i
ಡಯಾಬಿಟಿಸ್ ನಿಯಂತ್ರಣ ರೋಗಿಗಳ ಕೈಲಿದೆ-ಡಾ.ಪ್ರೀತಮ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಡಯಾಬಿಟಿಸ್ ಅನ್ನು ವೈದ್ಯರ ಸಲಹೆಯ ಅನುಸಾರ ರೋಗಿಗಳೇ ನಿಯಂತ್ರಣ ಮಾಡಿಕೊಳ್ಳಬೇಕು. ಕೇವಲ ಮಾತ್ರೆ-ಇನ್ಸುಲಿನ್ಗಳು ಡಯಾಬಿಟೀಸ್ ನಿಯಂತ್ರಣದ ಒಂದು ಮಾಧ್ಯಮ ಅಷ್ಟೆ. ಆದರೆ, ಇದನ್ನು ಸಂಪೂರ್ಣ ಹತೋಟಿಗೆ ತರುವಲ್ಲಿ ರೋಗಿಯ ಮಾನಸಿಕತೆ ಬಹಳ ಮುಖ್ಯ ಎಂದು ದುರ್ಗಿಗುಡಿ ಡಯಾಬಿಟಿಸ್ ಸೆಂಟರ್ ನ ಡಾ.ಪ್ರೀತಮ್ ಹೇಳಿದರು.
ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಹುಮುಖಿ ಶಿವಮೊಗ್ಗ ದ ೩೪ನೇ ಕಾರ್ಯಕ್ರಮ ಡಯಾಬಿಟಿಸ್ ರಿವರ್ಸಲ್ ಡಯಾಬಿಟಿಸ್ ಸತ್ಯ ಮಿಥ್ಯ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಹಂತ ಹಂತವಾಗಿ ಕೇವಲ ಮಾತ್ರೆಗಳಿಂದ ಆರಂಭಗೊಳ್ಳುವ ಚಿಕಿತ್ಸಾ ಕ್ರಮ ಅಂತಿಮವಾಗಿ ಇನ್ಸುಲಿನ್ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತದೆ. ಇದರಿಂದ ಇತರೆ ಬೇರೆ ಕಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ ಇಷ್ಟೆಲ್ಲಾ ಆದಾಗ್ಯೂ, ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಕಡಿಮೆಯಾಗದೆ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಸ್ತವವಾಗಿ ಕೈಗಾರಿಕಾಕರಣದಿಂದ ನಮ್ಮ ಜೀವನ ಶೈಲಿ, ಆಹಾರ ಕ್ರಮಗಳು ಬದಲಾದವು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಜನರು ಪಾಲಿಷ್ ಅಕ್ಕಿ ಬಳಸಲು ಪ್ರಾರಂಭಿಸಿದಂದಿನಿಂದ ಈ ರೀತಿಯ ಕಾಯಿಲೆಗಳಿಗೆ ಆಸ್ಪದಕೊಟ್ಟಂತಾಗಿದೆ ಅವರು, ಇದಕ್ಕೆ ಔಷಧ ತೆಗೆದುಕೊಂಡರೆ ಶೇ ೩೩ ಜನರಿಗೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಉಳಿದ ೬೭ ಜನರಿಗೆ ಔಷಧಿ ಕೆಲಸ ಮಾಡುವುದಿಲ್ಲ ಎಂದರು.