i
ರಘು ಚಂದನ್ ಅಭಿಮಾನಿ ಕಾರ್ಯಕರ್ತರ ಪ್ರತಿಭಟನೆ, ಗೋಬ್ಯಾಕ್ ಕಾರಜೋಳ, ಗೋಬ್ಯಾಕ್ ಚಂದ್ರಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ, ಟಿಕೆಟ್ ಆಕಾಂಕ್ಷಿ ರಘುಚಂದನ್ ಗೆ ಟಿಕೆಟ್ ಕೈ ತಪ್ಪಿರುವುದರ ವಿರುದ್ಧ ಅವರ ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದಲ್ಲದೆ ಬಿಜೆಪಿ ವರಿಷ್ಠರು, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಚಿತ್ರದುರ್ಗ ಬಿಜೆಪಿ ಕಚೇರಿಗೆ ಗೋವಿಂದ್ ಕಾರಜೋಳ ಶುಕ್ರವಾರ ಸಂಜೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಅರಿತ ರಘುಚಂದನ್ ಅಭಿಮಾನಿಗಳು ಚಳ್ಳಕೆರೆ ಟೋಲ್ ಗೇಟ್ ಬಳಿ ಗಂಟೆ ಗಟ್ಟಲೆ ಕಾದು ಕೂಳಿತರು. ಚಳ್ಳಕೆರೆ ಟೋಲ್ ಗೇಟ್ ಬಳಿಯೇ ದೊಡ್ಡ ಸಂಖ್ಯೆಯಲ್ಲಿದ್ದ ರಘು ಚಂದನ್ ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿ ವರಿಷ್ಠರು, ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಮತ್ತಿತರರ ವಿರುದ್ಧ ಆಕ್ರೋಶದ ಮಾತುಗಳಿಂದ ಧಿಕ್ಕಾರಗಳನ್ನು ಕೂಗಿ ಮನದ ಸಿಟ್ಟು ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ಗೋವಿಂದ ಕಾರಜೋಳ ಅವರ ಕಾರಿಗೆ ರಘು ಚಂದನ್ ಅವರ ಅಭಿಮಾನಿಗಳು, ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಎಂ ಚಂದ್ರಪ್ಪ ಪುತ್ರ ರಘು ಚಂದನ್ ಅವರಿಗೆ ಟಿಕೆಟ್ ಮಿಸ್ ಆದ ಹಿನ್ನೆಲೆ ಗೋವಿಂದ ಕಾರಜೋಳ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಗೋವಿಂದ ಕಾರಜೋಳ ಚಿತ್ರದುರ್ಗಕ್ಕೆ ಆಗಮಿಸಿದ್ದು ನಗರದ ನ್ಯಾಷನಲ್ ಹೋಟೆಲ್ ಬಳಿ ಗೋವಿಂದ ಕಾರಜೋಳ ಅವರ ಕಾರಿಗೆ ಅಡ್ಡ ಬಂದ ರಘು ಚಂದನ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಗೋ ಬ್ಯಾಕ್ ಕಾರಜೋಳ ಗೋ ಬ್ಯಾಕ್ ಕಾರಜೋಳ ಎಂದು ಘೋಷಣೆಗಳನ್ನ ಕೂಗಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನ ಚದುರಿಸಿ ಕಳಿಸಿದ್ದು ಲೋಕಸಭಾ ಕಾರ್ಯಾಲಯದ ಬಳಿಯೂ ಕೂಡ ಬಿಜೆಪಿಯ ಕಾರ್ಯಕರ್ತರು ಗೋ ಬ್ಯಾಕ್ ಗೋವಿಂದ ಕಾರಜೋಳ ,ಗೋ ಬ್ಯಾಕ್ ಗೋವಿಂದ ಕಾರಜೋಳ ಎಂದು ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದು ಈ ವೇಳೆ ಪ್ರತಿಭಟನಾನಿರತ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದಾರೆ.
ಬಂಧನ- ರಘು ಚಂದನ್ ಅವರ ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದಿನ ಮುಖ್ಯ ರಸ್ತೆಯಲ್ಲಿ ನಿಂತು ಕೂಗಾಟ ಮಾಡುತ್ತಿದ್ದವರನ್ನು ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ, ಮಾಜಿ ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ವರಿಷ್ಠರ ವಿರುದ್ಧ ಧಿಕ್ಕಾರ ಕೂಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿದ್ದವರನ್ನು ಪೊಲೀಸರು ಎತ್ತಿ ಜೀಪಿನ ಒಳಗೆ ಹಾಕಿ ಬಂಧಿಸಿ ಕರೆದೊಯ್ದರು. ಈ ಕಾರ್ಯ ಮಾಡಿದ ಪೊಲೀಸರ ವಿರುದ್ಧವೂ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಇದಕ್ಕೆ ಪ್ರತಿಯಾಗಿ ಗೋವಿಂದ್ ಕಾರಜೋಳ ಅವರ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಪುತ್ರ ಟಿಕೆಟ್ ಆಕಾಂಕ್ಷಿ ರಘು ಚಂದನ್ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಕೆಲವರು ಹೊಳಲ್ಕೆರೆ ಶಾಸಕರಾಗಿರುವ ಚಂದ್ರಪ್ಪನವರು ಕೂಡ ಆ ಕ್ಷೇತ್ರದವರಲ್ಲ, ಅವರೂ ಹೊರಗಿನವರು, ಅವರ ವಿರುದ್ಧ ಹೊಳಲ್ಕೆರೆ ಕ್ಷೇತ್ರದ ಜನತೆ ಗೋ ಬ್ಯಾಕ್ ಚಂದ್ರಪ್ಪ ಎಂದು ಅಭಿಯಾನ ಆರಂಭಿಸಿದರೆ ಏನು ಮಾಡುತ್ತಾರೆ, ದೊಡ್ಡವರು ಇದನ್ನು ತಿಳಿದುಕೊಳ್ಳಬೇಕು, ಗೋವಿಂದ್ ಕಾರಜೋಳ ಅವರೇನು ಅರ್ಜಿ ಹಾಕಿ ಟಿಕೆಟ್ ಬೇಕೆಂದು ಬಂದವರಲ್ಲ, ಪಕ್ಷದ ತೀರ್ಮಾನ, ಮೋದಿ, ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಕೋರ್ ಕಮಿಟಿ ಸದಸ್ಯರುಗಳು, ಚುನಾವಣಾ ನೀತಿ ಸಮಿತಿಯವರು ತೀರ್ಮಾನ ಮಾಡಿ ಗೋವಿಂದ್ ಕಾರಜೋಳ ಅವರಿಗೆ ಟಿಕೆಟ್ ಫೈನಲ್ ಮಾಡಿದ್ದಾರೆ. ಪಕ್ಷದ ವರಿಷ್ಠರನ್ನ ಕೇಳಬೇಕಾದ ರಘು ಚಂದನ್ ಮತ್ತು ಅವರ ತಂದೆ ಚಂದ್ರಪ್ಪನವರ ಅಭಿಮಾನಿಗಳು ಇಲ್ಲಿ ಗಲಾಟೆ ಮಾಡಿದರೆ ತಪ್ಪು ಸಂದೇಶ ಹೋಗಲಿದೆ. ಎಲ್ಲವೂ ಇಲ್ಲಿಗೆ ಕೊನೆಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಹೇಳುತ್ತಿದ್ದರು.
ಉಚ್ಚಟಿಸಲಿ- ಹಾಲಿ ಶಾಸಕ ಎಂ.ಚಂದ್ರಪ್ಪ ಮತ್ತು ಅವರ ಪುತ್ರ ರಘು ಚಂದನ್ ಪಕ್ಷ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದು ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ವರಿಷ್ಠರಲ್ಲಿ ಆಗ್ರಹ ಮಾಡಿದರು.ಗೋವಿಂದ ಕಾರಜೋಳ: ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರತಿಭಟನೆ ಮಾಡುವವರು, ಪಕ್ಷದ ವಿರುದ್ಧ ಧಿಕ್ಕಾರ ಕೂಗುವವರು, ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆಯುವವರಿಗೆ ತಲೆಕೆಡಿಸಿಕೊಳ್ಳಬಾರದು. ನಮ್ಮದು ಶಿಸ್ತಿನ ಪಕ್ಷ. ದೇಶದ 23 ರಾಜ್ಯಗಳಲ್ಲಿನಮ್ಮ ಪಕ್ಷದ ಸರ್ಕಾರ ಇದೆ. ಹಾಗಾಗಿ ಯಾರೂ ಶಿಸ್ತು ಉಲ್ಲಂಘಿಸಬಾರದು.ಎಲ್ಲ ನಾಯಕರೂ ಕೂಲಂಕುಷವಾಗಿ ವಿಚಾರ ಮಾಡಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಸಾಕಷ್ಟು ಅಳೆದು ತೂಗಿ ಆಯ್ಕೆ ಮಾಡಿರುತ್ತಾರೆ. ಪಕ್ಷದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಿದವನು ನಾನು, ಧಿಕ್ಕರಿಸುವ ಶಕ್ತಿನನಗಿಲ್ಲ. ಪಕ್ಷ ತಾಯಿ ಇದ್ದಂತೆ ಎಂದು ತಿಳಿಸಿದರು.
ಪಕ್ಷಕ್ಕೆ ದ್ರೋಹ ಮಾಡುವವರನ್ನು , ಧಿಕ್ಕಾರ ಕೂಗಿ ಗಲಾಟೆ ಮಾಡುವವರ ವರ್ತನೆಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷ ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಲಿದೆ ಎಂದು ಕಾರಜೋಳ ತಿಳಿಸಿದರು.ಏ.26ಕ್ಕೆ ರಾಜ್ಯದ ಮೊದಲ ಹಂತದ ಚುನಾವಣೆ ಆಗುತ್ತೆ. ಸಮಯ ಕಡಿಮೆ ಇದೆ. ಎಲ್ಲ ಮಂಡಲದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ತಕ್ಷಣ ಕರ್ಯಪ್ರವೃತ್ತರಾಗಬೇಕಿದೆ. ಸಾವಿರಾರು ಹಳ್ಳಿಗಳಿರುತ್ತವೆ. ಲೋಕಸಭೆಯಲ್ಲಿ ಎಲ್ಲ ಹಳ್ಳಿಗಳನ್ನು ತಲುಪಲು ಕಷ್ಟ, ಹಾಗಾಗಿ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಹಾಲು, ಜೇನಿನಂತೆ ಬೆರೆತು ಕೆಲಸ ಮಾಡಬೇಕು. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ.ಶಿರಾ, ಹಿರಿಯೂರಿನಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯಬಂದು 70 ವರ್ಷ ಆಗಿದೆ. ಮೋದಿ ಅವರ ಹತ್ತು ವರ್ಷ ಹಾಗೂ ಕಾಂಗ್ರೆಸ್ಸಿನ 60 ವರ್ಷದ ಆಡಳಿತ ಹೋಲಿಕೆ ಮಾಡಿ ಮತದಾರರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂದು ಗೋವಿಂದ್ ಕಾರಜೋಳ ಹೇಳಿದರು.ರಾಮ ಮಂದಿರ ಉದ್ಘಾಟನೆ ದೇಶ ಹಬ್ಬದಂತೆ ಸಂಭ್ರಮಿಸಿದೆ. ಜಗತ್ತಿನ ಬೇರೆ ಬೇರೆ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಕಾಯುತ್ತಿದ್ದಾರೆ.ಚಿತ್ರದುರ್ಗನೀರಾವರಿ ವಂಚಿತಜಿಲ್ಲೆ, ಉದ್ಯಮಗಳಿಲ್ಲ, ಉದ್ಯೋಗ ಇಲ್ಲ. ಬಾಗಲಕೋಟೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ.ಈಚುನಾವಣೆಯನ್ನು ಹಗುರವಾಗಿ ಪರಿಗಣಿಸಬೇಡಿ, ಮನೆ ಮಗ ಎಂದು ನನ್ನನ್ನು ಪರಿಗಣಿಸಬೇಕು ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.ಬೈದವರೆನ್ನ ಬಂಧುಗಳು, ನಿಂದಿಸಿದವರನ್ನ ತಾಯಿ ತಂದೆಗಳು, ಹೊಡೆದವರನ್ನ ಹಡೆದವರು ಎನ್ನಿ. ಯಾರನ್ನು ಏನೂ ಅನ್ನಬೇಡಿ, ನೀವೇ ದೊಡ್ಡವರೆನ್ನಿ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರಲ್ಲಿ ಗೋವಿಂದ್ ಕಾರಜೋಳ ಮನವಿ ಮಾಡಿದರು.ಹಾಲಿ ಸಂಸದ ನಾರಾಯಣಸ್ವಾಮಿ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ತೋರಿಸಿದ್ದರಿಂದ ಜಿಲ್ಲೆಯ ಪಕ್ಷದ ಮುಖಂಡರನ್ನು ಕರೆದು ವಿಚಾರಿಸಿ, ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ರಾಷ್ಟ್ರಿಯ ಸಮಿತಿಗೆ ಶಿಫಾರಸ್ಸು ಮಾಡಿದೆ. ಅದರಂತೆ ವಿರೋಧವನ್ನು ಪಕ್ಷದ ಹಿರಿಯರು ಗಮನಿಸುತ್ತಾರೆ. ನಾನು ಎಂದೂ ರಘುಚಂದನ್ ಓಡಾಡಲು ಹೇಳಿಲ್ಲ. ರಘು ಚಂದನ್ ಅವರಿಗೆ ಟಿಕೆಟ್ ಕೊಡಿಸಲು ನಾನ್ಯಾರು, ನಾನೇನು ರಾಜ್ಯ, ರಾಷ್ಟ್ರೀಯ ಅಧ್ಯಕ್ಷನೇ, ಪ್ರಧಾನ ಮಂತ್ರಿಯೇ ನಾನು ಸಾಮಾನ್ಯರಲ್ಲಿ ಸಾಮಾನ್ಯ ಸುಳ್ಳು ಆಪಾದನೆ ಮಾಡಬಾರದು ಎಂದು ಟಾಂಗ್ ನೀಡಿದರು.ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಟಿಕೆಟ್ ಕೊನೆಯದಾಗಿ ಘೋಷಣೆ ಆಗಿದೆ. ಅದರ ಮಹತ್ವ ಎಷ್ಟು ಎನ್ನುವುದು ನಮಗೆ ಗೊತ್ತಿದೆ. ಬಿಜೆಪಿಯಲ್ಲಿ ಕಾರಜೋಳ ಅವರು 12ನೇ ಶತಮಾನದ ಬಸವಣ್ಣನವರು ಇದ್ದಂತೆ. ಹಾಗಾಗಿ ಬಿಜೆಪಿಗೆ ಅವರ ದೊಡ್ಡ ಶಕ್ತಿ ಎಂದು ಹೇಳಿದರು.
ಶಿರಾ, ಹಿರಿಯೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಗೋವಿಂದ್ ಕಾರಜೋಳ ಅವರಿಗೆ ನೀಡಿದ ಅದ್ಧೂರಿ ಸ್ವಾಗತ, ಚುನಾವಣೆಯಲ್ಲಿನ ಉತ್ಸಾಹ ನೋಡಿದಾಗ ಎರಡು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಸಿಕ್ಕಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲು ಇದು ಮಹತ್ವದ ಸಮಯ. ಅಭ್ಯರ್ಥಿ ಆಯ್ಕೆ ವಿಚಾರದ ಗೊಂದಲ ಸಹಜ. ಆದರೆ,ಮತದಾರರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಕಾಯುತ್ತಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮೋದಿ ಅವರ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಬಿಜೆಪಿ ಕುರಿತು ಉತ್ಸಾಹ ಮೂಡಿದೆ. ನರೇಂದ್ರ ಮೋದಿ ಅವರಿಗೆ ದಕ್ಚಿಣ ಭಾರತದಲ್ಲೂ ವಿಶೇಷವಾಗಿ ಸ್ವಾಗತಿಸುತ್ತಿದ್ದಾರೆ. 400 ಕ್ಕಿಂತ ಹೆಚ್ಚು ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಮೋದಿ ಅವರ ಕೇಂದ್ರದಲ್ಲಿ ಅಧಿಕಾರ ಹಿಡಿದ ಹತ್ತು ವರ್ಷದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆ ತರಲಾಗಿದೆ. ಆರ್ಥಿಕವಾಗಿ 20ನೇ ಸ್ಥಾನದಲ್ಲಿದ್ದ ಭಾರತ, ಇಂದು ಐದನೇ ಸ್ಥಾನಕ್ಕೆ ಬಂದಿದೆ ಇಂತಹ ವಿಚಾರಗಳನ್ನು ಮತದಾರರೇ ಅರಿತಿದ್ದಾರೆ ಎಂದು ತಿಳಿಸಿದರು.ಸರಳತೆಯೇ ನಮ್ಮ ಅಭ್ಯರ್ಥಿ. ಕಮಲದ ಗುರುತುನಮ್ಮ ಅಭ್ಯರ್ಥಿಯಾಗಿದ್ದು ಪಕ್ಷದ ಕಾರ್ಯಕರ್ತರು ಕಟ್ಟಾಳುಗಳು ಸಂಭ್ರಮದಿಂದ ಚುನಾವಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು ಮುಖಂಡರು, ಕಾರ್ಯಕರ್ತರು, ಜೆಡಿಎಸ್ ಪಕ್ಷದವರೆಲ್ಲಾ ಶಕ್ತಿಮೀರಿ ಚುನಾವಣೆ ಮಾಡಬೇಕಿದೆ. ಜೆಡಿಎಸ್ ನಮ್ಮ ಜೊತೆ ಮೈತ್ರಿ ಆಗಿರುವುದು ಈ ಕ್ಷೇತ್ರಕ್ಕೆ ಆನೆ ಬಲಬಂದಂತಾಗಿದೆ ಎಂದು ತಿಳಿಸಿದರು.ವೇದಿಕೆಯಲ್ಲಿರುವ ಕಾರ್ಯಕರ್ತರುಬೇಗ ಒಂದಾಗುತ್ತೇವೆ. ಅದೇ ರೀತಿಬೂತ್ ಮಟ್ಟದ ಕಾರ್ಯಕರ್ತರು ಹಿಂದಿನ ಕಹಿ ಘಟನೆಗಳನ್ನು ಮರೆತು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಗರ್ವ ಭಂಗ ಆಗಬೇಕು. ದಶಕಗಳ ಕಾಲ ಇಲ್ಲಿನ ರೈತರು ಭದ್ರಾ ಮೇಲ್ದಂಡೆಗಾಗಿ ಹೋರಾಟ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಮಾಹಿತಿ ಹೊಂದಿರುವ ನಾಯಕ ಕಾರಜೋಳ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಸಮನ್ವಯ ತಂದು, ಇವರ ಕಾಲಾವಧಿಯಲ್ಲಿ ಪೂರ್ಣಗೊಳಿಸುವ ಕಾರಣಕ್ಕೆ ಕಾರಜೋಳ ಇಲ್ಲಿಗೆ ಬಂದಿದ್ದಾರೆ ಎಂದು ನವೀನ್ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ತರೀಕರೆ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಆಗಬಾರದು ಎಂದು ಹೋರಾಟ ಮಾಡಿದ್ದರು. ನೀರು ತರುವ ಕಾರಜೋಳ ಬೇಕೋ, ನೀರು ತಡೆ ಹಿಡಿದ ಕಾಂಗ್ರೆಸ್ ಅಭ್ಯರ್ಥಿ ಬೇಕೋ ಮತದಾರರೇ ಯೋಚನೆ ಮಾಡಿ ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎ.ಮುರುಲಿ, ಪ್ರೊ.ಲಿಂಗಪ್ಪ, ರಾಮದಾಸ್, ಸಂಪತ್, ಸುರೇಶ್, ಭಾರ್ಗವಿ, ದಗ್ಗೆ ಶಿವಪ್ರಕಾಶ್, ಪಾಲಯ್ಯ ಸೇರಿದಂತೆ ನೂರಾರು ಮಂದಿ ಇದ್ದರು.