i
ರಾಮ ರಾಜ್ಯ ಸ್ಥಾಪನೆಗೆ ಹನುಮಂತನಂತಹ ಭಕ್ತಿ ಅವಶ್ಯಕತೆಯಿದೆ-ಮೋಹನ್ ಗೌಡ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಹನುಮನ ಜಯಂತಿಯ ಸಂದರ್ಭದಲ್ಲಿ ಹಿಂದೂಗಳಲ್ಲಿ ವೀರತೆಯನ್ನು ಜಾಗೃತಗೊಳಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ದೇಶದಾದ್ಯಂತ 750 ಕಡೆಗಳಲ್ಲಿ ಸಾಮೂಹಿಕ `ಗದಾಪೂಜೆ‘ಯನ್ನು ಆಯೋಜಿಸ ಲಾಯಿತು.
ಇದರೊಂದಿಗೆ ತುಮಕೂರಿನ ವಿವಿಧ ದೇವಸ್ಥಾನಗಳಾದ ಮಾರುತಿ ದೇವಸ್ಥಾನ, ಶಿರಾದ ಪಂಚಮುಖಿ ಆಂಜನೇಯ ದೇವಸ್ಥಾನ, ಕುಣಿಗಲ್ ನ ಮಾರುತಿ ದೇವಸ್ಥಾನ, ಅಭಯ ಆಂಜನೇಯ ದೇವಸ್ಥಾನ, ಬಿ.ಜಿ ಪಾಳ್ಯದಲ್ಲಿ ಗದಾಪೂಜೆಯನ್ನು ಹಾಗೂ ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ ಮಾಡಲಾಗಿದೆ.
ಈ ಕಾರ್ಯಕ್ರಮವನ್ನು ಶಂಖನಾದದೊಂದಿಗೆ ಆರಂಭಿಸಲಾಯಿತು. ಇದರ ನಂತರ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. `ಗದಾಪೂಜೆ‘ಯ ಅನುಷ್ಠಾನ, ಶ್ರೀ ಮಾರುತಿಯ ಆರತಿ, ಶ್ರೀ ಹನುಮಾನ ಚಾಲೀಸಾ ಪಠಣದೊಂದಿಗೆ `ಶ್ರೀ ಹನುಮತೇ ನಮಃ‘ ಈ ಸಮೂಹಿಕ ನಾಮಜಪ ಮಾಡಲಾಯಿತು. `ಧರ್ಮಸಂಸ್ಥಾಪನೆಗಾಗಿ ಹನುಮಂತನ ಗುಣಗಳನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ?’ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ `ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ‘ ಮಾಡಿಸಲಾಯಿತು.
ಮಹಾಭಾರತದ ಯುದ್ಧದಲ್ಲಿಯೂ ಮಾರುತಿಯು ಅರ್ಜುನನ ರಥದ ಮೇಲೆ ಕುಳಿತು ಪಾಂಡವರಿಗೆ ಧರ್ಮ ಯುದ್ಧವನ್ನು ಗೆಲ್ಲಲು ದೈವೀ ಸಹಾಯ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿಯೂ ಸಮರ್ಥ ರಾಮದಾಸ ಸ್ವಾಮಿಗಳು ೧೧ ಮಾರುತಿಯ ಸ್ಥಾಪನೆ ಮಾಡಿ ಮಾವಳರಿಗೆ (ಶಿವಾಜಿ ಮಹಾರಾಜರ ಸೈನಿಕರಿಗೆ) ಬಲ ಪ್ರಾಪ್ತಿ ಮಾಡಿಕೊಟ್ಟಿದ್ದರು.
ಈಗ 500 ವರ್ಷಗಳ ನಂತರ ಪುನಃ ಇನ್ನೊಮ್ಮೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರು ವಿರಾಜಮಾನರಾಗಿದ್ದಾರೆ. ಇಂತಹ ಸಮಯದಲ್ಲಿ ನಾವು ಪುನಃ ರಾಮರಾಜ್ಯ ಸ್ಥಾಪಿಸಲು ಮಾರುತಿಯಂತಹ ಭಕ್ತಿ ಹಾಗೂ ವೀರತೆಯು ಅತ್ಯಂತ ಅವಶ್ಯಕವಾಗಿದೆ. ಈ ಉದ್ದೇಶ ಗಮನದಲ್ಲಿಟ್ಟು ಶ್ರೀ ಹನುಮಾನ ಜಯಂತಿಯ ಮಂಗಳ ದಿನದಂದು ವಿವಿಧ ಕಡೆಗಳಲ್ಲಿ ಗದಾಪೂಜೆ ಆಯೋಜಿಸಲಾಗಿದೆ.
ಇದರೊಂದಿಗೆ ಹಾಸನ ಜಿಲ್ಲೆಯ ಶ್ರೀ ಸೀತಾರಾಮ ಆಂಜನೇಯ ದೇವಸ್ಥಾನದಲ್ಲಿ, ಹೇಮಾವತಿ ನಗರದ ಶ್ರೀ ಅಭಯ ಹಸ್ತ ದೇವಸ್ಥಾನ, ಚಿಕ್ಕಮಗಳೂರು ಜಿಲ್ಲೆಯ ಶ್ರೀ ಮಾರುತಿ ದೇವಸ್ಥಾನ, ರಾಮನಹಳ್ಳಿಯಲ್ಲಿ ಗದಾಪೂಜೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.