i
ಮೊರಾರ್ಜಿ ಶಾಲೆ ವಿದ್ಯಾರ್ಥಿಗೆ ವಿಷಕಾರಿ ಅಂಟು ದ್ರವ ಕುಡಿಸಿದ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ದೂರು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಬಚ್ಚಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಕೆಲ ಪುಂಡರು ವಿಷದ ಅಂಟು ದ್ರವ ಕುಡಿಸಿದ ಘಟನೆಯನ್ನು ಶಾಲೆಯ ಸಿಬ್ಬಂದಿ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ಥ ಬಾಲಕನ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೆಲಮಂಗಲದ ಲೋಹಿತ್ ನಗರದ ನಿವಾಸಿ ಬಿ.ಆರ್. ಭಾಸ್ಕರ ಪ್ರಸಾದ್ ಅವರು ವಸತಿ ಶಾಲೆಯ ಪ್ರಾಂಶುಪಾಲರು, ನಿಲಯಪಾಲಕರು, ಆರೋಗ್ಯ ಸಹಾಯಕಿ ಹಾಗೂ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದೂರು ನೀಡಿದ್ದಾರೆ.
ಬಲವಂತವಾಗಿ ವಿಷದ ಅಂಟು ದ್ರವ ಕುಡಿಸಿದ ಪರಿಣಾಮ ಬಾಲಕ ಅಸ್ವಸ್ಥಗೊಂಡು ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಸತಿ ಶಾಲೆಯ ಸಿಬ್ಬಂದಿ ಕೃತ್ಯವನ್ನು ಮುಚ್ಚಿಟ್ಟು, ಉಡಾಫೆ ಉತ್ತರ ನೀಡಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದೂರು ನೀಡಿದ್ದೇವೆ. ಪೊಲೀಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಜೊತೆಗೂಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ದಲಿತ ಹೋರಾಟಗಾರ ಭಾಸ್ಕರಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
9ನೇ ತರಗತಿ ವಿದ್ಯಾರ್ಥಿ ನಾಗಾರ್ಜುನ ನನ್ನ ಸಹೋದರಿಯ ಮಗ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದು, ನನ್ನ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ. ಕಳೆದ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಿದ್ದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಶಾಲೆಯ ಕೆಲ ಪುಂಡ ವಿದ್ಯಾರ್ಥಿಗಳು ಕಳ್ಳಿ ಹಾಲಿನ ಮಾದರಿಯ ವಿಷದ ದ್ರವ ಕುಡಿಸಿದ್ದಾರೆ. ಆಸ್ಪತ್ರೆಯಲ್ಲಿ ಮಾಡಿಸಿದಾಗ ರಕ್ತ ನಂಜಾಗಿರುವುದು ಗೊತ್ತಾಯಿತು. ಶ್ವಾಸಕೋಶದಲ್ಲಿ ಕಫದಂತಹ ಅಂಟು ಪದಾರ್ಥ ಇರುವುದು ಸ್ಕ್ಯಾನಿಂಗ್ ನಿಂದ ತಿಳಿದುಬಂದಿದೆ. ಘಟನೆ ಕುರಿತು ಬಾಲಕನನ್ನು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂತು ಎಂದು ಹೇಳಿದರು.
ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲನಾ ಸಮಿತಿಯ ಪ್ರೊ.ಹರಿರಾಮ್ ಮಾತನಾಡಿ, ಸರ್ಕಾರಿ ವಸತಿ ನಿಲಯಗಳಲ್ಲಿ ಪುಂಡಾಟಗಳು ಹೆಚ್ಚುತ್ತಿವೆ. ಚಿಂತಾಮಣಿಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯ ಊಟಕ್ಕೆ ಮಲ ಮಿಶ್ರಣ ಮಾಡಿದ್ದ ಘಟನೆ ನಡೆದಿತ್ತು. ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಸತಿ ಶಾಲೆಗಳ ಅವ್ಯವಸ್ಥೆ ಕುರಿತು ಹೋರಾಟ ರೂಪಿಸಲಾಗಿದೆ. ಬಚ್ಚಹಳ್ಳಿ ಶಾಲೆಯಲ್ಲಿ ನಡೆದಿರುವ ಘಟನೆ ಕುರಿತು ಪೊಲೀಸ್ ಠಾಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಘಟನೆ ಕುರಿತು ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯಪಾಲಕರನ್ನು ಸಂಪರ್ಕಿಸಿದಾಗ ಅವರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಪಾಲಕರಿಗೆ ಒಳಗೆ ಪ್ರವೇಶವಿಲ್ಲ ಎಂಬ ನಾಮಫಲಕ ಹಾಕಿದ್ದರೂ ಕೆಲ ಪೋಷಕರು ಒಳಗೆ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಘಟನೆಯಲ್ಲಿ ಭಾಗಿಯಾದ ಬಾಲಕರ ಪೋಷಕರು ಶಾಲೆಗೆ ಬಂದು ಪ್ರಾಂಶುಪಾಲರ ಬಳಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತನಿಖೆ ನಂತರವೇ ಸತ್ಯಾಂಶ ಹೊರಬರಲಿದೆ.