i
ಸಾಧನೆಗೆ ಪರಿಶ್ರಮ, ಏಕಾಗ್ರತೆ ಮೆಟ್ಟಿಲ…
ಚಂದ್ರವಳ್ಳಿ ನ್ಯೂಸ್,
ಶಿವಮೊಗ್ಗ: Perseverance, concentration is the step to achievement…
ನಿರಂತರ ಪರಿಶ್ರಮ ವಹಿಸಿ ಅಭ್ಯಾಸ ಮಾಡುವುದು, ಛಲ, ಏಕಾಗ್ರತೆಯಿಂದ ಕೆಲಸ ಮಾಡುವುದರಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದು ಎಂದು ಗಾಯಕ ಭದ್ರಾವತಿ ವಾಸು ಅಭಿಪ್ರಾಯಪಟ್ಟರು.
ವಿನೋಬನಗರದ ವಿಧಾತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ “ಜೇನುಗೂಡು ಸಿಂಗರ್ಸ್ ಗ್ರೂಪ್” ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಕಡಿಮೆ ಅವಧಿಯಲ್ಲಿ ಕಲಾವಿದರಾಗಭೇಕು, ಪ್ರಖ್ಯಾತಿ ಗಳಿಸಬೇಕು ಎನ್ನುವ ಮನೋಭಾವ ಹೊಂದಿದ್ದಾರೆ. ರಿಯಾಲಿಟಿ ಶೋಗಳ ಬೆನ್ನುಬಿದ್ದಿದ್ದಾರೆ. ಒಳ್ಳೆಯ ಗುರುಗಳಲ್ಲಿ ಅಭ್ಯಾಸ ಮಾಡಿ ಶ್ರದ್ಧೆಯಿಂದ ಕಲಿತರೆ ಸಂಗೀತ ಒಲಿಯುತ್ತದೆ. ಮನುಷ್ಯನ ಮನಸ್ಸನ್ನು ವಿಕಸಿತಗೊಳಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಸಾಧಕನ ಸ್ವತ್ತು. ಸಂಗೀತದಿಂದ ಖಿನ್ನತೆ ದೂರವಾಗುತ್ತದೆ. ಸದಾ ಲವಿಲವಿಕೆಯಿಂದ ಮತ್ತು ಸಂತೋಷದಿಂದ ಇರುವಂತೆ ಮಾಡುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಗೀತ ಆಸಕ್ತಿ ಬೆಳೆಸಬೇಕು. ಆದ್ದರಿಂದ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೇನುಗೂಡು ಸಿಂಗರ್ಸ್ ಗ್ರೂಪ್ ಗೌರವಾಧ್ಯಕ್ಷ ವಿರೂಪಾಕ್ಷಪ್ಪ ಎಸ್.ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಉತ್ತಮ ಕೆಲಸ. ಉದಯೋನ್ಮುಖ ಕಲಾವಿದರು ಆಸಕ್ತಿಯಿಂದ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾನ ಮನಸ್ಕರ ವೇದಿಕೆಯಿಂದ ಹೊಸ ಪ್ರತಿಭೆಗಳು ಹೊರಬರಬೇಕು ಎಂಬುದು ನಮ್ಮ ಆಶಯ ಎಂದರು. ಇದೇ ಸಂದರ್ಭದಲ್ಲಿ ಗಾಯಕ ಭದ್ರಾವತಿ ವಾಸು ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್ ಅವರು ಎಲ್ಲರನ್ನು ಅಭಿನಂದಿಸಿ ಗೌರವಿಸಿದರು. ವೇದಿಕೆ ಕಲಾವಿದರು ಭಾವಗೀತೆ, ಚಿತ್ರಗೀತೆ, ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಗಾಯಕಿ ಕುಮಾರಿ ಆದ್ಯ, ಅಧ್ಯಕ್ಷ ಸಂಜಯ್, ಶೋಭಾ, ಖಜಾಂಚಿ ಆಶಾ ಹಿರೇಮಠ್, ಉಪಾಧ್ಯಕ್ಷ ಸರ್ವೇಶ್ವರ್ ಎಸ್. ಹಾಗೂ ಕಲಾವಿದರು, ಸದಸ್ಯರು ಉಪಸ್ಥಿತರಿದ್ದರು.