i
ಕನ್ನಡಿಗರ ಸಾರ್ವಭೌಮತೆ ಸಾರಿದ ಸರೋಜಿನಿ ಮಹಿಷಿ-ಲೇಖನ ಕಬ್ಬೂರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಕನ್ನಡಿಗರ ಸಾರ್ವಭೌಮತೆ ಸಾರಿದ ಸರೋಜಿನಿ ಮಹಿಷಿ
(ಸರೋಜಿನಿ ಮಹಿಷಿಯವರ ಜನ್ಮದಿನದ ಪ್ರಯುಕ್ತ ಲೇಖನ)
ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ‘ಸರೋಜಿನಿ ಮಹಿಷಿ ವರದಿ’ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. 1983 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಲು ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಸತತ ಮೂರು ವರ್ಷಗಳ ಕಾಲ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1984 ರಲ್ಲಿ ಸರ್ಕಾರಕ್ಕೆ 58 ಶಿಫಾರಸು ಅಂಶಗಳನ್ನು ಒಳಗೊಂಡ ಒಂದು ವರದಿಯನ್ನು ಸಲ್ಲಿಸಿತ್ತು. ಅದುವೇ ಸರೋಜಿನಿ ಮಹಿಷಿ ವರದಿ.
ವರದಿಯಲ್ಲಿ ಏನಿದೆ…?:- ಎಲ್ಲಾ ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಮೀಸಲಾತಿ ನೀಡಬೇಕು, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಪಿಎಸ್ಯುಗಳ ‘ಸಿ‘ ಮತ್ತು ‘ಡಿ‘ ಗುಂಪು ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ ಕಲ್ಪಿಸಬೇಕು, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ಘಟಕಗಳಲ್ಲಿ ನೀಡುವ ಉದ್ಯೋಗದಲ್ಲಿ ಗ್ರೂಪ್ ‘ಬಿ‘ ಕನ್ನಡಿಗರಿಗೆ ಶೇ. 80 ಹಾಗೂ ಗ್ರೂಪ್ ‘ಎ‘ ಯಲ್ಲಿ ಶೇ. 65 ರಷ್ಟು ಮೀಸಲಾತಿ ಕಲ್ಪಿಸಬೇಕು, ರಾಜ್ಯದ ಎಲ್ಲಾ ಕೈಗಾರಿಕಾ ಘಟಕಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು, ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5 ರಷ್ಟು ಮೀಸಲಾತಿ ನೀಡಿದಂತೆ ರಾಜ್ಯದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮೀಸಲಾತಿ ನೀಡಬೇಕು, ತಾಂತ್ರಿಕ ಕ್ಷೇತ್ರಗಳಲ್ಲಿ ಕನ್ನಡಿಗರು ದೊರೆಯದಿದ್ದಾಗ ಮಾತ್ರ ಹೊರರಾಜ್ಯದ ಅಭ್ಯರ್ಥಿಗಳ ಆಯ್ಕೆ, ಉನ್ನತ ಹುದ್ದೆಯಲ್ಲಿರುವ ಇತರ ರಾಜ್ಯದವರಿಗೆ ಕನ್ನಡ ಪರೀಕ್ಷೆ, ಇವೇ ಮುಂತಾದ ಅಂಶಗಳನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದರು. ಹೀಗೆ ವಿವಿಧ ರೀತಿಯ 58 ಶಿಫಾರಸುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿತ್ತು, ಅವುಗಳ ಪೈಕಿ 45 ಶಿಫಾರಸುಗಳನ್ನು ರಾಜ್ಯ ಸರಕಾರ ಒಪ್ಪಿಗೆ ನೀಡಿತ್ತು.
ಡಾ.ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ. ಸರೋಜಿನಿ ಮಹಿಷಿ 1927 ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ ಕಮಲಾಬಾಯಿ. ಸರೋಜಿನಿ ಅವರು ಧಾರವಾಡದ ಸರಕಾರಿ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಓದಿ ಮುಂದೆ ಕರ್ನಾಟಕ ಹೈಸ್ಕೂಲಿನಲ್ಲಿ ಎಸ್ಎಸ್ಎಲ್ಸಿ ವರೆಗೆ ಓದಿದರು. ತಂದೆಯವರು ವಕೀಲಿ ವೃತ್ತಿಯನ್ನು ಸಾಂಗ್ಲಿಯಲ್ಲಿ ಪ್ರಾರಂಭಿಸಿದ್ದರಿಂದ ಸರೋಜಿನಿ ಮಹಿಷಿಯವರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಸ್ನಾತಕೋತ್ತರ ಪದವಿ ಓದಿಗೆ ಸೇರಿದಾಗ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ರಂ.ಶ್ರೀ.ಮುಗಳಿಯವರ ಪ್ರೇರಣೆಯಿಂದ ಸರೋಜಿನಿ ಅವರಲ್ಲಿ ಅಧ್ಯಯನಾಸಕ್ತಿ ಬೆಳೆಯುತ್ತಾ ಹೋಯಿತು. ಸರೋಜಿನಿ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ 1949 ರಲ್ಲಿ ಎಂ.ಎ. ಪದವಿ ಪಡೆದರು. ಸರೋಜಿನಿಯವರು ತಾವು ಓದಿದ ಕಾಲೇಜಿನಲ್ಲಿಯೇ ಎರಡು ವರ್ಷಗಳ ಕಾಲ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ನಂತರ ಒಂದು ವರ್ಷ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.
ಸಮಯವನ್ನು ಹಾಳುಮಾಡದೆ ಸದಾ ಒಂದಲ್ಲೊಂದು ಕಾರ್ಯದಲ್ಲಿ ಸದಾ ತೊಡಗಿರುತಿದ್ದ ಮಹಿಷಿಯವರು DIPLOMA IN TAILORING AND EMBROIDERY ಒಂದು ವರ್ಷದ ತರಬೇತಿ ಪಡೆದು ಈಝೀ ಕಟಿಂಗ್, ಕಮರ್ಷಿಯಲ್ ಸಿಸ್ಟಮ್ ಆಫ್ ಕಟಿಂಗ್, ಮತ್ತು ಕಸೂತಿ ಕಲೆ ಎಂಬ ವಿಷಯಗಳ ಮೇಲೆ ಪುಸ್ತಕಗಳನ್ನು ರಚಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ಡಿಪ್ಲೊಮ ಇನ್ ಹೋಮಿಯೋಪತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಯಾವುದಾದರೊಂದು ಪ್ರಕಾರದಲ್ಲಿ ತೊಡಗಿಕೊಂಡು ತಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳುವುರಲ್ಲೇ ನಿರತರಾಗಿದ್ದ ಮಹಿಷಿಯವರಿಗೆ ಕಾನೂನು ಕಲಿಯಬೇಕೆನಿಸಿ ಬೆಳಗಾವಿಯ ಆರ್.ಎಲ್.ಎಸ್. ಕಾಲೇಜಿನಲ್ಲಿ ಎಲ್.ಎಲ್.ಟಿ ಅಧ್ಯಯನ ಮಾಡಿ 1955 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಪಡೆದು ತೇರ್ಗಡೆಯಾದರು. ನಂತರ ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಧಾರವಾಡದಲ್ಲಿ ಕನವಿಕರ್ ಎಂಬ ವಕೀಲರ ಬಳಿ ವಕೀಲಿ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಗೆ ಕುಳಿತು ಪ್ರಥಮಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸರೋಜಿನಿ ಮಹಿಷಿ ಅವರು ಸಾಹಿತ್ಯಾಭ್ಯಾಸಿಯಾಗಿ ಬರವಣಿಗೆಯಲ್ಲಿ ನಿರತರಾಗಿ ಹಲವಾರು ಕವನಗಳನ್ನು, ಮಕ್ಕಳ ಕವಿತೆಗಳನ್ನು ರಚಿಸಿ ಅವು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಮರಾಠಿ, ತೆಲುಗು, ತಮಿಳು, ಕೊಂಕಣಿ ಭಾಷೆಗಳಲ್ಲೂ ಪ್ರಭುತ್ವ ಪಡೆದು ಬಹುಭಾಷಾ ಕೋವಿದೆ ಎನಿಸಿದ್ದರು. ಕಲಿಕೆಯ ದಾಹದಿಂದ ಯಾವುದಾದರೊಂದು ಪದವಿಗಳಿಸುವುದರಲ್ಲೇ ತಲ್ಲೀನರಾಗಿರುತ್ತಿದ್ದ ಮಹಿಷಿಯವರು ಸ.ಸ.ಮಾಳವಾಡರ ಮಾರ್ಗದರ್ಶನದಲ್ಲಿ ‘ಕನ್ನಡ ಕವಯಿತ್ರಿಯರು’ (ವೇದಕಾಲದಿಂದ ಆಧುನಿಕ ಕಾಲದವರೆಗೆ) ಎಂಬ ಪ್ರೌಢ ಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 1961ರಲ್ಲಿ ಸಲ್ಲಿಸಿದರು. ಅವರಿಗೆ ಡಿ.ಲಿಟ್ ಪದವಿ ಸಂದಿತು. ಮಹಿಷಿಯವರು ಶೈಕ್ಷಣಿಕ ಕ್ಷೇತ್ರದೊಡನೆ ನಿಕಟ ಸಂಪರ್ಕ ಹೊಂದಿದ್ದು ಪ್ರಾಥಮಿಕ ಶಿಕ್ಷಣದಿಂದ ಟ್ರೈನಿಂಗ್ ಕಾಲೇಜುಗಳ ವರೆಗೆ ಸಂಚಾಲಕರಾಗಿ, ರಾಜ್ಯಮಹಿಳಾ ಶಿಕ್ಷಣ ಮಂಡಲಿ, ಕೇಂದ್ರ ಶಿಕ್ಷಣ ಸಲಹಾಮಂಡಲಿಗಳ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಸಂಸದೀಯ ಹಿಂದಿ ಪರಿಷತ್ತಿನ ಅಧ್ಯಕ್ಷೆಯಾಗಿ, ಧಾರವಾಡದ ವನಿತಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆಯಾಗಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಾಧ್ಯಕ್ಷೆಯಾಗಿ ಹೀಗೆ ಹಲವಾರು ಹುದ್ದೆಗಳಲ್ಲಿ ಶೈಕ್ಷಣಿಕ ಉನ್ನತಿಗಾಗಿ ದುಡಿದರು. ಶಿಕ್ಷಣ ಕ್ಷೇತ್ರದಷ್ಟೇ ಇವರು ದುಡಿದ ಮತ್ತೊಂದು ಕ್ಷೇತ್ರವೆಂದರೆ ಸಮಾಜಸೇವೆ. ಮಹಿಳೆಯರ ಏಳ್ಗೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು ಮಹಿಳೆಯರ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ದೊರಕಿಸಿಕೊಡುವಲ್ಲಿಯೂ ಶ್ರಮಿಸಿದರು.
ಸರೋಜಿನಿ ಮಹಿಷಿ ಅವರು 1962ರಲ್ಲಿ ಹಳ್ಳಿಕೇರಿ ಗುದ್ಲಪ್ಪನವರ ಪ್ರೋತ್ಸಾಹದಿಂದ ಧಾರವಾಡದ ಉತ್ತರಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಹೀಗೆ ಲೋಕಸಭೆಗೆ ನಾಲ್ಕುಬಾರಿ ಆಯ್ಕೆಗೊಂಡು 25 ವರ್ಷಗಳ ಕಾಲ ಸಂಸತ್ತಿನಲ್ಲಿದ್ದ ಮಹಿಷಿ ಅವರು ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಮೂವರು ಪ್ರಧಾನ ಮಂತ್ರಿಗಳನ್ನು ಕಂಡವರು. ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಆಪ್ತಸಚಿವೆಯಾಗಿ, ಅಣುಶಕ್ತಿ ಹಾಗೂ ಸಂಖ್ಯಾಶಾಸ್ತ್ರ ಸಂಸ್ಥೆಗಳ, ಸಾರ್ವಜನಿಕ ಸಂಬಂಧಗಳ ಖಾತೆಯ ಉಪಮಂತ್ರಿಯಾಗಿ, ಪ್ರವಾಸೋದ್ಯಮ, ವಿಮಾನಖಾತೆ, ಕಾನೂನು ಮತ್ತು ಕಂಪನಿ ವ್ಯವಹಾರಗಳ ಖಾತೆ, ಲೋಕಸಭೆ ಮತ್ತು ರಾಜ್ಯ ಸಭೆಗಳ ಜಂಟಿ ಆಯ್ಕೆ ಸಮಿತಿ ಅಧ್ಯಕ್ಷೆಯಾಗಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷೆಯಾಗಿ, ಗ್ರಾಮೀಣ ಸಚಿವಾಲಯದ ಉಪಾಧ್ಯಕ್ಷೆಯಾಗಿ, ಸಂಸ್ಕೃತ ಸಂಸ್ಥಾನ ಹಿಂದಿ ಸಂಸತ್ ಸಂಘದ ಉಪಾಧ್ಯಕ್ಷೆಯಾಗಿ ಹೀಗೆ ಮಂತ್ರಿಮಂಡಲದಲ್ಲಿ ಮತ್ತು ಸಂಸತ್ ರಚಿಸಿದ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ವಿದ್ಯಾರ್ಥಿನಿಯಾಗಿದ್ದಾಗಲೇ ಸಾಹಿತ್ಯದ ಬರವಣಿಗೆಯನ್ನು ರೂಢಿಸಿಕೊಂಡಿದ್ದ ಸರೋಜಿನಿ ಮಹಿಷಿಯವರು ‘ರೂಪ‘ ಕಥಾಸಂಕಲನ; ಸ್ವಾತಂತ್ಯ್ರಕಹಳೆ ಮತ್ತು ಹಿಮಾಚಲದಿಂದ ರಾಮೇಶ್ವರ-ಕವನ ಸಂಕಲನಗಳು; ಮುಳ್ಳುಗುಲಾಬಿ ಮತ್ತು ನವಿಲ ಇಂಚರ-ಮೊದಲಾದ ಮಕ್ಕಳ ಕವನ ಸಂಕಲನಗಳು; ಅತಿಥಿ ಸತ್ಕಾರ ಹರಟೆಗಳ ಸಂಕಲನ; ಸಾಹಿತ್ಯ ಮಂಥನ ವಿಮರ್ಶಾಸಂಕಲನ; ಕಸೂತಿ ಕಲೆ ಮತ್ತು ಸುಲಭ ಗೃಹ ವಿಜ್ಞಾನ ಎಂಬ ಇತರ ಕೃತಿಗಳನ್ನು ರಚಿಸಿದ್ದಾರೆ. ಇವಲ್ಲದೆ ಕುವೆಂಪುರವರ ‘ರಾಮಾಯಣದರ್ಶನಂ’ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ ಮತ್ತು ಶಿವರಾಮಕಾರಂತರ ಪ್ರವಾಸ ಕಥನ ‘ಅಪೂರ್ವ ಪಶ್ಚಿಮ’ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಿಂದಿ ಭಾಷೆಯಲ್ಲಿ ‘ಯೇ ಹಮಾರೇ’, ‘ಯೇ ಬಿ ಹಮಾರೇ’, ‘ಅತಿಥಿ ಸತ್ಕಾರ್’ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಹಿಂದಿಯಿಂದ ನಾ.ಶಿ. ಫಡಕೆಯವರ ಶಕುಂತಲಾ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸರೋಜಿನಿ ಮಹಿಷಿಯವರ ಅತಿಥಿ ಸತ್ಕಾರ ಮತ್ತು ಯೇ ಹಮಾರೆ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುಳ್ಳು ಗುಲಾಬಿ ಮಕ್ಕಳ ಕವನ ಸಂಕಲನಕ್ಕೆ ರಾಜ್ಯಸರಕಾರದ ಬಹುಮಾನ, ಪುಣೆಯ ಸಮೀರ ಸಂವರ್ಧಿನಿ ಸಂಸ್ಕೃತ ಸಭಾದಿಂದ ‘ವಿದ್ವತ್ರತ್ನ’, ಉಡುಪಿ ಪೇಜಾವರ ಶ್ರೀಗಳಿಂದ ‘ಕರ್ನಾಟಕ ಸರಸ್ವತಿ‘, ಅಖಿಲಭಾರತ ಹಿಂದಿ ಸಾಹಿತ್ಯಸಭಾ ಕುರುಕ್ಷೇತ್ರದಿಂದ ‘ಸಾಹಿತ್ಯವಾಚಸ್ಪತಿ’, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು. ಅಂದಿನ ದಿನಗಳಲ್ಲಿ ಇಂದಿರಾಗಾಂಧೀ ಅವರ ಭಾಷಣಗಳೆಂದರೆ ಸರೋಜಿನಿ ಮಹಿಷಿ ಅವರ ಕನ್ನಡದ ಅನುವಾದ ಭಾಷಣ ಇರುತ್ತಿತ್ತು. ಅದರ ವರ್ಚಸ್ಸು ಥೇಟ್ ಇಂದಿರಾಗಾಂಧೀ ಅವರೇ ಎರಡು ಭಾಷೆಗಳಲ್ಲಿ ಮಾತನಾಡುತ್ತಿದ್ದಾರೋ ಎಂಬ ಹಾಗೆ ಆಪ್ತತೆ ಮೂಡಿಸುವಂತಿರುತ್ತಿತ್ತು. ಸರೋಜಿನಿ ಮಹಿಷಿ ಅವರು 2015 ರ ಜನವರಿ 25 ರಂದು ನಮ್ಮನ್ನು ಅಗಲಿದರು. ಈ ಮಹಾನ್ ಚೇತನಕ್ಕೆ ನಮನ.
ಲೇಖನ-ಎನ್.ಎನ್.ಕಬ್ಬೂರ, ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ.