i
ಬಗರ್ಹುಕುಂ ಜಮೀನು ತೆರವಿಗೆ ತೀವ್ರ ವಿರೋಧ…
ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ:
ತಾಲೂಕಿನ ಮಂಡಗದ್ದೆ ಹೋಬಳಿ ನಾಯದವಳ್ಳಿ ಗ್ರಾಮದ ಸ.ನಂ.೧೧೪ರಲ್ಲಿ ಕಳೆದ ೪೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸರೋಜಮ್ಮ ಹಾಗೂ ಆಕೆಯ ಮಗ ಕೃಷಿ ಕೂಲಿ ಕಾರ್ಮಿಕ ಯೋಗೇಂದ್ರ ಕೇವಲ ೪ ಗುಂಟೆ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಆದರೆ ಇವರ ಬಗರ್ ಹುಕುಂ ಸಾಗುವಳಿ ಪ್ರದೇಶ ಅಕ್ರಮ ಎಂದು ತೀರ್ಥಹಳ್ಳಿ ತಹಶೀಲ್ದಾರ್ ಆದೇಶ ಹೊರಡಿಸಿ ಆ ಪ್ರದೇಶದ ತೆರವಿಗೆ ಮುಂದಾದಾಗ ಇಡೀ ಗ್ರಾಮವೇ ಒಗ್ಗಟ್ಟಾಗಿ ನಿಂತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಿಮ್ಮೆಟ್ಟಿಸಿದ ಘಟನೆ ನಡೆದಿದೆ.
ತಹಶೀಲ್ದಾರ್ ಆದೇಶ ಎಂದು ಬೆಜ್ಜವಳ್ಳಿ ಉಪ ತಹಶೀಲ್ದಾರ್ ಶಿವಪ್ರಸಾದ್, ರಾಜಸ್ವ ನಿರೀಕ್ಷಕ ಸುಧಾಕರ್, ಗ್ರಾಮ ಲೆಕ್ಕಿಗ ರಾಜಶೇಖರ್ ಜೆಸಿಬಿ ಯಂತ್ರದ ಮೂಲಕ ಒಕ್ಕಲೆಬ್ಬಿಸಲು ಬಂದಾಗ ಗ್ರಾಮದ ಎಲ್ಲಾ ಮಹಿಳೆಯರು ಅಡ್ಡಗಟ್ಟಿದರಲ್ಲದೇ ಜೆಸಿಬಿ ಯಂತ್ರದ ಮೇಲೆ ಕುಳಿತು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತ್ತು. ಗ್ರಾಮಸ್ಥರು ಎರಡು ಎಕರೆಗಿಂತ ಕಡಿಮೆಯ ಬಗರ್ಹುಕುಂ ಸಾಗುವಳಿಯನ್ನು ತೆರವು ಮಾಡಕೂಡದು ಎಂಬ ಕೋರ್ಟ್ ಆದೇಶವನ್ನು ಪ್ರದರ್ಶಿಸಿದಾಗ ಅದನ್ನು ಆರ್ಐ ಒಪ್ಪಲಿಲ್ಲ. ತಮಗೆ ಮೇಲಿನ ಆದೇಶವೆಂದು ವಾದಕ್ಕಿಳಿದರು.
ಪ್ರತಿಯಾಗಿ ಗ್ರಾಮಸ್ಥರು ಒಕ್ಕಲೆಬ್ಬಿಸುವುದಾದರೆ ನಮ್ಮ ಜೀವದ ಮೇಲೆಯೇ ಜೆಸಿಬಿ ಯಂತ್ರ ಹಾಯಿಸಿ ಎಂದು ಗಟ್ಟಿ ನಿಂತಾಗ ಬೇರೆ ದಾರಿ ಕಾಣದ ಅಧಿಕಾರಿಗಳು ಹಲವು ಹೊತ್ತಿನ ಮಾತುಕಥೆ ನಂತರ ಕ್ರಮ ಕೈಗೊಳ್ಳದೇ ಎಚ್ಚರಿಕೆ ನೀಡಿ ವಾಪಾಸ್ಸಾದರು.