i
ದೇಹ ತಂಪಾಗಿರಲು ದ್ರವ ಆಹಾರ ಸೇವಿಸಿ- ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಪಮಾನ ಹೆಚ್ಚುತ್ತಿರುವುದರಿಂದ ನಮ್ಮ ದೇಹ ತಂಪಾಗಿರಲು ಸರಾಗವಾಗಿ ಜೀರ್ಣವಾಗುವಂತಹ ದ್ರವ ಆಹಾರ ಸೇವಿಸುವುದು ಬಹು ಮುಖ್ಯ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೆ.ಎನ್.ಕೋಟೆ ಉಪ ಕೇಂದ್ರದ ಹೊರವಲಯದಲ್ಲಿ ಇರುವ ಶ್ರೀ ಕೃಷ್ಣ ಪೌಲ್ಟ್ರಿ ಫಾರಂನಲ್ಲಿ ಹೊರ ರಾಜ್ಯ ಬಿಹಾರ, ಮಧ್ಯಪ್ರದೇಶದಿಂದ ಬಂದು ಫಾರಂನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಲೀಜುನಲ್ಲಿ ಕೆಲಸ ಮಾಡುವ ತಾವು ನಿತ್ಯ ಸ್ನಾನ ಮಾಡುವುದು, ಊಟಕ್ಕೂ ಮುನ್ನ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು, ತೆಳುವಾದ ಶುಭ್ರ ಕಾಟನ್ ಬಟ್ಟೆಗಳನ್ನು ಧರಿಸಿಕೊಂಡು, ಆಗಿಂದಾಗ್ಗೆ ನೀರು ಸೇವನೆ ಮಾಡುತ್ತಾ, ರಾಗಿ ಗಂಜಿ, ಮಜ್ಜಿಗೆ, ಬೇಳೆ ನೀರು ಜೀರ್ಣವಾಗುವಂತಹ ಆಹಾರ ಸೇವಿಸುತ್ತಾ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಸಂಶಯಾಸ್ಪದ ಇಬ್ಬರು ಕುಷ್ಟರೋಗ ಪ್ರಕರಣಗಳು ಕಂಡುಬಂದ ಪ್ರಯುಕ್ತ ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುವ 25ಕ್ಕೂ ಹೆಚ್ಚು ಸಂಪರ್ಕಿಗಳ ಸಮೀಕ್ಷೆ ಮಾಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ. ಮಾತನಾಡಿ, ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ, ಯಾವುದೇ ರೋಗಕ್ಕೆ ಭಯ ಬೇಡ ಎಚ್ಚರಿಕೆ ಇರಲಿ, ರೋಗ ಭಾರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ. ಆರೋಗ್ಯ ಸಮಸ್ಯೆ ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಿರಿ ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಎಚ್. ಆಂಜನೇಯ ಮಾತನಾಡಿ, “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ’ “ಆರೋಗ್ಯವೇ ಭಾಗ್ಯ” ಕೆಲಸ ಕಾರ್ಯಗಳ ಕಡೆ ಎಷ್ಟು ಗಮನ ಹರಿಸುತ್ತೇವೆಯೋ ಆರೋಗ್ಯದ ಕಡೆ ಕೂಡ ಅಷ್ಟು ಗಮನ ಹರಿಸಬೇಕು. ತಾಪಮಾನ ಹೆಚ್ಚು ಇರುವುದರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ವಾಂತಿ ಭೇದಿ ಸಂಭವಿಸುವ ಸಾಧ್ಯತೆ ಇದೆ. ಪ್ರಯುಕ್ತ ಶುದ್ಧ ಕುಡಿಯುವ ನೀರಿನ ಬಳಕೆ, ನಾರಿನಾಂಶ ಇರುವ ಹಸಿರು ತರಕಾರಿಗಳು, ಹಣ್ಣುಗಳು, ನಿಂಬೆ ಪಾನಕ, ಸೇವನೆ ಮಾಡಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ, ಫಾರಂನಲ್ಲಿ ಕೆಲಸ ಮಾಡುವ ತಾವುಗಳು ಅವಶ್ಯ ಸಂದರ್ಭದಲ್ಲಿ ತಪ್ಪದೇ ಮಾಸ್ಕ್ ಧರಿಸುವುದು, ಆದಷ್ಟು ಬೆಳಗಿನ ಸಮಯದಲ್ಲಿ ಕೆಲಸ ನಿರ್ವಹಿಸಿ ಮಧ್ಯಾಹ್ನ ವಿರಾಮ ಪಡೆಯುವುದು ಒಳಿತು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರತ್ನಮ್ಮ ಬೀರಜ್ಜರ್, ಸಮುದಾಯ ಆರೋಗ್ಯ ಅಧಿಕಾರಿ ರಮೇಶ್, ಫೌಲ್ಟ್ರಿ ಫಾರಂನ ವ್ಯವಸ್ಥಾಪಕ ಪ್ರಸಾದ್ ಹಾಜರಿದ್ದರು.