i
ಕಾಂಗ್ರೆಸ್ ಮಾದಿಗ ಸಮಾಜದ ವಿರೋಧಿ, ಕಾಂಗ್ರೆಸ್ ಸುಡುವ ಮನೆ, ಸುಡುವ ಮನೆಗೆ ದಲಿತರು ಹೋದರೆ ಸುಟ್ಟು ಭಸ್ಮ ಆಗುತ್ತಾರೆ…
ಚಂದ್ರವಳ್ಳಿ ಸಂದರ್ಶನ
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ. ಬಿಸಿಲಿನ ತಾಪಕ್ಕಿಂತ ದುಪ್ಪಟ್ಟು ಅಭ್ಯರ್ಥಿಗಳನ್ನ ಚುನಾವಣಾ ಕಾವು ಸುಡುತ್ತಿದೆ.
ತೀವ್ರ ತಾಪಮಾನ ಏರಿಕೆ ಮಧ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳತ್ತ ಬಿಸಿಲು ಲೆಕ್ಕಿಸದೆ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ರೀತಿಯ ಒತ್ತಡಗಳ ಮಧ್ಯ ಬಿಡುವು ಮಾಡಿಕೊಂಡು ಚಂದ್ರವಳ್ಳಿ ಪತ್ರಿಕೆಗೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸಂದರ್ಶನ ನೀಡಿದ್ದು ಅದರ ಆಯ್ದ ಭಾಗಗಳನ್ನ ಓದುಗರಿಗಾಗಿ ಪ್ರಕಟಿಸಲಾಗಿದೆ.
ದೇಶದ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದವರು ಸುಮಾರು 56 ವರ್ಷಗಳ ಕಾಲ ಆಡಳಿತ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಚಾಚಾರಗಳನ್ನ ಮಾಡಿ ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ. ಕೆಲವರು ಬೇಲ್ ಮೇಲೆ ಇದ್ದಾರೆ. ಇದು ಕಾಂಗ್ರೆಸ್ ಪಕ್ಷ ಮತ್ತು ನಾಯಕರ ಹೀನ ಸ್ಥಿತಿ. ಹಾಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ನಶಿಸಿ ಹೋಗುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಸೂಕ್ತ ಪ್ರಧಾನಿ ಅಭ್ಯರ್ಥಿ ಇಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಟು-ಜಿ ಸ್ಟೆಕ್ಟ್ರಂ, ಕಲ್ಲಿದ್ದಲು, ಹೆಲಿಕ್ಟಾಪರ್ ಹಗರಣ ಸೇರಿದಂತೆ ಲಕ್ಷಾಂತರ ಕೋಟಿ ರೂ.ಗಳ ಹಗರಣ ನಡೆದಿದೆ. ದೇಶಕ್ಕೆ ಸಂವಿಧಾನ ಕೊಟ್ಟಂತ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ರವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಜೀವಂತವಿರುವವರೆಗೂ ಲೋಕಸಭೆಗೆ ಕಾಂಗ್ರೆಸ್ ಬಿಟ್ಟುಕೊಳ್ಳಲಿಲ್ಲ. ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ.
ಆದರೆ ನರೇಂದ್ರ ಮೋದಿ ಅವರು ಕಳೆದ 23 ವರ್ಷಗಳಿಂದ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ. ಯಾವುದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ, ಸ್ವಜನ ಪಕ್ಷಪಾತದ ಆರೋಪವಿಲ್ಲ.
ನರೇಂದ್ರ ಮೋದಿಜೀ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ, ಭಾರತ ದೇಶದ ಪ್ರಧಾನಿಯಾಗಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಇಡೀ ಪ್ರಪಂಚದಲ್ಲಿ ಭಾರತದ ಕೀರ್ತಿ, ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಜನಪ್ರಿಯತೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರನ್ನೂ ಪ್ರಧಾನಿ ಮೋದಿ ಹಿಂದಿಕ್ಕಿ ಶೇ.76 ರಷ್ಟು ಮತಗಳನ್ನು ಪಡೆದಿದ್ದಾರೆ. ಜಾಗತಿಕ ಮಟ್ಟದ ನಾಯಕರು ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆ ಆಗುವ ಕಾಲ ದೂರವಿಲ್ಲ.
ಕಾಂಗ್ರೆಸ್ ಪಕ್ಷದ 60 ವರ್ಷಗಳ ಆಡಳಿತದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗಿಂತ ಮೋದಿ ಅವರು ಕೇವಲ ಹತ್ತು ವರ್ಷಗಳಲ್ಲಿ ದುಪ್ಪಟ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಹೀಗಾಗಿ ದೇಶದ ಪ್ರಜ್ಞಾವಂತರು, ಜನ ಸಾಮಾನ್ಯರು ಮೋದಿ ಅವರೇ 3ನೇ ಅವಧಿಗೂ ಪ್ರಧಾನಮಂತ್ರಿಯಾಗಿ ಸಮರ್ಥ ನಾಯಕರಿದ್ದು ದೇಶ ಮುನ್ನಡೆಸಲು ಮೋದಿ ಅವರೇ ಅನಿವಾರ್ಯ.
ಇನ್ನೂ ಕೊರೋನಾ ಕಾಲದಲ್ಲಿ 140 ಕೋಟಿ ಜನರ ಜೀವ ಉಳಿಸಿದ ಶ್ರೇಷ್ಠ ನಾಯಕ ಎನ್ನುವ ಭಾವನೆ ಜನರಲ್ಲಿ. ಕೊರೋನಾ ಸಂದರ್ಭದಲ್ಲಿ 80 ಕೋಟಿ ಜನರಿಗೆ ಉದ್ಯೋಗ ಇಲ್ಲದಾಗ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಟ್ಟು, ಔಷಧೋಪಚಾರ ಮಾಡಿರುವುದರಿಂದ ಅಷ್ಟು ಮಂದಿ ಮೋದಿ ಅವರಿಗೆ ವೋಟು ಹೋಕಿ ಋಣ ತೀರಿಸಿಕೊಳ್ಳುವ ಭಾವನೆಯಲ್ಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿದ್ದೇನೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ವಂಚಿತ ಜಿಲ್ಲೆಯಾಗಿದೆ. ನೀರಾವರಿ ಯೋಜನೆಗಳು ಇಲ್ಲ, ನೇರ ರೈಲು ಮಾರ್ವ ನೆನೆಗುದಿಗೆ ಬಿದ್ದಿದೆ. ಕೈಗಾರಿಕೆಗಳಿಲ್ಲ.
ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 2013 ರಿಂದ 2018ರ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಲಿಲ್ಲ. ಪ್ರತಿ ವರ್ಷ ಭದ್ರಾ ಯೋಜನೆಗೆ ನೂರು ಕೋಟಿ, 200 ಕೋಟಿ ಅನುದಾನ ನೀಡಿದರು. ಆದರೆ ಬಿಜೆಪಿ ಸರ್ಕಾರ 2019ರಲ್ಲಿ ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ 800 ಕೋಟಿ ರೂ.ಗಳನ್ನ ನೀಡಿದರು. ನಾನು ಜಲ ಸಂಪನ್ಮೂಲ ಸಚಿವನಾದ ಮೇಲೆ 2100 ಕೋಟಿ, 2700 ಕೋಟಿ ರೂ.ಗಳನ್ನು ನೀಡಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಿದ್ದೇನೆ.
2024ರಲ್ಲಿ ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನೇ ಕೊಟ್ಟಿಲ್ಲ ಹಾಗಾಗಿ ಎಲ್ಲ ಕಾಮಗಾರಿಗಳು ಸ್ಥಗಿತವಾಗಿವೆ.
ನನ್ನ ಮೊದಲ ಆದ್ಯತೆ ಇರುವುದು ಭದ್ರಾ ಮೇಲ್ದಂಡೆ ಯೋಜನೆಯನ್ನ ಪೂರ್ಣಗೊಳಿಸುತ್ತೇನೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ನಾನೇ ಪ್ರಯತ್ನ ಮಾಡಿ ಕೇಂದ್ರ ಸರ್ಕಾರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ನಡಾವಳಿ ಮಾಡಿಸಿದ್ದೇನೆ. ಇದಲ್ಲದೆ ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಗೆ ಬೆನ್ನತ್ತಿ 5300 ಕೋಟಿ ರೂ.ಗಳನ್ನ ಬಜೆಟ್ ನಲ್ಲಿ ಮೀಸಲಿಡಿಸಿದ್ದೇನೆ. ಆ ಹಣವನ್ನೇ ಖಂಡಿತಾ ಬಿಡುಗಡೆ ಮಾಡಿಸುತ್ತೇನೆ.
ಆದರೆ ಕಾಂಗ್ರೆಸ್ ಪಕ್ಷದ ಎದುರಾಳಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು 2014-2019ರ ಅವಧಿಯಲ್ಲಿ ಸಂಸದರಾಗಿದ್ದ ಸಂದರ್ಭದಲ್ಲಿ ಎಷ್ಟು ಅನುದಾನವನ್ನ ಭದ್ರಾ ಮೇಲ್ದಂಡೆ ಯೋಜನೆಗೆ ತಂದಿದ್ದಾರೆ ಎನ್ನುವುದನ್ನ ಜಿಲ್ಲೆಯ ಜನರಿಗೆ ಹೇಳಬೇಕು. ಅಲ್ಲದೆ ಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ವಿರೋಧ ಮಾಡಿದರು ಎನ್ನುವ ಆರೋಪ ಜಿಲ್ಲೆಯ ಜನರ ಭಾವನೆಯಲ್ಲಿದ್ದು ಅದಕ್ಕೆ ಸೂಕ್ತ ಉತ್ತರವನ್ನು ಚಂದ್ರಪ್ಪ ಹೇಳಬೇಕಾಗಿದೆ. ನಾನು ಚಂದ್ರಪ್ಪ ಅವರ ಮೇಲೆ ಆರೋಪ ಮಾಡುವುದಿಲ್ಲ, ಆದರೆ ನಾನು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವಂತ ವ್ಯಕ್ತಿ. ಬಿಜಾಪುರ, ಬಾಗಲಕೋಟೆ, ನನ್ನ ಕ್ಷೇತ್ರ ಮುದೋಳದಲ್ಲಿ ನೀರಾವರಿ ಯೋಜನೆಗಳನ್ನ ಮಾಡಿಕೊಟ್ಟಿದ್ದೇನೆ.
ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಭರಮ ಸಾಗರಕ್ಕೆ ಲಿಫ್ಟ್ ಇರಿಗೇಷನ್ ಆಗಬೇಕೆಂದರು, ತಕ್ಷಣ ನಾನು 1200 ಕೋಟಿ ರೂ. ಅನುದಾನ ನೀಡಿ ಕೆರೆಗಳಿಗೆ ನೀರು ಭರ್ತಿ ಮಾಡುವಂತ ಕಾರ್ಯ ಮಾಡಿದ್ದೇನೆ. ಅಷ್ಟೇ ಅಲ್ಲ ನಾನು ಸಣ್ಣ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಅನೇಕ ಚೆಕ್ ಡ್ಯಾಂ, ಬ್ಯಾರೇಜ್ ಗಳನ್ನ ಚಿತ್ರದುರ್ಗ ಜಿಲ್ಲೆಗೆ ನೀಡಿದ್ದೇನೆ.
ಗೋವಿಂದ ಕಾರಜೋಳ ಅವರು ಸಾಕಷ್ಟು ಕೆಲಸ ಮಾಡಿಕೊಟ್ಟರು ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಹಾಸ್ಟೆಲ್ ಗಳನ್ನು ನೀಡಿದ್ದೇನೆ, ಲೋಕೋಪಯೋಗಿ ಸಚಿವನಾಗಿದ್ದಾಗ ರಸ್ತೆಗಳನ್ನ ಚಿತ್ರದುರ್ಗ ಜಿಲ್ಲೆಗ ಕೊಟ್ಟಿದ್ದೇನೆ.
ನಾನು ಶಿಕ್ಷಣ, ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಚಿತ್ರದುರ್ಗ, ಆಲಮಟ್ಟಿ ರೈಲು ಆಗಬೇಕು, ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ರೈಲು ಆಗಬೇಕು ಇಂತಹ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ. ಕೇವಲ ರಾಜಕಾರಣ ಮಾಡಲು ಚುನಾಯಿತರಾಗಬಾರದು, ಕ್ಷೇತ್ರದ ಅಭಿವೃದ್ಧಿ ದೃಷ್ಠಿ ಇಟ್ಟು ಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ತಮ್ಮ ಮನದಾಳದ ಮಾತುಗಳನ್ನು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.1 ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯದ ವಿರೋಧಿಯೇ?
ಅನುಮಾನವೇ ಬೇಡ ಶೇಕಡ ನೂರಷ್ಟು ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯದ ಪರಮ ವಿರೋಧಿಯಾಗಿದೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ ಸಂಖ್ಯಾತ್ಮಕವಾಗಿ ನಂಬರ್-1 ಇದೆ. ನಮ್ಮ ಉಪ ಜಾತಿಗಳು ಸೇರಿ ಶೇ 8ರಷ್ಟು ಜನ ಸಂಖ್ಯೆ ಇದೆ. ಹೈದರಾಬಾದ್-ಕರ್ನಾಟಕದಲ್ಲಿ 9 ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರಗಳಿವೆ. ಮಲ್ಲಿಕಾರ್ಜುನ ಖರ್ಗೆ ಅವರೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಬಹುಸಂಖೆಯಲ್ಲಿರುವ ಮಾದಿಗ ಸಮಾಜಕ್ಕೆ ಒಂದೇ ಒಂದು ಸೀಟು ಕೊಟ್ಟಿಲ್ಲ. ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗ ಈ ಜಿಲ್ಲೆಗಳಲ್ಲಿ ಮಾದಿಗರು ಬಹುಸಂಖ್ಯಾತರು. ಆದರೂ ಕಾಂಗ್ರೆಸ್ ಪಕ್ಷ ಮಾದಿಗ ಸಮಾಜಕ್ಕೆ ಒಂದೇ ಒಂದು ಸೀಟುಗಳನ್ನ ನೀಡಿಲ್ಲ. ಆದರೆ ಬಿಜೆಪಿ ಪಕ್ಷದ ಚುನಾವಣಾ ಸಮಿತಿಯಲ್ಲಿ ನಾನಿದ್ದೆ. ಪಕ್ಷದ ಮುಖಂಡರು ನನ್ನನ್ನ ಗುರುತಿಸಿ ಜವಾಬ್ದಾರಿ ನೀಡಿದರು. ಹಾಗಾಗಿ ಹೈದರಾಬಾದ್-ಕರ್ನಾಟಕದ ಜಿಲ್ಲೆಗಳ ವ್ಯಾಪ್ತಿಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 3 ಸೀಟುಗಳನ್ನ ಮಾದಿಗ ಸಮಾಜಕ್ಕೆ, ಲಂಬಾಣಿ, ಭೋವಿ ಸಮಾಜಗಳಿಗೆ ಸೀಟು ಕೊಡಿಸಿದ್ದೇನೆ. ಯಾವ ಸಮಾಜಕ್ಕೂ ಅನ್ಯಾಯ ಆಗದ ರೀತಿಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾವು ಟಿಕೆಟ್ ನೀಡಿದ್ದೇವೆ. ಕಾಂಗ್ರೆಸ್ ಪಕ್ಷ ಮಾದಿಗ ಸಮಾಜಕ್ಕೆ ಒಂದೇ ಒಂದು ಸೀಟು ಕೊಡದೆ ದ್ರೋಹ ಎಸಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಮಾದಿಗ ಸಮಾಜದ ವಿರೋಧಿ ಎನ್ನುವುದು ಸಾಬೀತು ಆಗಿದೆ.
ಚುನಾವಣೆ ಬಂದಾಗ ಮಾತ್ರ ಕೆ.ಹೆಚ್.ಮುನಿಯಪ್ಪನವರು ಬರುತ್ತಾರೆ. ಮುನಿಯಪ್ಪನವರು ಸಮುದಾಯವನ್ನ ಮೆಟ್ಟಿಲು ಮಾಡಿಕೊಂಡು ಮೇಲೇರಿದ್ದಾರೆ ಹೊರೆತು ಮಾದಿಗ ಸಮಾಜದ ಬಗ್ಗೆ ಯಾವೊತ್ತು ಚಿಂತನೆ ಮಾಡಿಲ್ಲ ಎಂದು ಗೋವಿಂದ ಕಾರಜೋಳ ಬೇಸರ ವ್ಯಕ್ತ ಪಡಿಸಿದರು.
2 ಸಂವಿಧಾನ ಶಿಲ್ಪಿ, ದಲಿತ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ಸೋಲಿಸಿ ಅವಮಾನ ಮಾಡಿದ್ದು ನಿಜನಾ?
ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟಿದ್ದಷ್ಟೆ ಅಲ್ಲ, ದಲಿತರು, ಶೋಷಿತರು, ಅಸ್ಪೃಶ್ಯರು, ಹಿಂದುಳಿದವರನ್ನು ಮನುಷ್ಯರಂತೆ ಕಾಣಿ ಎನ್ನುವ ಜಾಗೃತಿ ಮೂಡಿಸಿದರು. ಇಂತಹ ಮಹಾನ್ ನಾಯಕನನ್ನು ಕಾಂಗ್ರೆಸ್ ಪಕ್ಷವು ದೇಶದ ಪ್ರಧಾನಿಯನ್ನಾಗಿ ಮಾಡಬಹುದಿತ್ತು. ಆದರೆ ಹಾಗೇ ಕಾಂಗ್ರೆಸ್ ಮಾಡಲಿಲ್ಲ. ಲೋಕಸಭೆಗೆ ಅವರು ಸ್ಪರ್ಧಿಸಿದಾಗ ಎರಡು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಅಂಬೇಡ್ಕರ್ ಅವರು ಲೋಕಸಭೆ ಒಳಗಡೆ ಬರ್ಲಿಕ್ಕೆ ಕಾಂಗ್ರೆಸ್ ಬಿಡಲಿಲ್ಲ ಸೋಲಿಸಿದ್ದು ಅಷ್ಟೇ ಅಲ್ಲ ಅವರಿಗೆ ಕಾಂಗ್ರೆಸ್ ನವರು ಅವಮಾನ ಮಾಡಿದರು. ಅದಕ್ಕಾಗಿ ಅಂಬೇಡ್ಕರ್ ಅವರು ದಲಿತ ಸಮುದಾಯಕ್ಕೆ ಒಂದು ಎಚ್ಚರಿಕೆ ಮಾತನ್ನ ಹೇಳಿ ಹೋಗಿದ್ದಾರೆ. ಅದೆನಂದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಡಿ, ಕಾಂಗ್ರೆಸ್ ಸುಡುವ ಮನೆ, ಸುಡುವ ಮನೆ ಒಳಗೆ ನಾವು ಹೋದರೆ ಭಸ್ಮವಾಗಿ ಹೋಗುತ್ತೇವೆ ಎನ್ನುವ ಎಚ್ಚರಿಕೆ ಸಂದೇಶವನ್ನು ದಲಿತ ಸಮುದಾಯಕ್ಕೆ ಅಂಬೇಡ್ಕರ್ ಹೇಳಿ ಹೋಗಿದ್ದು ಅದಕ್ಕಾಗಿ ದಲಿತರ್ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಡಿ, ಮತ ನೀಡಬೇಡಿ ಎಂದು ನಾನು ಕರೆ ಕೊಡುತ್ತೇನೆಂದು ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.
3 ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತಾ?
ಸಂವಿಧಾನ ಬದಲಾವಣೆ ಮಾಡಲು ಭೂಮಿ ಮೇಲೆ ಯಾರಿಂದಲೂ ಸಾಧ್ಯವಿಲ್ಲ. ಎಲ್ಲಿಯವರೆಗೂ ಸೂರ್ಯಚಂದ್ರ ಇರುತ್ತಾರೋ ಅಲ್ಲಿಯ ತನಕ ಸಂವಿಧಾನ ಇರುತ್ತದೆ. ಸಂವಿಧಾನ ಬದಲಾವಣೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಎಂದೂ ಚಿಂತನೆ ಮಾಡಿಲ್ಲ, ಮುಂದೆಯು ಮಾಡುವುದಿಲ್ಲ, ಸಂವಿಧಾನ ಬದಲಾವಣೆ ಎನ್ನುವುದು ಕೇವಲ ವಿರೋಧಿಗಳ ಷಡ್ಯಂತ್ರ. ಭೂಮಿ ಮೇಲೆ ಜನ ಇರುವ ತನಕ ಸಂವಿಧಾನ ಇರುತ್ತೆ. ನಾವು ಸಂವಿಧಾನ ಗೌರವಿಸುವವರು. ನಾವು ಬದಲಾವಣೆ ಮಾಡುವವರಲ್ಲ, ಡಾ.ಬಾಬಾ ಸಹೇಬ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದಿಂದಲೇ ನಾನು ಈ ದೇಶದ ಪ್ರದಾನಮಂತ್ರಿ ಆಗಲು ಸಾಧ್ಯವಾಗಿತು ಎಂದು ನರೇಂದ್ರ ಮೋದಿ ಅವರು ಹೆಮ್ಮೆಯಿಂದ ಹೇಳಿದ್ದಾರೆ. ಅಂಬೇಡ್ಕರ್ ಬರೆದಂತ ಸಂವಿಧಾನ ದೇಶದ ಧರ್ಮ ಗ್ರಂಥ ಎಂದು ಎಂದಾದರೂ ಪಂಡಿತ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಹೇಳಿದ್ರಾ? ಎಂದು ಗೋವಿಂದ ಕಾರಜೋಳ ಖಾರವಾಗಿ ಪ್ರಶ್ನಿಸಿದರು.
4 ಡಾ.ಬಾಬಾ ಸಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡ್ತಾ?
ಬಾಬಾ ಸಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದು ಅಷ್ಟೇ ಅಲ್ಲ, ಜಗತ್ತಿನ ಮಹಾ ಪಂಡಿತರು, ಮಹಾ ಜ್ಞಾನಿಗಳು ಆದ ಅಂಬೇಡ್ಕರ್ ಅವರಿಗೆ ಜೀವಿತ ಕಾಲದಲ್ಲಿ ಭಾರತ ರತ್ನ ಪ್ರಶಸ್ತಿ ಕೊಟ್ಟು ಕಾಂಗ್ರೆಸ್ ಗೌರವಿಸಲಿಲ್ಲ. ಇದು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಮಹಾ ದ್ರೋಹ.
5 ಬಿಜೆಪಿ ಮೀಸಲಾತಿ ರದ್ದು ಮಾಡುತ್ತಾ?
ಸಂವಿಧಾನ ಬದ್ಧವಾಗಿ ನೀಡಿರುವಂತ ಮೀಸಲಾತಿಯನ್ನ ಯಾವುದೇ ಕಾರಣಕ್ಕೂ ರದ್ದು ಮಾಡಲು ಸಾಧ್ಯವಿಲ್ಲ. ಈ ಸಮಾಜದಲ್ಲಿ ಎಲ್ಲಿಯ ತನಕ ಅಸಮಾನತೆ ಇರುತ್ತೋ ಅಲ್ಲಿಯತನಕ ಮೀಸಲಾತಿ ಇರುತ್ತೇ. ಬಿಜೆಪಿ ವಿರೋಧಿಗಳು ಸದಾ ಇಂತಹ ಸುಳ್ಳು ಸುದ್ದಿಗಳನ್ನ ಹರಿ ಬಿಡುತ್ತಿದ್ದಾರೆ.
6 ಉತ್ತರ ಕರ್ನಾಟಕದಿಂದ ಮಧ್ಯ ಕರ್ನಾಟಕದ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಏನು ಕಾರಣ?
ಬಿಜೆಪಿ ಪಕ್ಷ, ಪಕ್ಷದ ವರಿಷ್ಠರು, ಚಿತ್ರದುರ್ಗ ಜಿಲ್ಲೆಯ ಎಲ್ಲ ನಾಯಕರು ಸೇರಿ ತೀರ್ಮಾನ ಮಾಡಿದ್ದರಿಂದ ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗಿದೆ.ಆದರೆ ನಾನು ತಿಳಿದುಕೊಂಡಿರುವುದು ಏನಂದರೆ, ಭಗವಂತನ ಇಚ್ಛೆ, ಜನರ ಋಣಾಣುಬಂಧ ಇರುವುದರಿಂದ ಈ ಜಿಲ್ಲೆಯ ಜನರ ಋಣ ತೀರಿಸಲು, ಜನರ ಸೇವೆ ಮಾಡಲು ನನಗೆ ದೊರತೆ ಅವಕಾಶ ಎಂದು ನಾನು ಭಾವಿಸಿದ್ದೇನೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕವಲ್ಲ ಅಖಂಡ ಕರ್ನಾಟಕ ಒಂದೇ ಎನ್ನುವ ಭಾವನೆ ನನ್ನದು. ನಾನು ಇಲ್ಲಿ ಅಭಿವೃದ್ಧಿ ಮಾಡಿ ತೋರಿಸುವೆ ಎಂದು ಭಾವನಾತ್ಮಕವಾಗಿ ಹೇಳಿದರು.7 ಶಾಸಕ ಚಂದ್ರಪ್ಪ, ಅವರ ಪುತ್ರ ರಘು ಚಂದನ್ ಅವರ ಗೋ ಬ್ಯಾಕ್ ಗೋವಿಂದ ಕಾರಜೋಳ ಎನ್ನುವ ಅಭಿಯಾನ ಮಾಡಿದ್ರಲ್ಲ?
ಅದೆಲ್ಲ ಮುಗಿದು ಹೋದ ಅಧ್ಯಾಯ. ಈಗಾಗಲೇ ಅವರು ಶಕ್ತಿ ಮೀರಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಾದರೂ ಟಿಕೆಟ್ ಸಿಗದಾಗ ಬೇಸರಗೊಂಡು ಸ್ವಾಭಾವಿಕವಾಗಿ ಏನೇನೋ ಹೇಳಿರುತ್ತಾರೆ. ಅದನ್ನ ಗಣನೆಗೆ ತೆಗೆದುಕೊಳ್ಳಬಾರದು ಅವರು ಇವತ್ತು ಸಕ್ರಿಯಾವಾಗಿ ಕೆಲಸ ಮಾಡುತ್ತಿದ್ದಾರೆ.
8 ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುತ್ತಾ?
ಅನುಮಾನವೇ ಬೇಡ ಹಂಡ್ರಡ್ ಪರ್ಸೆಂಟ್ ಉಳಿಸಿಕೊಳುತ್ತೇ, ನರೇಂದ್ರ ಮೋದಿ ಅವರೇ ಈ ದೇಶಕ್ಕೆ ಅನಿವಾರ್ಯ, ದೇಶದ ರಕ್ಷಣೆಗಾಗಿ ಬಿಜೆಪಿ ಗೆಲ್ಲಬೇಕು, ಕಾಂಗ್ರೆಸ್ ಪಕ್ಷದಲ್ಲಿ ದೇಶ ಮುನ್ನಡೆಸುವಂತ ಸಮರ್ಥ ನಾಯಕರಿಲ್ಲದ ಕಾರಣ ಮೋದಿ ಅವರು ಈ ದೇಶಕ್ಕೆ ಅನಿವಾರ್ಯ ಎನ್ನುವುದು ಜನರ ಭಾವನೆಯಾಗಿದೆ. ಪ್ರಧಾನಮಂತ್ರಿ ಆಗುವಂತ ಯೋಗ್ಯತೆ ಇರುವಂತವರು ಯಾರೂ ಇಲ್ಲ. ಅದಕ್ಕಾಗಿ ಜನ ಭಯಸುತ್ತಿದ್ದು 3ನೇ ಬಾರಿಗೆ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ.
9 ಜೆಡಿಎಸ್ – ಬಿಜೆಪಿ ಮೈತ್ರಿಯಿಂದ ಅನುಕೂಲ ಆಗಿದೆಯಾ?
ಅನುಮಾನವೇ ಬೇಡ, ಹಂಡ್ರಡ್ ಪರ್ಸೆಂಟ್ ಅನುಕೂಲವಾಗಿದೆ. ಜೆಡಿಎಸ್ ಪಕ್ಷಕ್ಕೆ ದೊಡ್ಡ ಶಕ್ತಿ ಇದೆ. ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನ ಮಂತ್ರಿ ಇದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಯೋಗ್ಯರು ಎನ್ನುವುದನ್ನ ದೇವೇಗೌಡರು ಈಗಾಗಲೇ ಮಾಧ್ಯಮಗಳಿಗೆ ತಿಳಿಸಿ ಕೊಂಡಾಡಿದ್ದಾರೆ.10 ದೇಶದಲ್ಲಿ ಪ್ರದಾನಿ ಮೋದಿ ಅಲೆ ಇನ್ನೂ ಇದೆಯಾ?
ಹಂಡ್ರಡ್ ಪರ್ಸೆಂಟ್ ದೇಶದಲ್ಲಿ ಮೋದಿ ಅಲೆ, ಪ್ರಭಾವ ಎಲ್ಲವೂ ಇದೆ. ಕೊರೋನಾ ಸಂದರ್ಭದಲ್ಲಿ ಸೂಕ್ತ ಲಸಿಕೆಯನ್ನು 140 ಕೋಟಿ ಜನರಿಗೆ ತಲುಪಿಸಿ ಕೊರೋನಾದಿಂದ ದೇಶದ ಜನರ ಪ್ರಾಣ ಉಲಿಸಿದ ನಾಯಕ, ದೇಶ ಅಭಿವೃದ್ಧಿ ಆಗಬೇಕು ಎನ್ನುವ ನಾಯಕ ಮೋದಿ. ಹಾಗಾಗಿ ಅವರ ಅಲೆ ಎಂದಿಗೂ ಕುಗ್ಗಿಲ್ಲ, ಕುಗ್ಗುವುದೂ ಇಲ್ಲ.
11 ಭದ್ರಾ ಯೋಜನೆಗೆ 5300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿಲ್ಲ?
ಇದು ಸಂಪೂರ್ಣ ರಾಜ್ಯ ಸರ್ಕಾರದ ವೈಫಲ್ಯ. ಕೇಂದ್ರ ಸರ್ಕಾರದಿಂದ ಅನುದಾನ ತರಲು ಮಾನದಂಡಗಳಿರುತ್ತವೆ. ಆ ಮಾನದಂಡಗಳನ್ನ ರಾಜ್ಯ ಸರ್ಕಾರ ಪೂರ್ಣಗೊಳಿಸದೆ ಇರುವುದರಿಂದ ಅನುದಾನ ಬಂದಿಲ್ಲ. ಇದರ ಹೊಣೆಯನ್ನ ರಾಜ್ಯ ಸರ್ಕಾರ ಹೊರಬೇಕು.
12 ಬರ ಪರಿಹಾರ, ಜಿಎಸ್ ಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆಯಲ್ಲ?
ಯಾವುದೇ ತಾರತಮ್ಯ ಆಗಿಲ್ಲ, ಯುಪಿಎ ಸರ್ಕಾರ ನೀಡಿದಕ್ಕಿಂತ ಹೆಚ್ಚಿನ ಅನುದಾವನ್ನ ಮೋದಿ ಸರ್ಕಾರ ನೀಡಿದೆ. ಕೇಂದ್ರದ ಹಣಕಾಸು ಸಚಿವರು ಈಗಾಗಲೇ ಎಲ್ಲ ಅಂಕಿ ಅಂಶಗಳನ್ನ ಬಿಡುಗಡೆ ಮಾಡಿದ್ದಾರೆ.13 ಈ ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯನಾ?
ಈ ದೇಶದ ಸುರಕ್ಷತೆಗಾಗಿ ನರೇಂದ್ರ ಮೋದಿ ಅನಿವಾರ್ಯ, ಅಭಿವೃದ್ಧಿ ಆಗಬೇಕಾದರೆ ಬಿಜೆಪಿ, ಮೋದಿ ಅನಿವಾರ್ಯ. ಹಾಗಾಗಿ ಗೋವಿಂದ್ ಕಾರಜೋಳ ಸೇರಿದಂತೆ ರಾಜ್ಯದ 28 ಮಂಡಿ ಎನ್ ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ಗೆದ್ದು ಬಂದು ಮೋದಿ ಪ್ರಧಾನಿ ಆಗಬೇಕು.14 ಗೋವಿಂದ ಕಾರಜೋಳ ಗೆದ್ದರೆ ಕೇಂದ್ರ ಸಚಿವರಾಗುತ್ತಾರಾ?
ನಮ್ಮದು ರಾಷ್ಟ್ರೀಯ ಪಕ್ಷ, ಆದರೆ ನರೇಂದ್ರ ಮೋದಿ ಅವರು ಟೀಂನಲ್ಲಿ ನಾವು ಇದ್ದೇ ಇರುತ್ತೇವೆ ಎನ್ನುವುದು ನಿಶ್ಚಿತ ಎಂದರು ಗೋವಿಂದ ಕಾರಜೋಳ ಅವರು.15 ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಿಜೆಪಿ ಕೊಡುಗೆ ಏನು?
ಕಾಂಗ್ರೆಸ್ ನಾರಾಯಣ್ ಸದೋಬ ಕಾರ್ಜುಲ್ ರನ್ನು ಅಂಬೇಡ್ಕರ್ ವಿರುದ್ದ ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದಲ್ಲದೆ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟಿತು. ಅಂಬೇಡ್ಕರ್ ಜೀವಂತವಿರುವವರೆಗೂ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದಾಗ ಭಾರತ ರತ್ನ ನೀಡಿ ಡಾ.ಬಿ.ಅಂಬೇಡ್ಕರ್ರವರನ್ನು ಗೌರವಿಸಿತು. ಡಾ.ಬಿ.ಆರ್.ಅಂಬೇಡ್ಕರ್ ಕೊನೆಯುಸಿರೆಳೆದಾಗ ಅಂತ್ಯ ಸಂಸ್ಕಾರಕ್ಕೂ ಕಾಂಗ್ರೆಸ್ ಜಾಗ ಕೊಡಲಿಲ್ಲ. ಇದು ದೇಶದ ೧೪೦ ಕೋಟಿ ಜನರಿಗೆ ಕಾಂಗ್ರೆಸ್ ಎಸಗಿರುವ ಐತಿಹಾಸಿಕ ದ್ರೋಹ. ಇಂತಹ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ವಿಮಾನದಲ್ಲಿ ಅಂಬೇಡ್ಕರ್ರವರ ದೇಹವನ್ನು ತೆಗೆದುಕೊಂಡು ಹೋಗಲು ಕಾಂಗ್ರೆಸ್ ಹಣದ ನೆರವು ನೀಡಲಿಲ್ಲ. ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಆಡಳಿತ ಮಾಡುತ್ತಿರುವ ನರೇಂದ್ರಮೋದಿರವರು ಪಂಚತೀರ್ಥ ಯೋಜನೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ರವರಿಗೆ ಗೌರವ ಸಮರ್ಪಿಸಿದ್ದಾರೆ. ಮಧ್ಯಪ್ರದೇಶದ ಮೋಹದ ಜನ್ಮಭೂಮಿಯಲ್ಲಿ ಎರಡು ಲಕ್ಷ ಜನರಿಗೆ ದರ್ಶನ ಭಾಗ್ಯ ಕಲ್ಪಿಸಿದ್ದಾರೆ. ಬ್ಯಾರಿಸ್ಟರ್ ಶಿಕ್ಷಣಕ್ಕಾಗಿ ಅಂಬೇಡ್ಕರ್ ಲಂಡನ್ಗೆ ಹೋಗಿದ್ದ ಸ್ಥಳವನ್ನು ಎಂಟು ನೂರು ಕೋಟಿ ರೂ.ಖರ್ಚಿನಲ್ಲಿ ಮ್ಯೂಸಿಯಂ ಮಾಡಿದ್ದಾರೆ. ದೀಕ್ಷಾ ಭೂಮಿ, ಮಹಾರಾಷ್ಟ್ರದ ನಾಗಪುರವನ್ನು ೨೮೧ ಕೋಟಿ ರೂ. ಖರ್ಚು ಮಾಡಿ ಅಭಿವೃದ್ದಿಪಡಿಸಿದ್ದಾರೆ. ೨೫೦೦ ಕೋಟಿ ರೂನಲ್ಲಿ ಚೈತನ್ಯ ಭೂಮಿ ಅಭಿವೃದ್ದಿ ಪಡಿಸಿರುವುದಲ್ಲದೆ ದೆಹಲಿಯಲ್ಲಿ ಮಹಾ ಪರಿನಿರ್ವಾಣ ಭೂಮಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿದ್ದಾರೆ. ಇಂತಹ ಯಾವ ಚಾರಿತ್ರಿಕ ಕೆಲಸವೂ ಕಾಂಗ್ರೆಸ್ನಿಂದ ಆಗಿಲ್ಲ, ಅಲ್ಲದೆ ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ಸದಾ ಅಪಮಾನಿಸುತ್ತಾ ಬಂದಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನಗಳಿಂದಲೂ ದಲಿತರನ್ನು ಓಟ್ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಗೆ ಪಕ್ಷಕ್ಕೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.