ ಮಧ್ಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಶ್ರಾಂತ ಐಎಎಸ್ ಅಧಿಕಾರಿಗಳಾದ ಲಕ್ಷ್ಮಿನಾರಾಯಣ, ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂ.ಕೆ.ಶ್ರೀರಂಗಯ್ಯ, ಸೂರನಹಳ್ಳಿ ವಿಜಯ ಕುಮಾರ್(ವಿಜಯಣ್ಣ) ಇವರೆಲ್ಲ ಎಡಗೈ ಮಾದಿಗ ಸಮುದಾಯಕ್ಕೆ ಸೇರಿದ್ದರೆ ಭೋವಿ ಸಮಾಜದ ಮಾಜಿ ಸಂಸದ ಜನಾರ್ಧನಸ್ವಾಮಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರ ಪುತ್ರ ರಘುಚಂದನ್ ಕಣಕ್ಕೆ ಇಳಿಯಲು ತಾಲೀಮು ಆರಂಭಿಸಿ ಕ್ಷೇತ್ರದಲ್ಲಿ ದಿಢೀರ್ ಸುತ್ತಾಟ ಆರಂಭಿಸಿದ್ದಾರೆ.
ಮೂವರಲ್ಲಿ ಯಾರು ಹಿತವರು?
ಕೇಂದ್ರ ಸಚಿವ, ಹಾಲಿ ಸಂಸದ ಎ.ನಾರಾಯಣಸ್ವಾಮಿ ಸ್ಪರ್ಧೆ ಬಯಸಿದರೆ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎನ್ನುವ ಸಂಕಲ್ಪಕ್ಕೆ ಬದ್ಧರಾಗಿದ್ದರೆ ಬಿಜೆಪಿ ವರಿಷ್ಠರ ಬುಟ್ಟಿಯಲ್ಲಿ ಮೂವರ ಹೆಸರುಗಳು ಅತ್ಯಂತ ಚಾಲ್ತಿಯಲ್ಲಿವೆ.
ಬಿಜೆಪಿಯ ಕೇಂದ್ರ ವರಿಷ್ಠರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಾಲಿನಲ್ಲಿಟ್ಟು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಅವರನ್ನ ನೋಡುತ್ತಿರುವುದರಿಂದ ಸ್ವಾಮೀಜಿ ಅವರನ್ನೆ ಕಣಕ್ಕೆ ಇಳಿಸಿದರೆ ಸುಲಭವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ಲೇಷಣೆ ಮಾಡಿ ಮೊದಲ ಆದ್ಯತೆಯಾಗಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಮನವೊಲಿಕೆ ಯತ್ನಗಳು ಸಾಗಿವೆ ಎನ್ನಲಾಗಿದೆ.
ಒಂದು ವೇಳೆ ಸ್ವಾಮೀಜಿ ಅವರು ಸ್ಪರ್ಧಿಸುವುದಿಲ್ಲ ಎಂದು ಧಿಕ್ಕರಿಸಿದಾಗ ಮಾತ್ರ ಮಾಜಿ ಸಚಿವ ಗೋವಿಂದ ಕಾರಜೋಳ, ವಿಶ್ರಾಂತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ಮುಂಚೂಣಿಗೆ ಬರಲಿದ್ದಾರೆ. ಈ ಮೂವರಲ್ಲಿ ಯಾರು ಹಿತವರು, ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಎಂದು ಬಿಜೆಪಿ ಸರ್ವೆ ಮಾಡಿಸುತ್ತಿದೆ ಎನ್ನುವುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ಪಕ್ಷದ ಸುಮಾರು 2.50 ಲಕ್ಷ ಮತದಾರರಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಗೆ ಹೆಚ್ಚಿನ ಲಾಭ ಆಗುವ ಲೆಕ್ಕಾಚಾರ ಕೇಳಿ ಬರುತ್ತಿದೆ.
2014 ಸಾರ್ವತ್ರಿಕ ಚುನಾವಣೆ:
ಪಾರ್ಟಿ ಅಭ್ಯರ್ಥಿ ಮತಗಳು
INC ಬಿ ಎನ್ ಚಂದ್ರಪ್ಪ 4,67,372
ಬಿಜೆಪಿ ಜನಾರ್ದನ ಸ್ವಾಮಿ 3,66,220
ಜೆಡಿ(ಎಸ್) ಗೂಳಿಹಟ್ಟಿ ಡಿ ಶೇಖರ್ 2,02,108
AAP ಮೋಹನ ದಾಶರಿ 14,226
2014ರ ಲೋಕಸಭಾ ಚುನಾವಣೆಯಲ್ಲಿ 10,97,666 ದಷ್ಟು ಮತದಾನವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರು 1,01,291 ದಷ್ಟು ಮತಗಳನ್ನು ಪಡೆದು ಬಹುಮತದಿಂದ ಆಯ್ಕೆಯಾಗಿದ್ದರು.
2019ರ ಸಾರ್ವತ್ರಿಕ ಚುನಾವಣೆಗಳು:
ಪಾರ್ಟಿ ಅಭ್ಯರ್ಥಿ ಮತಗಳು
ಬಿಜೆಪಿ ಎ.ನಾರಾಯಣಸ್ವಾಮಿ 626,195
INC ಬಿ ಎನ್ ಚಂದ್ರಪ್ಪ 5,46,017
ಬಿಎಸ್ಪಿ ಸಿಯು ಮಹಾಂತೇಶ್ 8,907
IND ಎನ್ ಟಿ ವಿಜಯಕುಮಾರ್ 8,707
2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 12,46,506 ರಷ್ಟು ಮತದಾನವಾಗಿದ್ದು ಆ ಪೈಕಿ 80,178 ದಷ್ಟು ಹೆಚ್ಚಿನ ಮತಗಳನ್ನು ಪಡೆದು ಎ.ನಾರಾಯಣಸ್ವಾಮಿ ಅವರು ಆಯ್ಕೆಯಾಗಿದ್ದರು.
1952 ರಿಂದ 2019 ಸಂಸತ್ತಿಗೆ ಆಯ್ಕೆಯಾದ ಸದಸ್ಯರು-
ವರ್ಷ ಸದಸ್ಯ ಪಾರ್ಟಿ
1952 ಎಸ್.ನಿಜಲಿಂಗಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1957 ಜೆ. ಮೊಹಮ್ಮದ್ ಇಮಾಮ್ ಪ್ರಜಾ ಸಮಾಜವಾದಿ ಪಕ್ಷ
1962 ಜೆ.ವೀರಬಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1967 ಜೆ. ಮೊಹಮ್ಮದ್ ಇಮಾಮ್ ಸ್ವತಂತ್ರ ಪಕ್ಷ
1971 ಕೆ.ಮಲ್ಲಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1977 ಕೆ.ಮಲ್ಲಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1980 ಕೆ.ಮಲ್ಲಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1984 ಕೆ ಎಚ್ ರಂಗನಾಥ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1989 ಸಿಪಿ ಮೂಡಲಗಿರಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1991 ಸಿಪಿ ಮೂಡಲಗಿರಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1996 ಪಿ.ಕೊಂಡಂಡರಾಮಯ್ಯ ಜನತಾ ದಳ
1998 ಸಿಪಿ ಮೂಡಲಗಿರಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1999 ಶಶಿ ಕುಮಾರ್ ಜನತಾ ದಳ
2004 ಎನ್ ವೈ ಹನುಮಂತಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2009 ಜನಾರ್ದನ ಸ್ವಾಮಿ ಭಾರತೀಯ ಜನತಾ ಪಕ್ಷ
2014 ಬಿ ಎನ್ ಚಂದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2019 ಎ.ನಾರಾಯಣಸ್ವಾಮಿ ಭಾರತೀಯ ಜನತಾ ಪಕ್ಷ