i
ಜಲಕ್ಷಾಮ ಕೊರೋನಾಗಿಂತ ದೊಡ್ಡ ಮಹಾ ಮಾರಿ?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಪ್ರೀತಿ ಇಲ್ಲದೆ ನೂರು ವರ್ಷ ಇರಬಹುದು, ಆದರೆ ನೀರು ಇಲ್ಲದೇ ಒಂದು ದಿನವೂ ಇರಲು ಸಾಧ್ಯವಿಲ್ಲ”.ಇಂದಿನ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನ ಅನೇಕ ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಮಾಡಿರಬಹುದು ಮತ್ತು ಮನುಷ್ಯ ಬಾಹ್ಯಾಕಾಶಕ್ಕೆ ನೆಗೆದು ಅಲ್ಲಿ ಸಹ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಹೊರಟಿರಬಹುದು. ಆದರೆ ತನ್ನ ಅಸ್ತಿತ್ವಕ್ಕೆ ಅತಿ ಅಗತ್ಯವಾಗಿ ಬೇಕಾಗಿರುವ ನೀರನ್ನು ಸೃಷ್ಟಿಸಲು ಹಾಗೂ ನೀರಿಗೆ ಪರ್ಯಾಯವಾದ ವಸ್ತುವನ್ನು ಕಂಡು ಹಿಡಿಯಲು ಮಾತ್ರ ಅವನಿಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಮನುಷ್ಯ ನೀರಿನ ಮೂಲಗಳ ಆಧಾರದ ಮೇಲೆ ತನ್ನ ಆವಾಸ ಸ್ಥಾನವನ್ನು ಗುರುತಿಸಿ ಅಲ್ಲಿಯೇ ವಾಸಿಸುತ್ತಾ ಬಂದಿದ್ದಾನೆ. ಜಗತ್ತಿನ ನಾಗರೀಕತೆಯ ಅಭ್ಯದಯಕ್ಕೆ ಮುಖ್ಯ ಕಾರಣವೇ ನದಿ ತೀರಗಳು ಎಂದರೆ ಅದು ನೂರಕ್ಕೆ ನೂರರಷ್ಟು ಸತ್ಯದ ಮಾತು. ಮನುಷ್ಯನಷ್ಟೇ ಅಲ್ಲ ಪ್ರಾಣಿ- ಪಕ್ಷಿಗಳ ಸಹಿತ ಪ್ರತಿಯೊಬ್ಬರ ವಾಸಕ್ಕೆ ಯೋಗ್ಯವಾದ ನೆಚ್ಚಿನ ಸ್ಥಳ ಎಂದರೆ ಅದು ನೀರಿನ ಲಭ್ಯತೆ ಇರುವ ಸ್ಥಳ ಎಂಬುದನ್ನು ಯಾರೂ ಅಲ್ಲಗಳೆಯಲಾರರು.ಜಗತ್ತಿನ ಶೇ. ೭೦ಕ್ಕಿಂತಲೂ ಹೆಚ್ಚಿನ ಪ್ರದೇಶ ಅಗಾಧವಾದ ಸಾಗರ, ಸಮುದ್ರ, ಸರೋವರ ಹಾಗೂ ನದಿಗಳ ನೀರಿನಿಂದ ಆವೃತ್ತವಾಗಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದ ಶುದ್ಧ ನೀರಿನ ಲಭ್ಯತೆ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬುದು ಎಷ್ಟು ಸತ್ಯವೋ ಜನಸಂಖ್ಯಾ ಸ್ಫೋಟ, ಕಾಡಿನ ನಾಶ, ಬೃಹತ್ ಕೈಗಾರಿಕರಣ ಹಾಗೂ ಯಾಂತ್ರಿಕ ಕೃಷಿ ಸಹ ಶುದ್ಧ ನೀರಿನ ಅಲಭ್ಯತೆಗೆ ತನ್ನ ಕೊಡುಗೆ ನೀಡುತ್ತಿದೆ ಎಂಬುದು ಸಹ ಅಷ್ಟೇ ಸತ್ಯ.ಜನಸಂಖ್ಯಾ ಸ್ಫೋಟದಿಂದ ಅನೇಕ ದೇಶಗಳಲ್ಲಿ ಈಗಾಗಲೇ ಜನಸಾಂದ್ರತೆ ತುಟ್ಟ ತುದಿ ತಲುಪಿದ್ದು, ಭಾರತ ಸೇರಿದಂತೆ ಏಷ್ಯ ಖಂಡದ ಅನೇಕ ದೇಶಗಳು, ನೀರಿನ ವಿಚಾರದಲ್ಲಿ ಕಡ್ಡಾಯವಾಗಿ ತಮ್ಮ ಹಿಂದಿನ ಓಬೀರಾಯನ ಕಾಲದಿಂದ ಮಾಡಿಕೊಂಡು ಬಂದ ನೀತಿಗಳನ್ನು ಬದಲಾಯಿಸಲೇ ಬೇಕಾದಂತಹ ತುರ್ತು ಸ್ಥಿತಿ ಈಗ ಒದಗಿ ಬಂದಿದೆ. ಅಷ್ಟೇ ಅಲ್ಲದೇ ಇದಕ್ಕಾಗಿ ಕಟ್ಟುನಿಟ್ಟಿನ ನೀತಿಗಳನ್ನು, ಕಾನೂನುಗಳನ್ನು ರೂಪಿಸುವ ಹಾಗೂ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆಯನ್ನು ಸರ್ಕಾರಗಳು ನಿರ್ವಹಿಸಬೇಕಾಗಿದೆ. ಇಲ್ಲವಾದರೆ ಭವಿಷ್ಯದ ದಿನಗಳಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ. ಕಾಯಿಲೆ ಬಂದಾಗ ಅದನ್ನು ಗುಣ ಪಡಿಸಲು ಹೆಣಗುವುದಕ್ಕಿಂತ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದೇ ಲೇಸು.ಭೂಮಿಗೆ ಎಷ್ಟು ರಂಧ್ರಗಳನ್ನು ಕೊರೆದರೂ, ಅಣೆಕಟ್ಟು ಕಟ್ಟಿ ನೀರನ್ನು ಸಂಗ್ರಹ ಮಾಡಿದರೂ ಸಹ ಕೇವಲ ಒಂದು ಋತುವಿನಲ್ಲಿ ಮಳೆ ಬರದಿದ್ದರೆ ನಮ್ಮ ಇಡೀ ನಾಗರಿಕ ಜಗತ್ತೇ ತತ್ತರಿಸಿ ಜನ ಜೀವನ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ ಎಂಬ ಉದಾಹರಣೆ ಈಗ ನಮ್ಮ ಕಣ್ಣ ಮುಂದಿದೆ.ಇನ್ನೂ ಈಗ ತಾನೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಮುಂಗಾರಿನ ಮಳೆಗೆ ಇನ್ನೂ ಮೂರ್ನಾಲ್ಕು ತಿಂಗಳು ಕಾಯಬೇಕು. ಆದರೆ ಅದಕ್ಕಿಂತ ಮೊದಲೇ ಎಲ್ಲಾ ಅಣೆಕಟ್ಟುಗಳು ಬಹುತೇಕ ಬರಿದಾಗಿವೆ ಅಂತರ್ಜಲ ಕುಸಿದು ಹೋಗಿದೆ. ಆಕಸ್ಮಿಕವಾಗಿ ಮಧ್ಯ ಬೇಸಿಗೆ ಮಾರುತಗಳೇನಾದರೂ ನಮ್ಮ ಮೇಲೆ ದಯೆ ತೋರದಿದ್ದರೆ, ಎಲ್ಲೆಡೆ ಹಾಹಾಕಾರ ಉಂಟಾಗಿ ನೀರಿನ ನಿರ್ವಹಣೆ ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಸರ್ಕಾರಗಳು ಕೈ ಚೆಲ್ಲುವ ದಿನಗಳು ದೂರವಿಲ್ಲ. ಈ ಹಿಂದೆ ಪತ್ರಿಕೆ ಹಾಗೂ ದೂರದರ್ಶನದಲ್ಲಿ ಚೀನಾದಲ್ಲಿ ಕರೋನಾ ಸೋಂಕು ವ್ಯಾಪಿಸುತ್ತಿರುವ ಸುದ್ದಿ ಕೇಳುತ್ತಿದ್ದೆವು. ಅಲ್ಲಿನ ನಗರಗಳನ್ನು ಲಾಕ್ ಡೌನ್ ಮಾಡಿ ಸೋಂಕು ತಗುಲಿದ ಊರುಗಳಿಗೆ ಬೀಗ ಜಡಿದ ಅಮಾನವೀಯ ವಿಷಯಗಳನ್ನು ಕೇಳಿದಾಗ ನಮಗೆಲ್ಲ ಸೋಜಿಗವೆನಿಸುತಿತ್ತು. ಅಂತಹ ದಿನಗಳು ನಮಗೂ ಸಹ ಬರಬಹುದು ಎನ್ನುವ ಕಿಂಚಿತ್ತೂ ಕಲ್ಪನೆ ನಮ್ಮ ಕನಸು ಮನಸಿನಲ್ಲೂ ಇರಲಿಲ್ಲ. ಕೆಲವೇ ದಿನಗಳಲ್ಲಿ ಪಕ್ಕದ ಕೇರಳ ರಾಜ್ಯಕ್ಕೆ ಚೈನಾದಿಂದ ಬಂದ ಆಸ್ಪತ್ರೆ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ ಎಂದಾಗ ಸಹ ಅದನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದ್ದಕ್ಕಿದ್ದಂತೆ ಲಾಕ್ ಡೌನ್ ಎಂಬ ಭೂತ ನಮ್ಮ ಮನೆ ಬಾಗಿಲಿಗೆ ಬಂದಾಗ ಬಾಗಿಲು ಜಡಿದು ಜೈಲಿನಂತೆ ಮನೆಯಲ್ಲಿ ಕೂರಿಸಿದಾಗ ನಮಗೆ ಅದರ ತೀವ್ರತೆ ಅರ್ಥವಾಗಿದ್ದು ಎಷ್ಟು ಜನರಿಗೆ ಕರೋನಾ ದೂರವಾಗಿ ನಾಲ್ಕು ವರ್ಷಗಳಾದರೂ ಅದರ ಪೆಟ್ಟಿನಿಂದ ಈಗಲೂ ಹೊರ ಬರಲು ಸಾಧ್ಯವಾಗಿಲ್ಲ. ಸಣ್ಣ ಸೊಂಕು ಇಡೀ ಜಗತ್ತಿನ ವ್ಯಾಪಾರ ವಹಿವಾಟು ಹಾಗೂ ಮನುಷ್ಯನ ಜೀವನವನ್ನೇ ಅಲ್ಲಾಡಿಸಿ ಬಿಡುತ್ತದೆ ಎಂದಾದರೆ, ನಾಗರಿಕತೆಯ ಚಿತ್ರಣವನ್ನೇ ಬದಲಿಸುತ್ತದೆ ಎಂದಾದರೆ ಹಾಗೂ ಲಾಕ್ ಡೌನ್ ಮುಗಿದು ನಾಲ್ಕು ವ?ಗಳಾದರೂ ಅದರ ಪೆಟ್ಟನ್ನು ಸುಧಾರಿಸಿಕೊಳ್ಳಲು ನಮಗೆ ಈಗಲೂ ಸಾಧ್ಯವಾಗಿಲ್ಲ ಎನ್ನುವುದಾದರೆ. ಅದಕ್ಕಿಂತಲೂ ದೊಡ್ಡ ಆಪತ್ತು ’ಜಲಕ್ಷಾಮ’. ಆ ಪೆಟ್ಟನ್ನು ತಡೆದುಕೊಳ್ಳುವ ಶಕ್ತಿ ನಿಜವಾಗಿಯೂ ನಮ್ಮ ಬಳಿ ಇದೆಯೇ?ದೂರದ ಆಫ್ರಿಕಾದ ಕೇಪ್ ಟೌನ್ನಲ್ಲಿ ಅಲ್ಲಿನ ಆಡಳಿತ ನಡೆಸುವ ಸರ್ಕಾರ ನೀರಿನ ನಿರ್ವಹಣೆ ನಮ್ಮ ಕೈಯಿಂದ ಸಾಧ್ಯವಾಗದ ಕೆಲಸ ಎಂದು ಕೈ ಚೆಲ್ಲಿದ್ದು ಹಾಗೂ ಅಲ್ಲಿನ ಜನ ಗುಳೇ ಹೊರಟ ಸುದ್ದಿಯನ್ನು ಹೋದ ವರ್ಷದಿಂದಲೇ ಕೇಳುತ್ತಾ ಬಂದಿದ್ದೇವೆ, ಅಷ್ಟು ದೂರವೇಕೇ… ನಮ್ಮದೇ ದೇಶದ ರಾಜಸ್ಥಾನ, ಬಿಹಾರ ಹಾಗೂ ಒರಿಸ್ಸಾ ರಾಜ್ಯಗಳಲ್ಲಿ ನೀರಿನ ಕೊರತೆಯಿಂದಾಗಿ ಅಲ್ಲಿನ ಅನೇಕ ಜನ ಗುಳೇ ಹೊರಟು ತಮ್ಮ ಆಸ್ತಿ, ಮನೆ ಹಾಗೂ ಕುಟುಂಬ ತೊರೆದು ದೇಶದ ಬೇರೆ- ಬೇರೆ ರಾಜ್ಯಗಳಲ್ಲಿ ನೆಲಿಸಿರುವುದು ನಮ್ಮ ಕಣ್ಣ ಮುಂದೆಯೇ ಇದೆ, ಹೀಗಿರುವಾಗ ನೀರಿಲ್ಲದ ಪ್ರದೇಶಗಳಿಗೆ ಯಾವ ಸರ್ಕಾರಗಳು ಬಂದರೂ, ಎಷ್ಟು ಹಣ ಸುರಿದರೂ ಅದೆಲ್ಲವೂ ಬರಗಾಲಕ್ಕೆ ಬುತ್ತಿ ಕಟ್ಟಿ ಇಟ್ಟಂತೆ ಸಂಪೂರ್ಣ ವ್ಯರ್ಥ ಅಲ್ಲವೇ?ಏನೆಲ್ಲ ಆಧುನಿಕ ತಂತ್ರಜ್ಞಾನ ನಮ್ಮ ಬಳಿ ಇದೆ ಎಂದು ಉತ್ತರ ಕುಮಾರನಂತೆ ಕೊಚ್ಚಿಕೊಂಡರೂ ಸಹ ನಮ್ಮ ಸರ್ಕಾರಗಳಿಗೆ ಕೇವಲ ಒಂದು ವ?ದ ಮಳೆ ಕೊರತೆ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬುದು ಸಾಬೀತು ಆಗುವ ಸಂದರ್ಭ ಈಗ ದುತ್ತನೇ ನಮ್ಮ ಎದುರು ಬಂದು ನಿಂತಿದೆ.ಸಹಜ ಕೃಷಿ ಬಿಟ್ಟು ಅಣೆಕಟ್ಟು, ಕೊಳವೆ ಬಾವಿ ಹಾಗೂ ಗೊಬ್ಬರ ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಸಾಲ ಮಾಡಿ ವಾಣಿಜ್ಯ ಕೃಷಿ ಮಾಡಿದ ರೈತರು ಇಂದು ಆಕಾಶದ ಕಡೆ ಮುಖ ಮಾಡಿಕೊಂಡು ಕೂತಿದ್ದಾರೆ ಹಾಗೂ ಪುಕ್ಕಟೆ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಸರ್ಕಾರಗಳಿಗೆ ಕೈ ಕೈ ಹಿಚುಕಿ ಹಿಡಿ ಶಾಪ ಹಾಕುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಕೆಲವು ವಸತಿ ಶಾಲೆಗಳು ನೀರಿನ ಕೊರತೆಯಿಂದ ಬಾಗಿಲು ಮುಚ್ಚಿ ಮನೆಯಿಂದಲೇ ಆನ್ ಲೈನ್ ಶಿಕ್ಷಣ ಪ್ರಾರಂಭಿಸಿವೆ ಹಾಗೂ ಪರಿಸ್ಥಿತಿ ಹೀಗೆ ಮುಂದುವರೆದರೆ ಕೆಲವೇ ದಿನಗಳಲ್ಲಿ ಇನ್ನೂ ಕೆಲವು ಶಾಲಾ ಕಾಲೇಜುಗಳು ಸಹ ಇದೇ ದಾರಿ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂಬ ಸುದ್ದಿ ಕೇಳಿ ಬರುತ್ತಿದೆ. ವಸತಿ ಗೃಹ ಹಾಗೂ ಹೋಟೆಲ್ಗಳವರು ಅಷ್ಟೇ ಅಲ್ಲ ಮನೆ, ಅಪಾರ್ಟ್ಮೆಂಟ್ಗಳಿಗೆ ಸಹ ನೀರಿನ ಟ್ಯಾಂಕರ್ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿದಾಗ ನೀರಿನ ಕೊರತೆ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಸಾಫ್ಟವೇರ್ ಉದ್ಯಮಗಳು ಕರೋನಾ ಕಾಲದಲ್ಲಿದ್ದಂತೆ ಈಗಲೂ ಸಹ ಮನೆಯಿಂದಲೇ ಕಾರ್ಯ ನಿರ್ವಹಿಸುವ ತೀರ್ಮಾನ ತೆಗೆದುಕೊಳ್ಳುವ ಚಿಂತನೆಯಲ್ಲಿದ್ದಾರೆ ಎಂಬುದನ್ನು ಕೇಳಿದಾಗ ಅದೇನು ಉತ್ಪ್ರೇಕ್ಷೆಯ ಮಾತಲ್ಲ ಅನ್ನುವುದು ಖಾತರಿ ಆಗುತ್ತಿದೆ.ಆಡಳಿತ ಯಂತ್ರಗಳು ಮುಂದಿನ ದಿನಗಳಲ್ಲಿ ಸಮರೋಪಾದಿಯಲ್ಲಿ ಶಿಸ್ತು ಬದ್ಧವಾದ ಹಾಗೂ ಅಚ್ಚುಕಟ್ಟಿನ ನೀರಿನ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ನೀರಿಗಾಗಿ ಹೊಡೆದಾಟ, ಕೊಲೆ ದೊಂಬಿ ರಕ್ತ ಸಂಘರ್ಷಗಳು ನಡೆದು ನಗರಗಳು ಜನರಹಿತವಾಗಿ ಇಡೀ ನಾಗರಿಕ ಸಾಮ್ರಾಜ್ಯ ಮೂಲೆಗುಂಪಾಗುವ ದಿನಗಳು ದೂರವಿಲ್ಲ. ಹಾಗಾದರೆ ಆಡಳಿತ ಯಂತ್ರಗಳು ಯಾವ ಮುಂಜಾಗ್ರತೆ ತೆಗೆದುಕೊಳ್ಳಬಹುದು?
ತುರ್ತು ಪರಿಹಾರೋಪಾಯಗಳು: ೧. ಎಲ್ಲಾ ನಗರ ವ್ಯಾಪ್ತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಈಗ ಇರುವ ನೀರಿನ ಲಭ್ಯತೆ ಬಗ್ಗೆ ಹಾಗೂ ತಾವು ಎ? ದಿನದವರೆಗೆ ನೀರು ಸರಬರಾಜು ಮಾಡಲು ಸಾಧ್ಯ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು.೨. ತುರ್ತಾಗಿ ನೀರು ಒದಗಿಸಲು ಸಾಧ್ಯ ಆಗುವಂತೆ ಖಾಸಗಿ ಸ್ವತ್ತಿನಲ್ಲಿರುವ ನೀರಿನ ಮೂಲಗಳನ್ನು ಆದ? ಬೇಗ ಗುರುತಿಸಬೇಕು. ೩. ರಸ್ತೆಗೆ ನೀರು ಹಾಕುವವರು, ನೀರು ಪೋಲು ಮಾಡುವವರನ್ನು ಗುರುತಿಸಿ ದಂಡ ಹಾಕಬೇಕು ಹಾಗೂ ಬೇರೆಯವರಿಗೆ ಆ ವಿಷಯ ತಿಳಿಯುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿ ಪ್ರಸಾರ ಆಗುವಂತೆ ನೋಡಿಕೊಳ್ಳಬೇಕು. ೪. ಪ್ರತಿ ನಿವಾಸಿಗಳ ಪ್ರದೇಶವಾರು ಸಾರ್ವಜನಿಕ ಸಭೆಗಳನ್ನು ಮಾಡಿ ಜನರ ಸಹಭಾಗಿತ್ವದಲ್ಲಿ ಸಭೆ ನಡೆಸುವುದು, ಪ್ರಚಾರ ಮಾಡುವುದು, ಮನವರಿಕೆ ಮಾಡುವುದು ಮುಖ್ಯ ಆದ್ಯತೆ ಮಾಡಿಕೊಳ್ಳಬೇಕು. ೫. ಇರುವ ನೀರನ್ನು ಮಿತವ್ಯಯವಾಗಿ ಬಳಸಲು ಅನುಕೂಲ ಆಗಲು ದಿನ ಬಿಟ್ಟು ದಿನಕ್ಕೆ ನೀರು ಬಿಡಬೇಕು. ೬. ತುರ್ತು ಸ್ಥಿತಿ ನೀಗುವವರೆಗೆ ಖಾಸಗಿ ಕೊಳವೆ ಬಾವಿಯ ನೀರು ಸಹ ಪೋಲಾಗದಂತೆ ಟಾಸ್ಕ ಪೋರ್ಸ್ ರಚಿಸಬೇಕು. ಸಂಸ್ಕರಿಸಿದ ಶುದ್ಧವಾದ ನೀರು ಕೇವಲ ಕುಡಿಯಲು ಬಳಸುವಂತೆ ಹಾಗೂ ಕೊಳವೆ ಬಾವಿ ನೀರನ್ನು ಇತರೆ ಉಪಯೋಗಕ್ಕೆ ಬಳಸುವಂತೆ ಜಾಹೀರಾತು ಮಾಡಬೇಕು. ಇದಕ್ಕಾಗಿ ಸಮಾಜಕ್ಕಾಗಿ ದುಡಿಯುವ ಜನಸೇವಕರು ಹಾಗೂ ಸ್ವಾಮೀಜಿಗಳನ್ನು ಬಳಸಬೇಕು. ೭. ಗಣ್ಯ ವ್ಯಕ್ತಿಗಳು ಹಾಗೂ ಅಧಿಕಾರಿಗಳು ತಾವು ಮಿತವ್ಯಯವಾಗಿ ನೀರನ್ನು ಹೇಗೆ ಬಳಸುತ್ತಿದ್ದೇನೆ ಎಂಬ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಬೇಕು. ೮. ನೀರಿನ ದುರಪಯೋಗದಿಂದ ಆಗುವ ದುಷ್ಪರಿಣಾಮಗಳ ಹಾಗೂ ಅನಾಹುತಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಬೇಕುಒಟ್ಟಾರೆ ಜಲಕ್ಷಾಮ ಎಂಬುದು ಮಹಾ ವಿಪತ್ತು. ಇದನ್ನು ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ಸಾಧ್ಯವಾದ ವೇದಿಕೆಗಳಲ್ಲಿ ಪುನಃ, ಪುನಃ ಪ್ರಸ್ತಾಪಿಸುತ್ತಲೇ ಇರಬೇಕು. ಜಲಕ್ಷಾಮ ಎದುರಿಸುವ ದೀರ್ಘ ಕಾಲದ ಉಪಾಯಗಳು:೧. ಹಣಕಾಸು ನಿರ್ವಹಣೆಗೆ ಸಚಿವಾಲಯ ಹಾಗೂ ಬಜೆಟ್ ಇರುವಂತೆ ನೀರಿನ ನಿರ್ವಹಣೆಗೆಂದೇ ಪ್ರತ್ಯೇಕವಾದ ಬಜೆಟ್ ಇರಬೇಕು. ೨. ಮಳೆ ನೀರು ಹಿಡಿದಿಡಲು ಬಳಸಿದ ನೀರು ಮರುಬಳಕೆ ಆಗಲು ಹಾಗೂ ಒಂದು ಹನಿಯೂ ಸಹ ಪೋಲಾಗಿ ಹೋಗದಂತೆ ತಡೆಯಲು ಇಸ್ರೇಲ್ ದೇಶದಲ್ಲಿದ್ದಂತೆ ತಜ್ಞರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕು. ೩. ಕೃಷಿ ಹಾಗೂ ತೋಟಗಾರಿಕೆ ಬೆಳೆಗೆಗಳಿಗೆ ನೀರಿನ ಲಭ್ಯತೆ ಹಾಗೂ ಅಗತ್ಯತೆಯ ಬಗ್ಗೆ ವ್ಯವಸ್ಥಿತ ನೀರಿನ ನಿರ್ವಹಣೆಗೆ ಒತ್ತು ನೀಡುವ ಪ್ರತಿಯೊಂದು ಹನಿಗೆ ಲೆಕ್ಕ ನೀಡುವ ಕೈಪಿಡಿ ತಯಾರಿಸಬೇಕು ೪. ಕಾರ್ಖಾನೆಗಳಿಂದ ಬರುವ ತ್ಯಾಜ್ಯ ನೀರನ್ನು ಮರು ಸಂಸ್ಕರಿಸಿ ಬಳಸುವಂತಹ “ನೀರಿನ ಶೂನ್ಯ ವ್ಯರ್ಥ” ಎಂಬ ತತ್ವ ಜಾರಿಗೆ ತರಬೇಕು . ೫. ನೀರಿನ ಬಳಕೆ ಹಾಗೂ ಸಂಶೋಧನೆಗೆ ಒತ್ತು ನೀಡುವಂತಹ ಶಾಲಾ ಕಾಲೇಜು ಶಿಕ್ಷಣದಲ್ಲಿ ಮನುಷ್ಯನ ಅಳಿವು ಉಳಿವು ಹಾಗೂ ಬೆಳವಣಿಗೆಗೆ ನೀರು ಎಷ್ಟು ಮಹತ್ವದ ಸ್ಥಾನ ಪಡೆದಿದೆ ಎಂಬುದನ್ನು ತಿಳಿಸುವಂತಹ ಪಠ್ಯ ಕ್ರಮಗಳನ್ನು ಅಳವಡಿಸಬೇಕು. ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಬಂಧನಗಳಿಗೆ ಪುರಸ್ಕಾರ ನೀಡಬೇಕು ೬. ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಟ್ಟಡದಲ್ಲಿ ಮಳೆ ನೀರು ಇಂಗಿಸುವ, ಹಿಡಿದಿಡುವ ಹಾಗೂ ಕುಡಿಯುವ ನೀರು ಸಂಗ್ರಹ ಮಾಡುವುದನ್ನು ಕಡ್ಡಾಯ ಗೊಳಿಸಬೇಕು. ೭. ಹೊಸ ಲೇಔಟ್ಗಳಿಗೆ ಲೈಸೆನ್ಸ್ ನೀಡುವ ಮೊದಲು ಮಳೆ ನೀರು ಹಿಡಿದಿಡುವ ಹಾಗೂ ಒದಗಿಸುವ ನೀರಿನ ಸ್ವಾವಲಂಬನೆ ಕಡ್ಡಾಯಗೊಳಿಸಬೇಕು.೮. ಮನೆಬಳಕೆಯ ನೀರಿನ ಮಿತವ್ಯಯಕ್ಕೆ ಬೇಕಾದ ಉಪಕರಣಗಳ ಸಂಶೋಧನೆ ಬಳಕೆಗೆ ಒತ್ತು ನೀಡಬೇಕು.೯. ಸರ್ಕಾರಿ ಮಟ್ಟದಲ್ಲಿ ಉತ್ತಮ ನೀರಿನ ನಿರ್ವಹಣೆ ಮಾಡುವ ಸಂಸ್ಥೆಗಳನ್ನು ಪುರಸ್ಕರಿಸುವಂತೆ ಕಳಪೆ ನಿರ್ವಹಣೆಗೆ ಕಾನೂನು ಅಂಕುಶ ದಂಡ ಹಾಗೂ ಸೆರೆಮನೆ ಇಂತಹ ಪರಿಕ್ರಮಗಳನ್ನು ಸಹ ಬಳಸಿಕೊಳ್ಳಬೇಕು. ಆದಾಯ ಎ? ಇರಲಿ, ಅಚ್ಚುಕಟ್ಟಾದ ಜೀವನಶೈಲಿ ಎಂದೆಂದಿಗೂ ತೃಪ್ತಿ, ನೆಮ್ಮದಿ ಹಾಗೂ ಆನಂದ ನೀಡುವಂತೆ ಮಳೆ ಬರಲಿ ಬಿಡಲಿ, ಅಚ್ಚುಕಟ್ಟಾದ ನೀರಿನ ಬಳಕೆ ನಮ್ಮನ್ನೆಲ್ಲಾ ಪೋಷಿಸುತ್ತದೆ.ಆದಷ್ಟು ಬೇಗ ಮಳೆ ಬರಲಿ, ಎಲ್ಲರ ಬಾಯಾರಿಕೆ ನೀಗಲಿ, ಜಲಕ್ಷಾಮದ ಆಪತ್ತು ನೀಗಲಿ ಎಂದು ಪ್ರಾರ್ಥಿಸೋಣ.ಲೇಖನ: ಸಮಾಜ ಚಿಂತಕ ಶ್ರೀಧರ್ ಎನ್.ಎಂ.