ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲೆಯಲ್ಲಿ ಮಳೆ ಯಿಂದ ಅಪಾರ ಹಾನಿಯಾಗಿದೆ. ನಿನ್ನೆ ಸಂಜೆ ಮತ್ತು ರಾತ್ರಿಯ ಮಳೆಯದಾಗಿ ಆನಂದಪುರ ಭಾಗದಲ್ಲಿ ಆಸ್ತಿಗೆ, ಬೆಳೆಗೆ ನಷ್ಟವಾಗಿದೆ. ಈ ಭಾಹದ ಸುತ್ತಮುತ್ತ ಇಂದು ಬೆಳಗ್ಗೆಯೂ ಧಾರಾಕಾರ ಮಳೆಯಾಗಿದೆ. ನಿನ್ನೆ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಬೈರಾಪುರ ಗ್ರಾಮದ ನಿತ್ಯಾನಂದ್ ಅವರ ಬಾಳೆತೋಟ ಭಾರಿ ಮಳೆ ಗಾಳಿಯಿಂದಾಗಿ ನೆಲಕ್ಕಚ್ಚಿದೆ. ಅಂದಾಜು 4 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ಬೈರಾಪುರದ ಚಂದ್ರಪ್ಪ, ವಿಠಲ್ ಅವರ ಬಾಳೆ, ಅಡಿಕೆ ತೋಟಕ್ಕೂ ಹಾನಿಯಾಗಿದೆ.
ಕಣ್ಣೂರಿನ ಧರ್ಮಪ್ಪ ಹಾಗೂ ಗೋಪಾಳ ಎಂಬುವವರ ಬಾಳೆ ತೋಟಕ್ಕೂ ಹಾನಿಯಾಗಿದೆ. ಮಂಜಮ್ಮನವರ ಒಂದು ಎಕರೆಯಲ್ಲಿ ಬೆಳೆದ ಜೋಳ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಹಾನಿಯಾಗಿದೆ.ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಜಮೀನುಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಸಾಂತ್ವನ ನೀಡಿದರು.
ಹೊಸನಗರ ತಾಲೂಕು ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಚ ರಸ್ತೆ ನಿವಾಸಿ ಮಂಜುನಾಥ್ ಅವರ ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಇದರಿಂದ ಚಾವಣಿಗೆ ಹಾನಿ ಉಂಟಾಗಿದೆ. ಕೊಟ್ಟಿಗೆ ಮನೆಗೆ ಭಾಗಶಃ ಹಾನಿ ಆಗಿದೆ.