i
ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ: ಶಾಸಕ ಬೇಳೂರು…
ಚಂದ್ರವಳ್ಳಿ ನ್ಯೂಸ್, ರಿಪ್ಪನ್ಪೇಟೆ:
ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಯಾವೊಬ್ಬ ರೈತ ನನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಎರಡು ಹೊತ್ತಿನ ಗಂಜಿಗೆ ದಾರಿಮಾಡಿಕೊಂಡಿರುವ ರೈತರು ಹೆದರುವ ಅವಶ್ಯಕತೆ ಇಲ್ಲ. ಆದರೆ ಹೊಸದಾಗಿ ಅರಣ್ಯವನ್ನು ಕಡಿಯಬೇಡಿ ಎಂದು ಶಾಸಕ ಳೂರು ಗೋಪಾಲಕೃಷ್ಣ ಹೇಳಿದರು.
ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಜೆ ಜೆ ಎಂ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜ್ವಲಂತ ಸಮಸ್ಯೆಯಾದ ಭೂ ಹಕ್ಕು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಆದರೆ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡುವುದನ್ನು ಬಿಟ್ಟು ಪರಿಸರ ಸಂರಕ್ಷಿಸಬೇಕು ಎಂದರು.
ರಾಜ್ಯ ಸರ್ಕಾರವು ಜಾತಿ, ಧರ್ಮ, ವರ್ಗ ಮೀರಿ ಯೋಜನೆಗಳನ್ನು ಜಾರಿಗೊಳಿಸಿದೆ. ‘ಗ್ಯಾರಂಟಿ’ ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆ ಆಗಿದ್ದು, ಅರ್ಹರಿಗೆ ಯೋಜನೆಯ ಫಲ ಶೀಘ್ರವಾಗಿ ತಲುಪಿಸಲು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ಸರ್ಕಾರ ರಚಿಸಿದೆ. ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ಕುಟುಂಬ ಒಂದಕ್ಕೆ ವಾರ್ಷಿಕ ಸರಾಸರಿ ರೂ ಅರವತ್ತು ಸಾವಿರ ಹಣ ಫಲಾನುಭವಿಗಳಿಗೆ ಉಳಿತಾಯ ಆಗುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಪಂ ಅಧ್ಯಕ್ಷೆ ಹೇಮಾವತಿ ಸತೀಶ್ , ಗ್ರಾಪಂ ಸದಸ್ಯರಾದ ತಿಮ್ಮಪ್ಪ ಬೆಳ್ಳೂರು , ಭವಾನಿ , ಪಲ್ಲವಿ , ರಾಜೇಶ್ ಆರ್ , ರವೀಂದ್ರ ಎಸ್ , ಅರುಣ್ ಎಲ್ , ಕವಿತಾ ವೈ , ಷಣ್ಮುಖಪ್ಪ ಹಾಗೂ ನೀರಾವರಿ ಅಧಿಕಾರಿ ಶಿವಪ್ರಸಾದ್ , ಮುಖಂಡರಾದ ಆಸೀಫ್ ಭಾಷಾ , ಮಹಮ್ಮದ್ ಷರೀಫ್ , ಮಹೇಂದ್ರ ಬುಕ್ಕಿವರೆ ಹಾಗೂ ಇನ್ನಿತರರಿದ್ದರು.
ಶಿಕ್ಷಕರಾದ ಶಿವಮೂರ್ತಿ ನಿರೂಪಿಸಿದರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶ ಸ್ವಾಗತಿಸಿದರು.