i
ಕಾಂಗ್ರೆಸ್ ಗ್ಯಾರೆಂಟಿಗಳು ಹರ್ಷದ ಕೂಳು, ಬಿಜೆಪಿ ಗ್ಯಾರೆಂಟಿಗಳು ವರ್ಷದ ಕೂಳು-ಶಾಸಕ ನವೀನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಗ್ಯಾರೆಂಟಿಗಳು ಹರ್ಷದ ಕೂಳು, ಬಿಜೆಪಿ. ಗ್ಯಾರೆಂಟಿಗಳು ವರ್ಷದ ಕೂಳು, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರ ಮೋದಿರವರು ನುಡಿದಂತೆ ನಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್ನ ಚುನಾವಣಾ ಅಕ್ರಮ, ಸುಳ್ಳು ಗ್ಯಾರೆಂಟಿಗಳಿಗೆ ಬಲಿಯಾಗಬೇಡಿ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಜನತೆಯಲ್ಲಿ ಮನವಿ ಮಾಡಿದರು.
ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮೋದಿ ಗ್ಯಾರೆಂಟಿ ಸಂಕಲ್ಪ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರಮೋದಿ, ಅಮಿತ್ಷಾ, ರಾಜನಾಥ್ಸಿಂಗ್ ಇವರುಗಳ ನಲವತ್ತು ಮಂದಿಯ ತಂಡ ೨೦೪೭ ರವರೆಗೆ ಭವ್ಯ ಭಾರತದ ಭವಿಷ್ಯವನ್ನು ಗುರಿಯಾಗಿರಿಸಿಕೊಂಡು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದೆ. ೧೯೫೨ ರ ಜನಸಂಘದ ಪ್ರಣಾಳಿಕೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದುಪಡಿಸುವುದಾಗಿ ಘೋಷಿಸಿತ್ತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವುದಾಗಿಯೂ ಭರವಸೆ ನೀಡಿತ್ತು. ಅದರಂತೆ ಎರಡೂ ಈಡೇರಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಿಂದ ದಿವಾಳಿಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನು ೨೫ ಗ್ಯಾರೆಂಟಿಗಳನ್ನು ದೇಶದ ಜನರಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಇದರಿಂದ ದೇಶ ದಿವಾಳಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹಾಸ್ಯ ಮಾಡಿದರು.
ದೇಶದ ಸುರಕ್ಷತೆ, ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ, ಮಧ್ಯಮ ವರ್ಗಕ್ಕೆ ಲಾಭವಾಗುವ ಯೋಜನೆಗಳು, ನಾರಿಶಕ್ತಿ ಸಬಲೀಕರಣ, ರೈತರ ಗ್ಯಾರೆಂಟಿ, ಯುವಕರ ಗ್ಯಾರೆಂಟಿ, ಹಿರಿಯ ನಾಗರೀಕರ ಬದುಕು ಸುಧಾರಣೆಗೆ ಪೋರ್ಟಲ್, ಶ್ರಮಿಕ ಬಂಧುಗಳಿಗೆ ರಾಷ್ಟ್ರೀಯ ಕನಿಷ್ಠ ವೇತನ ನೀತಿ, ವಿಶ್ವಬಂಧು ಯೋಜನೆ, ಸಮೃದ್ದ ಭಾರತ, ಮೂಲಭೂತ ಸೌಕರ್ಯ, ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವುದು, ಭ್ರಷ್ಠಾಚಾರವಿಲ್ಲದ ಉತ್ತಮ ಆಡಳಿತ ನೀಡುವುದು ಸಂಕಲ್ಪ ಪತ್ರದ ಪ್ರಮುಖ ಯೋಜನೆಗಳಾಗಿವೆ. ೨೫ ಲಕ್ಷ ಕೋಟಿ ಯೋಜನೆ ಕೊಡಲು ಕಾಂಗ್ರೆಸ್ನಿಂದ ಆಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಮಿಷಗಳಿಗೆ ಬಲಿಯಾಗದಂತೆ ಕೆ.ಎಸ್.ನವೀನ್ ಮತದಾರರಲ್ಲಿ ವಿನಂತಿಸಿದರು.
ನಗರಸಭೆ ಸದಸ್ಯರುಗಳಾದ ಸುರೇಶ್, ಹರೀಶ್, ಬಿಜೆಪಿ. ಉಪಾಧ್ಯಕ್ಷ ಶಿವಣ್ಣಾಚಾರ್, ರವಿಕುಮಾರ್, ಪರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ ಪತ್ರಿಕಾಗೋಷ್ಟಿಯಲ್ಲಿದ್ದರು.