i
ಮಾಜಿ ಸಚಿವ ರೇಣುಕಾಚಾರ್ಯ ಸಹೋದರ ದಾರಕೇಶ್ವರಯ್ಯ ನಾಮಪತ್ರ ಸಿಂಧು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯ ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದು ಆ ಪತ್ರ ಆಧರಿಸಿ ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅರ್ಜಿ ಹಾಕಿದ್ದರು. ಅವರ ಅರ್ಜಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸಿಂಧು ಮಾಡುವ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ದಾರಕೇಶ್ವರಯ್ಯ ಅವರ ಪತ್ನಿ ಕೂಡಾ ಸ್ಪರ್ಧೆಗೆ ಅರ್ಜಿ ಹಾಕಿದ್ದು ಅವರ ಅರ್ಜಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅಸಿಂಧುಗೊಳಿಸಿದ್ದಾರೆ.
ಅಭ್ಯರ್ಥಿ ಎಂ.ಪಿ. ದಾರಕೇಶ್ವರಯ್ಯ ಅವರು ಬೇಡ ಜಂಗಮ ಎಂದು ಹೇಳಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಈಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ಅರ್ಜಿ ಸಲ್ಲಿಸುವ ಮೂಲಕ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದಾರೆ.
ಈ ಮೊದಲು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿಗೆ ಎಸ್ಸಿ ಪ್ರಮಾಣ ಪತ್ರವನ್ನು ನೀಡಲಾಗಿದ್ದು ಆ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ವರದಿ ಕೇಳಲಾಗಿತ್ತು.
ರೇಣುಕಾಚಾರ್ಯ ಪುತ್ರಿ ಹಾಗೂ ಸಹೋದರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ 2023 ಏಪ್ರಿಲ್ 19 ಮತ್ತು ಜೂನ್ 27 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ರೇಣುಕಾಚಾರ್ಯ ಪುತ್ರಿ ಹಾಗೂ ಸಹೋದರರು ಪಡೆದ ಸುಳ್ಳು ಜಾತಿ ಪತ್ರ ಪಡೆದಿದ್ದು ಸ್ಪಷ್ಟವಾಗಿದ್ದು, ಈ ಬಗ್ಗೆ ಸ್ಪಷ್ಷ ಮಾಹಿತಿ ನೀಡುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಗೆ ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಜಂಟಿ ಉಪ ನಿರ್ದೇಶಕರು ಪತ್ರ ಬರೆದಿದ್ದರು.
ರೇಣುಕಾಚಾರ್ಯ ಪುತ್ರಿ ಎಂ.ಆರ್. ಚೇತನಾ ಹಾಗೂ ರೇಣುಕಾಚಾರ್ಯ ಸಹೋದರರಾದ ಎಂ.ಪಿ. ದಾರಕೇಶ್ವರಯ್ಯ, ಎಂ.ಪಿ ವಾಗೀಶ್ ಅವರು ಬೇಡ ಜಂಗಮ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಎಂ.ಪಿ ದಾರಾಕೇಶ್ವರಯ್ಯ ಅವರು ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದು ಈ ಹಿಂದೆ ಕಲಬುರಗಿ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಒಮ್ಮೆ ಸ್ಪರ್ಧೆಯನ್ನೂ ಮಾಡಿದ್ದರು, ಈಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲೂ ಎಂ.ಪಿ. ದಾರಕೇಶ್ವರಯ್ಯ ಸ್ಪರ್ಧೆ ಮಾಡಿದ್ದಾರೆ.