i
ಜಿಲ್ಲೆಯಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ ಸಮಾನತೆ ಇದ್ದರೆ ಪ್ರಗತಿ ಸಾಧ್ಯ..
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲೆಯು ಗಂಡು ಮತ್ತು ಹೆಣ್ಣಿನ ಅನುಪಾತದಲ್ಲಿ ಸಮಾನತೆ ಹೊಂದುವ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಗಳು ಪ್ರಗತಿಯತ್ತ ಸಾಗುತ್ತಿವೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿಂದು ಭಾವಸಾರ ವಿಜನ್ ಇಂಡಿಯಾ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಮ್ಮಿಕೊಂಡಿದ್ದ ಮಹಿಳಾ ಸಜಾ ಮತ್ತು ವಿಚಾರಣಾಧೀನ ಬಂಧಿಗಳಿಗೆ ವಿವಿಧ ಆಟೋಟ ಸ್ಫರ್ಧೆ ಹಾಗೂ ಆರೋಗ್ಯ ತಿಳುವಳಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ವಚನಕಾರ ಬಸವಣ್ಣ ಹಾಗೂ ಆನಂತರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗಂಡು ಮತ್ತು ಹೆಣ್ಣಿನ ನಡುವಿನ ಸಮಾನತೆಗಾಗಿ ಹೋರಾಡುವ ಮೂಲಕ ಸಮಾನತೆಯ ಮಹತ್ವ ಸಾರಿದ್ದರು. ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ ಎಲ್ಲಿ ಇರುತ್ತದೋ ಅಲ್ಲಿ ಪ್ರಗತಿ ಸಾಧ್ಯ ಎಂಬುದನ್ನು ಅವರು ಮನಗಂಡು ಸಮಾಜಕ್ಕೆ ಮನವರಿಕೆ ಮಾಡಿದ್ದರು ಎಂದರು.
ದೇಶದಲ್ಲಿ ೧೦೦೦ ಪರುಷರಿಗೆ ೯೨೭ ಹೆಣ್ಣು ಮಕ್ಕಳ ಅನುಪಾತವಿದೆ, ಗಂಡು ಮತ್ತು ಹೆಣ್ಣಿನ ಅನುಪಾತದಲ್ಲಿ ಸಮಾನತೆ ಇರುವ ಜಿಲ್ಲೆ, ರಾಜ್ಯ ಹಾಗೂ ದೇಶಗಳು ಅಭಿವೃದ್ಧಿಯತ್ತ ಮುನ್ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅಮೇರಿಕ, ಲಂಡನ್, ಯುಕೆ ಹಾಗೂ ಜಪಾನ್ ದೇಶಗಳನ್ನು ಉದಾಹರಣೆಯಾಗಿ ನೋಡಬಹುದು. ಭಾರತದ ಲ್ಲಿಯೂ ಕೇರಳ ರಾಜ್ಯ ಸಮಾನತೆ ಹೊಂದಿದೆ, ಹಾಗೆಯೇ ಶಿವಮೊಗ್ಗ ಜಿಲ್ಲೆ ಕಳೆದ ೧೦- ರಿಂದ ೧೫ ವರ್ಷಗಳಿಂದೀಚೆಗೆ ಗಂಡು ಮತ್ತು ಹೆಣ್ಣಿನ ಅನುಪಾತ ದಲ್ಲಿ ಬಹುತೇಕ ಸಮಾನತೆ ಸಾಧಿಸುತ್ತಿದೆ, ಅದಕ್ಕೆ ಪೂರಕವೆಂಬAತೆ ಅಭಿವೃದ್ಧಿ ಯಲ್ಲೂ ಮುನ್ನಡೆದಿದೆ ಎಂದು ಹೇಳಿದರು.
ಮಹಿಳಾ ಜೈಲು ಅಧೀಕ್ಷಕಿ ಜಿ. ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು.ಭಾವಸಾರ ವಿಜನ್ ಇಂಡಿಯಾದ ಅಧ್ಯಕ್ಷ ದಿನೇಶ್ ಕುಂಠೆ ಹಾಗೂ ಚೇತನಾ ವಿನಯ್ ಅಂಬೋರೆ, ಗಜೇಂದ್ರನಾಥ್ ಮಾಳೋದೆ, ಕಮಲಾಕರ್, ಮಮತಾ, ಲತಾ ಮೊದಲಾದವರಿದ್ದರು.