i
ಹರಿತವಾದ ವಿಮರ್ಶೆ, ಬರಹಗಳಿಂದ ಟಾಬ್ಲಾಯ್ಡ್ ಪತ್ರಿಕೆಗೆ ಹೊಸ ಸ್ವರೂಪ ನೀಡಿದ ಕೀರ್ತಿ ಲಂಕೇಶ್ ಅವರದು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಂಕೇಶ್ರವರು ತಮ್ಮ ಬರವಣಿಗೆ ಮೂಲಕ ಒಂದು ತಲೆಮಾರಿನ ಯುವ ಜನರು ಸೇರಿದಂತೆ ಎಲ್ಲ ವರ್ಗದ ಜನರನ್ನು ವೈಚಾರಿಕವಾಗಿ ಎಚ್ಚರಿಸಿದ ಕೀರ್ತಿ ಅವರದಾಗಿದೆ ಎಂದು ಕತೆಗಾರ, ಪತ್ರಕರ್ತ ಜಡೆಕುಂಟೆ ಮಂಜುನಾಥ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ‘ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಕೇಶ್ ಅವರು ತಮ್ಮ ಹರಿತವಾದ ವಿಚಾರ, ವಿಮರ್ಶೆ, ಸೃಜನಶೀಲ ಬರಹಗಳಿಂದ ಟಾಬ್ಲಾಯ್ಡ್ ಪತ್ರಿಕೆಗೆ ಹೊಸ ಸ್ವರೂಪ, ಆಯಾಮ ನೀಡಿದರಲ್ಲದ ರಾಜಕೀಯದವರ ಜನ್ಮ ಜಾಲಾಡುತ್ತಿದ್ದರು. ಸಾಹಿತ್ಯಕವಾಗಿ ಬರಹಗಾರನ್ನು ಬೆಳೆಸಿದವರು. ಪತ್ರಕರ್ತರಾಗಿ ನೇರ, ನಿಷ್ಠೂರ ನಡೆಯಿಂದ ಸರ್ಕಾರಗಳಿಗೂ ಎಚ್ಚರಿಕೆಯಾಗಿದ್ದರು ಎಂದು ತಿಳಿಸಿದರು. ಈ ಕಾಲಘಟ್ಟದ ಪತ್ರಕರ್ತರು, ಬರಹಗಾರರು ಲಂಕೇಶ್ರನ್ನು ಓದಿಕೊಳ್ಳ ಬೇಕು. ಹಿಂದೊಮ್ಮೆ ಲಂಕೇಶರ ವಿಚಾರ ವೇದಿಕೆ ರೂಪಿಸಿದ್ದೆವು. ಅದಕ್ಕೆ ಡಾ.ಬಿ.ಎಂ.ಶರಣೇಂದ್ರಯ್ಯ ಒತ್ತಾಸೆಯಾಗಿದ್ದರು. ತಾತ್ವಿಕ ಭಿನ್ನಾಭಿ ಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿದ್ದು ಬೇಸರದ ಸಂಗತಿ ಎಂದರು.ಉಪನ್ಯಾಸಕ ಡಾ.ಗುರುನಾಥ್ ಮಾತನಾಡಿ ‘ಲಂಕೇಶ್ರವರು ಇಡೀ ಕರ್ನಾಟಕದ ಮೇಷ್ಟ್ರು ಆಗಿದ್ದರು. ಹುಟ್ಟು ಹಬ್ಬದ ನೆಪದಲ್ಲಿ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಲಂಕೇಶರು ತಮ್ಮ ಸಾಹಿತ್ಯ ಕೃಷಿ, ಪತ್ರಿಕಾ ಕೃಷಿಯ ಮೂಲಕ ತಮಗೇ ಅರಿವಿಲ್ಲದೇ ನಾಡಿನಾದ್ಯಂತ ಆ ತಲೆಮಾರಿನ ಬರಹಗಾರರನ್ನು ಬೆಳೆಸಿದರು. ಧರ್ಮ, ರಾಜಕಾರಣ, ಜಾತಿ ಕುರಿತ ಅವರ ಗ್ರಹಿಕೆಗಳು ಅಪರೂಪದ ಒಳನೋಟ ಹೊಂದಿದ್ದವು ಎಂದರು.ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಲಂಕೇಶ್ ರವರು ನನ್ನ ಇಡೀ ಬದುಕಿನ ಆಲೋಚನಾ ಕ್ರಮವನ್ನೇ ಬದಲಾಯಿಸಿದರು. ಅವರು ಕಟ್ಟಿದ ಪ್ರಗತಿ ರಂಗದ ಜತೆ ನನ್ನ ಒಡನಾಟ ಇತ್ತು. ರಾಜಕೀಯ ಪಕ್ಷಗಳು ಪ್ರಗತಿ ರಂಗದ ಪ್ರಣಾಳಿಕೆಯನ್ನು ಅಳವಡಿಸಿ ಕೊಂಡಿದ್ದಲ್ಲಿ ಇಡೀ ಕರ್ನಾಟಕದ ಚಿತ್ರಣವೇ ಬದಲಾಗುತ್ತಿತ್ತು. ಲಂಕೇಶರು ಅಂಬೇಡ್ಕರ್ ಚಿಂತನೆಗಳಿಗೇಕೆ ಮಹತ್ವ ಕೊಡಲಿಲ್ಲ ಎನ್ನುವ ಕೊರಗು ಇದೆ ಎಂದರು.ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಲಂಕೇಶ್ ಪತ್ರಿಕೆ ಪ್ರಭಾವ ಹೇಗಿತ್ತು ಎಂದರೆ, ಓದುಗರು ಜಾತಕ ಪಕ್ಷಿಗಳಂತೆ ಕಾದು ಓದುತ್ತಿದ್ದರು. ಜಾಹಿರಾತು ಇಲ್ಲದೇ ಪತ್ರಿಕೆ ನಡೆಸಿದ ಹೆಗ್ಗಳಿಕೆ ಅವರದು. ಕೊನೆಯವರೆಗೂ ಬರವಣಿಗೆ ನಿಲ್ಲಿಸಲಿಲ್ಲ. ಪತ್ರಕರ್ತರು ಹೆಚ್ಚು ಓದಬೇಕು ಅನ್ನೋದನ್ನು ಹೇಳಿದ್ದೆ ಲಂಕೇಶ್. ಎಲ್ಲ ಸಿದ್ಧಾಂತ ಮೀರಿದ, ಅಪ್ಪಟ ಜೀವನ ಪ್ರೀತಿಯನ್ನು ಹೊಂದಿದ್ದರು ಎಂದು ಹೇಳಿದರು.ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ ಲಂಕೇಶ್ ಮಾಸ್ಟರ್ ಒಂದು ವಿಶ್ವ ವಿದ್ಯಾಲಯ ವಾಗಿದ್ದವರು. ಅನೇಕರನ್ನು ಪ್ರಭಾವಿಸಿದವರು. ಅವರ ಬಹುತೇಕ ಕೃತಿಗಳನ್ನು ಬೋಧಿಸಿದ ಹೆಗ್ಗಳಿಕೆ ನನಗಿದೆ. ಇದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ತಮ್ಮ ಪತ್ರಿಕಾ ಬರಹಗಳಿಂದ ಬಹಳಷ್ಟು ಜನರನ್ನು ಪ್ರಭಾವಿಸಿದ್ದಾರೆ. ಅವರ ಚಿಂತನೆ ಗಳ ಹೊಂದಿರುವ ಒಂದು ಪರಂಪರೆ ಬಿಟ್ಟು ಹೋಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ ಲಂಕೇಶರ ಹುಟ್ಟು ಹಬ್ಬದ ದಿನ ಅವರ ಚಿಂತನೆಗಳನ್ನು ನೆನಪು ಮಾಡಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿ ಯಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.ಸಭೆಯಲ್ಲಿ ಪತ್ರಕರ್ತರಾದ ಕನ್ನಡ ಸಂಪಿಗೆ ತಿಪ್ಪೇಸ್ವಾಮಿ, ಎಂ.ಎನ್. ಅಹೋಬಳಪತಿ, ಗೌನಹಳ್ಳಿ ಗೋವಿಂದಪ್ಪ, ಮಲ್ಲಾಪುರ ಹರೀಶ್ ಇದ್ದರು.