i
ಭದ್ರಾ ಮೇಲ್ದಂಡೆಗೆ 5,300 ಕೋಟಿ ಎಲ್ಲಿ? ಪ್ರಧಾನಿ ಮೋದಿಗೆ ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಸಚಿವರು, “ಪ್ರತಿ ಚುನಾವಣೆ ಬಂದಾಗಲೂ ಮೋದಿಯವರು ನಮ್ಮ ಮತ ತೆಗೆದುಕೊಳ್ಳುತ್ತಾರೆ, ಕೇಂದ್ರ ಸರ್ಕಾರ ಕರ್ನಾಟಕದಿಂದ ಸಾಕಷ್ಟು ತೆರಿಗೆಗಳನ್ನೂ ತೆಗೆದುಕೊಳ್ಳುತ್ತದೆ. ಆದರೆ, ಅದಕ್ಕೆ ಪ್ರತಿಯಾಗಿ ನಾವು ಕಡಿಮೆ ಪಾಲು ಪಡೆಯುತ್ತಿದ್ದೇವೆ” ಎಂದು ಪುನರುಚ್ಚರಿಸಿದ್ದಾರೆ.
“ಕಳೆದ ವರ್ಷದ ಬಜೆಟ್ನಲ್ಲಿ ಪ್ರಧಾನಿ ಮೋದಿಯವರು 5,300 ಕೋಟಿ ರೂಪಾಯಿಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ, ಕುಡಿಯುವ ನೀರು ಒದಗಿಸಲು ಘೋಷಿಸಿದ್ದರು. ಹಲವಾರು ಜಿಲ್ಲೆಗಳನ್ನು ಒಳಗೊಂಡಿರುವ ಬರಪೀಡಿತ ಪ್ರದೇಶಗಳಿಗೆ 5,300 ಕೋಟಿ ರೂ. ಘೋಷಿಸಿದ ಬಜೆಟ್ ಅನ್ನು ಸಂಸತ್ತು ಅನುಮೋದಿಸಿದೆ. ಅದು ಸಂಸತ್ತಿನ ಕಾಯಿದೆಯಾಗಿದೆ. ಆದರೆ, ಆ 5,300 ಕೋಟಿ ರೂ.ನಲ್ಲಿ ನಮ್ಮ ರಾಜ್ಯಕ್ಕೆ ಒಂದೇ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಯಾಕೆ ಬಿಡುಗಡೆ ಮಾಡಿಲ್ಲ? ಎಂದು ನಾನು ಕೇಳಲು ಬಯಸುತ್ತೇನೆ” ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕಾಗಿ ತಪ್ಪದೇ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ, ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಯೋಜನೆಗೆ ಕೇಂದ್ರವೇ ತಡೆಯಾಗಿರುವ ಹಾಗೂ ರಾಜ್ಯದ ಸಂಸತ್ ಸೀಟುಗಳನ್ನು ಕಸಿಯುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಲು ಹೊರಟಿರುವ ಕೇಂದ್ರದ ನೀತಿ ಬಗ್ಗೆ ಉತ್ತರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ 5 ಜಿಲ್ಲೆಗಳಿಗೆ ಮಾಡಿದ ಮೋಸ. ಕರ್ನಾಟಕಕ್ಕೆ ಬರುವ ಮೋದಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತೀರಾ? ಅಥವಾ ಕರ್ನಾಟಕದ ತೆರಿಗೆ ಹಣ ತೆಗೆದು ಕೊಂಡು ಮೋಸ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ರೈತರಿಗೆ ಮೂರು ನಾಮ ಹಾಕುತ್ತಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ಎಂದು ಕೃಷ್ಣ ಬೈರೇಗೌಡ ಆಕ್ರೋಶ ಹೊರಹಾಕಿದ್ದಾರೆ.