![](https://www.chandravallinews.com/wp-content/uploads/2024/04/WhatsApp-Image-2023-02-08-at-9.50.56-AM-3.jpeg)
i
ಚುನಾವಣಾ ಅಕ್ರಮ: 1.22 ಕೋಟಿ ರೂ. ನಗದು ಜಪ್ತಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಮಾರ್ಚ್ ೧೬ ರಿಂದ ಏಪ್ರಿಲ್ ೨೦ರವರೆಗೆ ಜಿಲ್ಲಾದ್ಯಂತ ನಿಯೋಜಿತ ತಂಡಗಳು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಫ್ಎಸ್ಟಿ ತಂಡದಿಂದ ೪೭,೧೧,೭೫೧ ರೂ. ಹಾಗೂ ಎಸ್ಎಸ್ಟಿ ತಂಡದಿಂದ ೭೫,೭೫,೩೦೧ ರೂ. ಸೇರಿ ೧,೨೨,೮೭,೦೫೨ ರೂ.ಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ ದಾಖಲೆಯಿಲ್ಲದ ೪೪,೩೦,೫೦೦ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಉಳಿದ ೭೮,೫೬,೫೫೨ ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ ೪೪,೩೦,೫೦೦ ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು ಇಬ್ಬರು ವೆಚ್ಚ ವೀಕ್ಷಕರು, ೫೭ ವಿಚಕ್ಷಣ ದಳ(ಎಫ್ಎಸ್ಟಿ-ಫ್ಲೈಯಿಂಗ್ ಸ್ವ್ಯಾಡ್), ೪೫ ಸ್ಥಿರ ಕಣ್ಗಾವಲು ತಂಡ (ಎಸ್ಎಸ್ಟಿ-ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ) ಹಾಗೂ ೧೧ ಅಬಕಾರಿ ತಂಡವನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮಾರ್ಚ್ ೧೬ ರಿಂದ ಏಪ್ರಿಲ್ ೨೦ರವರೆಗೆ ೧೦೧೮೩.೫೨ ಲೀಟರ್ ಭಾರತೀಯ ತಯಾರಿಕಾ ಮದ್ಯ, ೧೮೩೮೮.೬೫ ಲೀ. ಬಿಯರ್ ಹಾಗೂ ೭೩೦ ಲೀ. ಸೇಂದಿ ಸೇರಿ ೭೫,೫೯,೮೦೬ ರೂ. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆಯಲ್ಲದೆ, ೧.೭೦ಲಕ್ಷ ರೂ. ಮೌಲ್ಯದ ೫.೩೫ ಕೆ.ಜಿ. ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ ೧೩,೦೬,೧೪೬ ರೂ. ಅಂದಾಜು ಮೌಲ್ಯದ ೭೩ ಬಾಕ್ಸ್ ಕುಕ್ಕರ್, ೭೦೦ ಗೋಡೆ ಗಡಿಯಾರ, ೧೨೬ ಸೀರೆ, ೧೨೬.೪೨ ಗ್ರಾಂ. ಚಿನ್ನ, ೩೦ ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆಯನ್ನು ಉಲ್ಲಂಘನೆಯಡಿ ವಿಚಕ್ಷಣ ದಳದಿಂದ ೬೪ ಹಾಗೂ ಅಬಕಾರಿ ಇಲಾಖೆಯಿಂದ ೧೩೨೯, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸ್ಥಿರ ಕಣ್ಗಾವಲು ತಂಡದಿಂದ ೧ ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್ಐಆರ್) ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.