i
ಅಂಬೇಡ್ಕರ್ರವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶಕ್ಕೆ ಸಂವಿಧಾನ ಕೊಟ್ಟಂತ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ರವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮತದಾರರಲ್ಲಿ ಮನವಿ ಮಾಡಿದರು.ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟಿದ್ದಷ್ಟೆ ಅಲ್ಲ, ದಲಿತರು, ಶೋಷಿತರು, ಅಸ್ಪೃಶ್ಯರನ್ನು ಮನುಷ್ಯರಂತೆ ಕಾಣಿ ಎನ್ನುವ ಜಾಗೃತಿ ಮೂಡಿಸಿದರು. ಇಂತಹ ಮಹಾನ್ ನಾಯಕನನ್ನು ದೇಶದ ಪ್ರಧಾನಿಯನ್ನಾಗಿ ಮಾಡಬಹುದಿತ್ತು. ಕಾಂಗ್ರೆಸ್ ಮಾಡಲಿಲ್ಲ. ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತು. ನಾರಾಯಣ್ ಸದೋಬ ಕಾರ್ಜುಲ್ ಖರ್ಗೆಯನ್ನು ಅಂಬೇಡ್ಕರ್ ವಿರುದ್ದ ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದಲ್ಲದೆ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟಿತು. ಅಂಬೇಡ್ಕರ್ ಜೀವಂತವಿರುವವರೆಗೂ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದಾಗ ಭಾರತ ರತ್ನ ನೀಡಿ ಡಾ.ಬಿ.ಅಂಬೇಡ್ಕರ್ರವರನ್ನು ಗೌರವಿಸಿತು ಎಂದು ಹೇಳಿದರು.ಡಾ.ಬಿ.ಆರ್.ಅಂಬೇಡ್ಕರ್ ಕೊನೆಯುಸಿರೆಳೆದಾಗ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಜಾಗ ಕೊಡಲಿಲ್ಲ. ಜವಾಹರಲಾಲ್ ನೆಹರುರವರ ಅಂತ್ಯಸಂಸ್ಕಾರಕ್ಕೆ ೫೨.೬ ಎಕರೆ ಜಾಗ ನೀಡಿದೆ. ಇಂದಿರಾಗಾಂಧಿ ಸಮಾಧಿಗೆ ೪೨ ಎಕರೆ ಜಾಗ ನೀಡಿ ಶಾಂತಿವನ ಎಂದು ಹೆಸರಿಟ್ಟಿದೆ. ರಾಜೀವ್ಗಾಂಧಿಗೆ ೧೫ ಎಕರೆ ಜಾಗ ನೀಡಿದೆ. ೧೪೦ ಕೋಟಿ ಜನರಿಗೆ ಎಸಗಿರುವ ಐತಿಹಾಸಿಕ ದ್ರೋಹ. ಇಂತಹ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ವಿಮಾನದಲ್ಲಿ ಅಂಬೇಡ್ಕರ್ರವರ ದೇಹವನ್ನು ತೆಗೆದುಕೊಂಡು ಹೋಗಲು ಕಾಂಗ್ರೆಸ್ ಹಣದ ನೆರವು ನೀಡಲಿಲ್ಲ ಎಂದು ಆಪಾದಿಸಿದರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಿಂದಲೂ ದಲಿತರನ್ನು ಓಟ್ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ಸರಿಯಾಗಿ ಜಾರಿಗೊಳಿಸಿಲ್ಲ.ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಆಡಳಿತ ಮಾಡುತ್ತಿರುವ ನರೇಂದ್ರಮೋದಿರವರು ಪಂಚತೀರ್ಥ ಯೋಜನೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ರವರಿಗೆ ಗೌರವ ಸಮರ್ಪಿಸಿದ್ದಾರೆ. ಮಧ್ಯಪ್ರದೇಶದ ಮೋಹದ ಜನ್ಮಭೂಮಿಯಲ್ಲಿ ಎರಡು ಲಕ್ಷ ಜನರಿಗೆ ದರ್ಶನ ಭಾಗ್ಯ ಕಲ್ಪಿಸಿದ್ದಾರೆ. ಬ್ಯಾರಿಸ್ಟರ್ ಶಿಕ್ಷಣಕ್ಕಾಗಿ ಅಂಬೇಡ್ಕರ್ ಲಂಡನ್ಗೆ ಹೋಗಿದ್ದ ಸ್ಥಳವನ್ನು ಎಂಟು ನೂರು ಕೋಟಿ ರೂ.ಖರ್ಚಿನಲ್ಲಿ ಮ್ಯೂಸಿಯಂ ಮಾಡಿದ್ದಾರೆ. ದೀಕ್ಷಾ ಭೂಮಿ, ಮಹಾರಾಷ್ಟ್ರದ ನಾಗಪುರವನ್ನು ೨೮೧ ಕೋಟಿ ರೂ. ಖರ್ಚು ಮಾಡಿ ಅಭಿವೃದ್ದಿಪಡಿಸಿದ್ದಾರೆ. ೨೫೦೦ ಕೋಟಿ ರೂನಲ್ಲಿ ಚೈತನ್ಯ ಭೂಮಿ ಅಭಿವೃದ್ದಿ ಪಡಿಸಿರುವುದಲ್ಲದೆ ದೆಹಲಿಯಲ್ಲಿ ಮಹಾ ಪರಿನಿರ್ವಾಣ ಭೂಮಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿದ್ದಾರೆ. ಇಂತಹ ಯಾವ ಚಾರಿತ್ರಿಕ ಕೆಲಸವೂ ಕಾಂಗ್ರೆಸ್ನಿಂದ ಆಗಿಲ್ಲ ಎಂದು ಎನ್.ರವಿಕುಮಾರ್ ದೂರಿದರು.ದೇಶದ ಉಪ ಪ್ರಧಾನಿಯಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂರವರಿಗೂ ಕಾಂಗ್ರೆಸ್ ಅವಮಾನಿಸಿದೆ. ಕೆ.ಹೆಚ್.ಮುನಿಯಪ್ಪ, ಜಿ.ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಇವರುಗಳನ್ನು ಸೋಲಿಸಿದ್ದು, ಕಾಂಗ್ರೆಸ್ ಪಕ್ಷ. ದಲಿತ ವಿರೋಧಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತಾರೆಂದು ಬುದ್ದಿವಂತಿಕೆಯಿಂದ ಮಲ್ಲಿಕಾರ್ಜುನ ಖರ್ಗೆಯನ್ನು ದೆಹಲಿ ರಾಜಕಾರಣಕ್ಕೆ ಕಳಿಸಿರುವುದು ಗುಟ್ಟಾಗೇನು ಉಳಿದಿಲ್ಲ. ೧೧೧೪೪ ಕೋಟಿ ರೂ.ಗಳನ್ನು ದಲಿತರ ಏಳಿಗೆಗೆ ಖರ್ಚು ಮಾಡುವ ಬದಲು ರಾಜ್ಯ ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ. ಪ್ರತಿ ಬಡವನಿಗೆ ಐದು ಕೆ.ಜಿ.ಅಕ್ಕಿ ಕೊಡುತ್ತಿರುವುದು ದೇಶದ ಪ್ರಧಾನಿ ಮೋದಿ. ಇಪ್ಪತ್ತೈದು ಸಾವಿರ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ. ದೇಶದಲ್ಲಿ ಕೋಮು ಗಲಭೆ ಹೆಚ್ಚಾಗಲು ಕಾಂಗ್ರೆಸ್ ಕಾರಣ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರ ಮೇಲೆ ಇನ್ನು ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ಗೆ ಆಗುತ್ತಿಲ್ಲ. ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಸರಿಯಾಗಿ ಬುದ್ದಿ ಕಲಿಸುವುದಂತೂ ಖಂಡಿತ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ಶಿವಣ್ಣಾಚಾರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.