i
ಯುವತಿಗೆ ಹಲ್ಲೆ ಮಾಡಿ ದರೋಡೆ ಮಾಡಿದ ಪುಂಡರು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಚಿತ್ರದುರ್ಗಕ್ಕೆ ಯುವಕನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಯುವತಿಯನ್ನು ಕಾಡಿಗೆ ಎಳೆದೊಯ್ದು ಡಕಾಯಿತಿ ಮಾಡಿ ಅಲ್ಲದೆ ಆಕೆಯ ಸ್ನೇಹಿತನ ಮೇಲೂ ಹಲ್ಲೆ ಮಾಡಿದ ಘಟನೆ ತಾಲೂಕಿನ ಜಾವಳ್ಳಿಯಲ್ಲಿ ನಡೆದಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ ಇವರಿಬ್ಬರೂ ದರೋಡೆಕೋರರಿಂದ ಪಾರಾಗಿ ಬಂದಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಏ. ೧೪ ರ ಮಧ್ಯಾಹ್ನ ೨ ಗಂಟೆ ವೇಳೆ ಈ ಕೃತ್ಯ ನಡೆದಿದೆ. ಶಿವಮೊಗ್ಗ ಸುಬ್ಬಯ್ಯ ಕಾಲೇಜಿನಿಂದ ಯುವತಿಯೊಬ್ಬರು ತಮ್ಮ ಸ್ನೇಹಿತ ಜಗದೀಶ್ ಜೊತೆಗೆ ಬೈಕ್ನಲ್ಲಿ ಚಿತ್ರದುರ್ಗಕ್ಕೆ ಹೊರಟಿದ್ದರು. ಜಾವಳ್ಳಿ ಸಮೀಪ ಬೈಕ್ ನಿಲ್ಲಿಸಿ ಯುವತಿ ನೇಚರ್ಕಾಲ್ಗೆಂದು ನೀಲಗಿರಿ ಪ್ಲಾಂಟೇಶನ್ಗೆ ತೆರಳಿದ್ದರು. ಈ ವೇಳೆ ಸ್ನೇಹಿತ ಬೈಕ್ ಬಳಿಯೇ ನಿಂತಿದ್ದ. ಆದರೆ ಅತ್ತ ಯುವತಿ ಪ್ಲಾಂಟೇಶನ್ನೊಳಗೆ ಹೋಗಿದ್ದಾಗ ಅಲ್ಲಿಗೆ ಬಂದ ದರೋಡೆಕೋರರ ಗುಂಪೊಂದು ಯುವತಿಯನ್ನು ಹಿಡಿದು ಹಲ್ಲೆ ಮಾಡಿದೆ.
ಆರು ಜನರಿದ್ದ ತಂಡ ಯುವತಿಯ ೨೦ ಗ್ರಾಂ ಬಂಗಾರದ ಚೈನ್ ಅನ್ನು ಕಿತ್ತು ಕೊಂಡು ಹಲ್ಲೆ ನಡೆಸಿದೆ. ಈ ವೇಳೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಆಕೆಯ ಆರ್ತನಾದ ಕೇಳಿ ಸ್ನೇಹಿತ ಅಲ್ಲಿಗೆ ಬಂದು ದರೋಡೆಕೋರರಿಂದ ಯುವತಿಯನ್ನು ರಕ್ಷಿಸಲು ಯತ್ನಿಸಿದಾಗ ಆತನ ಮೇಲೂ ಹಲ್ಲೆ ನಡೆಸಿದ ಗುಂಪು ಆತನ ಬಳಿಯಿದ್ದ ೩೦೦೦ ರೂ ಹಣವನ್ನು ಮತ್ತು ಒಂದು ವಾಚ್ ಮತ್ತು ವಿವೋ ಮೊಬೈಲ್ ಕಿತ್ತು ಕೊಂಡಿದೆ.
ಇದೇ ವೇಳೆ ಗಲಾಟೆಯಾಗುತ್ತಿರುವುದನ್ನು ಗಮನಿಸಿದ ಅಲ್ಲಿನ ತೋಟವೊಂದರಲ್ಲಿದ್ದ ವ್ಯಕ್ತಿಯೊಬ್ಬರು ಏ..ಏನದು.. ಎಂದು ಕೂಗಿಕೊಂಡು ಓಡಿ ಬಂದಾಗ ಇದನ್ನು ಗಮನಿಸಿದ ತಂಡ ಅಲ್ಲಿಂದ ಕಾಲ್ಕಿತ್ತಿದೆ. ಯುವತಿಯನ್ನು ರಕ್ಷಿಸಿದ ತೋಟದ ಕೆಲಸಗಾರ, ಗ್ರಾಮಸ್ಥರನ್ನು ಕರೆದು ವಿಷಯ ತಿಳಿಸಿದ್ದಾರೆ. ಊರಿನವರು ಸುತ್ತಮುತ್ತ ಆರೋಪಿಗಳಿಗಾಗಿ ಹುಡುಕಾಡಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ. ದರೋಡೆ ಕೋರರ ತಂಡದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಅಲ್ಲಿದ್ದವರು ಗುರುತಿಸಿದ್ದಾರೆ. ಯುವತಿ ಹೊಳೆಹೊನ್ನೂರು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.