i
ಉತ್ತಮ ರಸ್ತೆ ಕಿತ್ತು ಹೊಸದಾಗಿ ಸಿಸಿ ರಸ್ತೆ ನಿರ್ಮಿಸಲು ಹೊರಟ ಅಧಿಕಾರಿಗಳು!..
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದಲ್ಲಿ ಬಹುತೇಕ ಮುಖ್ಯ ರಸ್ತೆಗಳು ಗುಂಡಿ ಬಿದ್ದಿದ್ದು, ಮಳೆ ಬಂದರೆ ರಸ್ತೆಗಳೆ ಮಿನಿ ಹೊಂಡಗಳಾಗಿ ಮಾರ್ಪಾಡಾಗುತ್ತವೆ. ಈ ಹಾಳಾದ ರಸ್ತೆಗಳಲ್ಲಿ ಬಿದ್ದ ವಾಹನ ಸವಾರರು ಕೈ-ಕಾಲು ಮುರಿದುಕೊಂಡಿದ್ದಾರೆ. ರಸ್ತೆಗಳಲ್ಲಿ ಸಂಚಾರ ಮಾಡಲು ಪಾದಚಾರಿಗಳೂ ಸಹ ಪರದಾಡುವ ಪರಿಸ್ಥಿತಿ ಇದೆ. ಇಂದಿಗೂ ಹಲವು ಬಡಾವಣೆಗಳಲ್ಲಿ ಕಚ್ಚಾ ರಸ್ತೆಗಳೇ ಇವೆ. ಆದರೆ, ಇಲ್ಲೊಂದು ಕಡೆ ಮಾತ್ರ ಸುಸ್ಥಿತಿಯಲ್ಲಿದ್ದ ಸಿಮೆಂಟ್ ರಸ್ತೆಯನ್ನೇ ಕಿತ್ತು ಹಾಕಿ ಹೊಸದಾಗಿ ರಸ್ತೆ ಮಾಡುವ ಕರಾಮತ್ತು ನಡೆದಿದೆ.
ಶಾಂತಿನಗರದಲ್ಲಿ ಟ್ಯಾಂಕ್ರಸ್ತೆಗೆ ಸಿಮೆಂಟ್ ಹಾಕಲಾಗಿತ್ತು. ಯಾವುದೇ ಗುಂಡಿಗಳಿಲ್ಲದೇ ರಸ್ತೆ ಸುಸ್ಥಿತಿಯಲ್ಲಿತ್ತು. ಹೀಗಿದ್ದರೂ ಶುಕ್ರವಾರ ರಸ್ತೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ.
ಸಾರ್ವಜನಿಕರು ಈ ಕುರಿತು ಪ್ರಶ್ನಿಸಿದಾಗ, ನಾವು ಗುತ್ತಿಗೆದಾರರು ಹೇಳಿದ ಹಾಗೆ ಮಾಡಿದ್ದೇವೆ ಎಂದು ಕೆಲಸಗಾರರು ಹೇಳಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಜಿಲ್ಲಾಡಳಿತ ಹೊಸದಾಗಿ ರಸ್ತೆ ಮಾಡುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಟ್ಯಾಂಕ್ ರಸ್ತೆ ಉತ್ತಮವಾಗಿದ್ದರೂ ಕಿತ್ತುಹಾಕಿ ಹೊಸ ರಸ್ತೆ ಮಾಡುವ ಅನಿವಾರ್ಯತೆ ಏನಿತ್ತು. ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉತ್ತಮವಾದ ಸಾಕ್ಷಿ ಬೇರೆ ಬೇಕಿಲ್ಲ. ನಗರದಲ್ಲಿ ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಚ್ಚಾರಸ್ತೆಗಳು ಈವರೆಗೂ ಸಿಮೆಂಟ್, ಡಾಂಬರು ಭಾಗ್ಯ ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಸುಭದ್ರವಾಗಿದ್ದ ರಸ್ತೆಯನ್ನೇ ಕಿತ್ತುಹಾಕಿ, ಹೊಸದಾಗಿ ಸಿಮೆಂಟ್ ಹಾಕಲು ಹೊರಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.