i
ಮಲ್ಲಪ್ಪನಹಳ್ಳಿಯಲ್ಲಿ ಮೂಡಲ ಮಣೇವು ಸೇವೆ….
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
Mudala Manevu Service in Mallappanahalli….
ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ನಾನು ಹುಟ್ಟಿದ ಊರು. ನಮ್ಮ ಊರಲ್ಲಿ ಯುಗಾದಿಯನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಎಲ್ಲಾ ಜಾತಿಯ ತಿರುಪತಿ ತಿಮ್ಮಪ್ಪನ ಭಕ್ತರು ಮುಂಜಾನೆ ಸ್ನಾನ ಮಾಡಿಕೊಂಡು ಪೂರ್ವಿಕರ ಸಮಾಧಿಗಳಿವೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸೇರುತ್ತಾರೆ. ದೇವಸ್ಥಾನದಲ್ಲಿರುವ ಗರುಡಗಂಭ, ಜಾಗಟೆ-ಬವನಾಸಿ, ಕರಿಕಂಬಳಿ ತೆಗೆದುಕೊಂಡು ಊರ ಪೂರ್ವದಲ್ಲಿರುವ ಬನ್ನಿ ವೃಕ್ಷದ ಬಳಿಗೆ ಬಂದು ಸೇರುತ್ತಾರೆ. ಸುಮಂಗಲಿಯರು ಕಳಸ ಪಂಚಾರತಿ ಹಿಡಿದು ಗೋವಿಂದನ ನಾಮ ಸ್ಮರಣೆ ಮಾಡುತ್ತಾ ಹಿಂಬಾಲಿಸುತ್ತಾರೆ.
ಬನ್ನಿ ವೃಕ್ಷದ ಬಳಿ ಕರಿಕಂಬಳಿ ಗದ್ದುಗೆ ಸಿದ್ಧಪಡಿಸಿ ಅದರ ಮೇಲೆ ಗರುಡಗಂಭ ಜಾಗಟೆ-ಬವನಾಸಿ ಇಟ್ಟು ತಂಬಿಟ್ಟು, ಬಾಳೆಹಣ್ಣು ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ತಿಮ್ಮಪ್ಪನ ದಾಸಯ್ಯನವರು ಹಾಗೂ ಹರಕೆ ಹೊತ್ತವರು ಹಣೆಗೆ ನಾಮ ಹಾಕಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಬರುತ್ತಾರೆ.
ಮೊದಲು ಮೂರು ಬಾರಿ ಮೂಡಲ ಮಣೇವು ಹಾಕಿ ಪ್ರಸಾದ, ಪಾನಕ ಸೇವಿಸುತ್ತಾರೆ. ನಂತರ ಕರಿಕಂಬಳಿ ಗದ್ದುಗೆ ಸುತ್ತ ನಾಲ್ಕು ಬಾರಿ ಉರುಳುಸೇವೆ ಸಲ್ಲಿಸುವರು. ಉರುಳು ಸೇವೆ ಸಲ್ಲಿಸಿದ ಬಳಿಕ ಪುನಃ ನೀರಲ್ಲಿ ಮುಳುಗಿ ಬಂದು ಹೊಸಬಟ್ಟೆ ಧರಿಸುವರು. ಆಗ ಪುನಃ ಹಣೆಗೆ ನಾಮ ಹಾಕಿಸಿಕೊಂಡು ಗೋವಿಂದನ ನಾಮ ಸ್ಮರಣೆ ಮಾಡುತ್ತಾ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂದೆ ಸೇರಿ ಅಲ್ಲಿ ಮಣೇವು ಹಾಕಿ ಬಳಿಕ ಮನೆಗಳಿಗೆ ತೆರಳುತ್ತಾರೆ. ಮನೆಗೆ ಜಾಗಟೆ ಬವನಾಸಿ ಜೊತೆಗೆ ದಾಸಯ್ಯನನ್ನು ಕರೆತಂದು ಮನೆಗಳಲ್ಲಿರುವ ದೇವರ ಮೂರ್ತಿಗಳಿಗೆ ಅಲಂಕರಿಸಿ, ಜಾಗಟೆ ಬವನಾಸಿಗೆ ಎಡೆಹಾಕಿ
“ಗೋವಿಂದ ಗೋವಿಂದ…” ಎನಿಸಿದ ನಂತರ ದಾಸಯ್ಯನ ಜೊತೆಗೆ ಸಹಭೋಜನ ಮಾಡುವ ಮೂಲಕ ಹೊಸ ವರ್ಷದ ಬದುಕಿಗೆ ಚಾಲನೆ ನೀಡುವರು.
ಹೆಜ್ಜೆ ನಡೆಯುವ ಉದ್ದೇಶದಿಂದ ಉದ್ಯೋಗಾರ್ಥವಾಗಿ ಪರ ಊರುಗಳಲ್ಲಿ ವಾಸವಿರುವವರು ಊರಿಗೆ ಮರಳಿ ಬಂದು ಯುಗಾದಿ ಮುಗಿಸಿಕೊಂಡು ತೆರಳುತ್ತಾರೆ.
ಎರಡನೆಯ ದಿನ ತಮ್ಮ ಮನೆ ದೇವರುಗಳ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಹಾಗೂ ಗ್ರಾಮದ ಐನೋರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿ ಈಗ ಇರುವ ಐಯ್ಯನವರಿಂದ ಆಶೀರ್ವಾದ ಪಡೆಯುವರು. ಸಂಜೆ ಯುಗಾದಿ ಚಂದ್ರನ ದರ್ಶನ ಮಾಡಿದ ಬಳಿಕ ಐಯ್ಯನವರಿಗೆ ಹಾಗೂ ಗುರು-ಹಿರಿಯರು, ಹೆತ್ತವರಿಗೆ ನಮಸ್ಕರಿಸುವರು.
ದಶಕಗಳ ಹಿಂದೆ ಎರಡನೆಯ ದಿನ ಗ್ರಾಮದ ಪ್ರಮುಖರು ಹಾಗೂ ಯುವಕರು ಬೇಟೆಗೆಂದು ಬಯಲಿಗೆ ಹೋಗಿ ಹುಲುಸು ತರುವ ಸಂಪ್ರದಾಯವಿತ್ತು. ಬದಲಾದ ಕಾನೂನು ಕಾರಣಕ್ಕೆ ಬೇಟೆ ಸಂಸ್ಕೃತಿ ನಿಂತು ಹೋಗಿದೆ.
ಮೂರನೆಯ ದಿನ ಮಾಂಸಾಹಾರಿಗಳು ಹೊಸವರ್ಷದ ‘ಕರಿ’ ಸೇವನೆ ಮಾಡುತ್ತಾರೆ.