i
ಸನ್ಮಾನ ಗೌರವಗಳಿಂದ ಸಮಾಜದಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ-ಕರಿಯಪ್ಪ ಮಾಳಿಗೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಯಾವುದೇ ಒಬ್ಬ ವ್ಯಕ್ತಿಯನ್ನು ಮತ್ತೊಬ್ಬರು ಅವರ ಸಾಹಿತ್ಯ ಸೇವೆ, ಸಾಂಸ್ಕೃತಿಕ ಸೇವೆ, ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸುವುದರಿಂದ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯ ಪಟ್ಟರು. ಪಟ್ಟಣದ ಬಸವೇಶ್ವರ ನಗರದ ಅವರ ಮನೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರದ ಪ್ರಾಧಿಕಾರ ಅಕಾಡೆಮಿಗಳು, ಸಮಾಜ ಸಮುದಾಯಕ್ಕೆ ಕನ್ನಡ ನಾಡಿನ ಪರಂಪರೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪರಿಚಯಿಸುತ್ತವೆ. ಸಾಹಿತ್ಯ, ಸಂಗೀತ, ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೊಡುಗೆಯನ್ನು ಜನಸಮಾನ್ಯರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ತಿಳಿಸುತ್ತವೆ. ಸರ್ಕಾರ ವಿವಿಧ ಪ್ರಶಸ್ತಿ, ಗೌರವ ನೀಡಿ ಸನ್ಮಾನಿಸುವುದರಿಂದ ವ್ಯಕ್ತಿಗಳು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು. ಕರ್ನಾಟಕ ಜಾನಪದ ಪರಿಷತ್ತು, ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಡಾ. ಜೆ.ಕರಿಯಪ್ಪ ಮಾಳಿಗೆಯವರು ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ೩೦ ವರ್ಷ, ಜಿಲ್ಲಾ ಜಾನಪದ ಪರಿಷತ್ತಿನಲ್ಲಿ ೧೦ ವರ್ಷ ಸೇವೆ ಮಾಡಿ ಸಮಾಜಕ್ಕೆ ಹಲವಾರು ಕೃತಿಗಳನ್ನು ಪರಿಚಯಿಸಿದ್ದಾರೆ. ಇವರ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಸರ್ಕಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಬಿ.ಟಿ.ಶಂಕರಲಿಂಗಯ್ಯ, ಜೆ.ಹನುಮಂತರೆಡ್ಡಿ, ಎಂ.ಬಿ.ಲಿಂಗಪ್ಪ, ಪಿ.ಎಂ.ತಿಪ್ಪೇಸ್ವಾಮಿ, ಎಂ.ಶಿವಲಿಂಗಪ್ಪ ಹಾಗು ಇತರರು ಉಪಸ್ಥಿತರಿದ್ದರು.