i
ಪೋಷಕರಿಗಾಗಿ ಕಲಿಕಾ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗದ ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಪೋಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸುಮಾರು 40ಕ್ಕಿಂತ ಹೆಚ್ಚು ಪೋಷಕರು ಭಾಗವಹಿಸಿದ್ದ ಈ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾದ ಡಾ.ವಿದ್ಯಾ ಪೈರವರು ಮಾತನಾಡಿ ಮಾನಸಿಕ ವಿಕಲಚೇತನರ ಹಾಗೂ ಕಲಿಕಾ ವಿಕಲ ಚೇತನರ ನಡುವಿನ ಅಂತರವನ್ನು ಅತ್ಯಂತ ಸರಳ ಭಾಷೆಯಲ್ಲಿ ಪೋಷಕರಿಗೆ ಅರ್ಥವಾಗುವಂತೆ ವಿವರಿಸಿದರು. ಇದರಿಂದಾಗಿ ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ಪೋಷಕರಿಗೆ ಅರಿವಾಯಿತು.
ಮತ್ತೋರ್ವ ಮುಖ್ಯ ಅತಿಥಿಯಾದ ಡಾ.ತನುಜಾರವರು ಮಾತನಾಡಿ ಮಕ್ಕಳ ವರ್ತನಾ ಸಮಸ್ಯೆಯ ಬಗ್ಗೆ ವಿವರಿಸಿದರು. ಮಕ್ಕಳ ವರ್ತನೆಯ ಬಗ್ಗೆ ಮಾಧ್ಯಮಗಳ ಪಾತ್ರವನ್ನು ತಿಳಿಸಿದರು. ಮಕ್ಕಳೊಂದಿಗೆ ಪೋಷಕರು ಹೇಗೆ ವ್ಯವಹರಿಸಬೇಕೆಂದು ವಿವರಿಸಿದರು. ಮಕ್ಕಳ ಪ್ರಗತಿಯ ಮಟ್ಟವನ್ನು ತಿಳಿಯಲು ಸಂಸ್ಥೆಯು ನಡೆಸಿದ ಕಿರು ಪರೀಕ್ಷೆಗಳ ಅಂಕಗಳನ್ನು ಪರಿಶೀಲಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಅತಿಥಿಗಳನ್ನು ಮನಸ್ಫೂರ್ತಿ ಕಲಿಕಾ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ರಂಗನಾಯಕಿ ಸ್ವಾಗತಿಸಿ, ವಂದಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಮನಸ್ಫೂರ್ತಿ ಕಲಿಕಾ ಕೇಂದ್ರದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.