i
ಭದ್ರಾ ಯೋಜನೆಗೆ ನೀಡಿದ ಅನುದಾನ ಕುರಿತು ಮುಖ್ಯಮಂತ್ರಿಗಳು ಕೂಡಲೇ ಶ್ವೇತ ಪತ್ರ ಹೊರಡಿಸಬೇಕು-ರವಿಕುಮಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪ್ಪರ್ ಭದ್ರಾ ಯೋಜನೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾಗಾಂಧಿ ಮಾತನಾಡಿರುವುದು ಸೋಜಿಗದ ಸಂಗತಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಖಂಡಿಸಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳವಾರ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅಪ್ಪರ್ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಮೊದಲು ಮಾಹಿತಿ ಪಡೆದುಕೊಂಡು ಮಾತನಾಡಲಿ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಐದು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಐದುವರೆ ಲಕ್ಷ ಎಕರೆ ನೀರಾವರಿಯಾಗುತ್ತದೆ. ೩೬೭ ಕೆರೆಗಳಿಗೆ ನೀರು ತುಂಬಿಸಬಹುದು. ಇದಕ್ಕಾಗಿ ನಮ್ಮ ಸರ್ಕಾರವಿದ್ದಾಗ ಯೋಜನೆಗೆ ಮಂಜೂರು ನೀಡಿದ್ದೇವೆ. ಯೋಜನೆ ಒಟ್ಟಾರೆ ೨೨ ಸಾವಿರ ಕೋಟಿ ರೂ.ಗಳ ಅಂದಾಜು ಪಟ್ಟಿಯಾಗಿದ್ದು ಇಲ್ಲಿಯತನಕ ಒಂಬತ್ತು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ನಾನು ನೀರಾವರಿ ಮಂತ್ರಿಯಾದಾಗ ಕಾಮಗಾರಿಯನ್ನು ಆರಂಭಿಸಿದೆ. ೨೦೧೩ ರಿಂದ ೧೮ ರವರೆಗೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದಾಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸುಳ್ಳು ಮಾಹಿತಿ ಯಾರಿಗೂ ಕೊಡಬಾರದು ಎಂದು ಎಚ್ಚರಿಸಿದರು.
ಸಿರಿಗೆರೆ ಸ್ವಾಮೀಜಿಗಳು ಭರಮಸಾಗರಕ್ಕೆ ಲಿಫ್ಟ್ ಇರಿಗೇಷನ್ ಆಗಬೇಕೆಂದರು, ತಕ್ಷಣ ನಾನು ೧೨೦೦ ಕೋಟಿ ರೂ. ಅನುದಾನ ನೀಡಿ ಕೆರೆಗಳಿಗೆ ನೀರು ಭರ್ತಿ ಮಾಡುವಂತ ಕಾರ್ಯ ಮಾಡಿದ್ದೇನೆ. ಅಷ್ಟೇ ಅಲ್ಲ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಅನೇಕ ಚೆಕ್ ಡ್ಯಾಂ, ಬ್ಯಾರೇಜ್ ಗಳನ್ನ ಚಿತ್ರದರ್ಗ ಜಿಲ್ಲೆಗೆ ನೀಡಿದ್ದೇನೆ. ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ೨೦೧೩ ರಿಂದ ೨೦೧೮ರ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಲಿಲ್ಲ. ಪ್ರತಿ ವರ್ಷ ಭದ್ರಾ ಯೋಜನೆಗೆ ನೂರು ಕೋಟಿ, ೨೦೦ ಕೋಟಿ ಅನುದಾನ ನೀಡಿದರು. ಆದರೆ ಬಿಜೆಪಿ ಸರ್ಕಾರ ೨೦೧೯ರಲ್ಲಿ ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ ೮೦೦ ಕೋಟಿ ರೂ.ಗಳನ್ನ ನೀಡಿದರು. ನಾನು ಜಲ ಸಂಪನ್ಮೂಲ ಸಚಿವನಾದ ಮೇಲೆ ೨೧೦೦ ಕೋಟಿ, ೨೭೦೦ ಕೋಟಿ ರೂ.ಗಳನ್ನು ನೀಡಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಿದ್ದೇನೆ. ಕೇವಲ ಗ್ಯಾರೆಂಟಿಗಳಲ್ಲೇ ರಾಜ್ಯದ ಜನರನ್ನು ಕಾಂಗ್ರೆಸ್ನವರು ವಂಚಿಸುತ್ತಿದ್ದಾರೆಂದುಕೊಂಡಿದ್ದೆವು. ರೈತರ ನೀರಾವರಿ ಯೋಜನೆಗಳಲ್ಲೂ ವಂಚಿಸುತ್ತಿದೆ ಎನ್ನುವುದು ಈಗ ಗೊತ್ತಾಯಿತು. ಅಪ್ಪರ್ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ನಲ್ಲೇ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿದೆ. ಬಿ.ಎನ್.ಚಂದ್ರಪ್ಪ ೨೦೧೪ ರಿಂದ ೨೦೧೯ ರವರೆಗೆ ಸಂಸದರಾಗಿದ್ದ ಅವಧಿಯಲ್ಲಿ ಒಮ್ಮೆಯೂ ಕ್ಷೇತ್ರದ ಅಭಿವೃದ್ದಿ ಬಗ್ಗೆ ಪಾರ್ಲಿಮೆಂಟ್ನಲ್ಲಿ ಮಾತನಾಡಲಿಲ್ಲ. ಈಗ ನಮ್ಮ ಅಭಿವೃದ್ದಿ ಕೆಲಸಗಳನ್ನು ನೋಡಿ ಸಹಿಸಲು ಆಗದೆ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಟುವಾಗಿ ಖಂಡಿಸುತ್ತೇನೆ ಎಂದರು.
ನೇರ ರೈಲು ಮಾರ್ಗವಾಗಬೇಕು. ಎಲ್ಲರಿಗೂ ಸರ್ಕಾರಿ ಉದ್ಯೋಗ ಕೊಡಲು ಆಗಲ್ಲ. ಅದಕ್ಕಾಗಿ ಪ್ರಧಾನಿ ಮೋದಿರವರು ಹತ್ತು ವರ್ಷಗಳ ಅವಧಿಯಲ್ಲಿ ಕೌಶಲ್ಯಾಧಾರಿತ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರಿಂದ ಯುವಕ-ಯುವತಿಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸರ್ಕಾರ ಒತ್ತು ಕೊಡುತ್ತಿದೆ. ವಿಮಾನ ನಿಲ್ದಾಣವಾದರೆ ಕೈಗಾರಿಕೋದ್ಯಮ ಬೆಳೆಯುತ್ತದೆ. ದೇಶಕ್ಕಾಗಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗಬೇಕಾಗಿರುವುದರಿಂದ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಬಹುಮತಗಳಿಂದ ನನ್ನನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಗೋವಿಂದ ಕಾರಜೋಳ ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭಿವೃದ್ದಿಯಾಗಬೇಕಾದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು.ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ಆಡಳಿತಕ್ಕೆ ಜನ ಮಂತ್ರಮುಗ್ದರಾಗಿದ್ದಾರೆ. ಕ್ಷೇತ್ರದಲ್ಲಿರುವ ಹದಿನೆಂಟುವರೆ ಲಕ್ಷ ಜನರಲ್ಲಿ ಹದಿನಾರು ಲಕ್ಷ ೩೭ ಸಾವಿರದ ೬೮೫ ಜನರಿಗೆ ಅಕ್ಕಿ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಲ್ಲಿ ೯೬೩ ಕಿ.ಮೀ. ರಸ್ತೆಯಾಗಿದೆ. ಅದೇ ನಮ್ಮ ಸರ್ಕಾರದಲ್ಲಿ ೧೯೪೬ ಕಿ.ಮೀ. ರಸ್ತೆಯಾಗಿದೆ. ಮೂರು ಲಕ್ಷ ೩೭ ಸಾವಿರದ ೫೨೭ ರೈತರಿಗೆ ಕಿಸಾನ್ ಸಮ್ಮಾನ್ ಸಿಕ್ಕಿದೆ. ಉಜ್ವಲ ಯೋಜನೆಯಡಿ ೨೫೩೩೧ ಜನರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ೩ ಲಕ್ಷ ೯೫ ಸಾವಿರದ ೭೯೪ ಜನರಿಗೆ ಬಲ್ಬ್ ತಲುಪಿದೆ. ೨ ಲಕ್ಷ ೭೫ ಸಾವಿರದ ೯೪೫ ಮನೆಗಳಿಗೆ ಶೌಚಾಲಯ ಕಟ್ಟಿಸಲಾಗಿದೆ. ಜಿಲ್ಲೆಯಲ್ಲಿ ಹದಿನೆಂಟು ಸಾವಿರದ ೩೮೦ ಮನೆಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲಾ ಸಾಧನೆಗಳನ್ನು ನೋಡಿ ಬಿಜೆಪಿ.ಗೆ ಮತ ಕೊಡಿ ಎಂದು ಕೇಳಿದರು.ಬಿಜೆಪಿ. ಖಾಲಿ ಚೆಂಬು ಕೊಟ್ಟಿದೆ ಎಂದು ಹೀಯಾಳಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ನಾಡಿನ ಜನರಿಗೆ ಚಿಪ್ಪು ಕೊಟ್ಟಿದ್ದಾರೆಂದು ತಿರುಗೇಟು ನೀಡಿದ ಎನ್.ರವಿಕುಮಾರ್ ಮಹಿಳೆಯರಿಗೆ ಸುರಕ್ಷಿತೆ ಇಲ್ಲ. ಹುಬ್ಬಳ್ಳಿಯಲ್ಲಿ ಹಾಡು ಹಗಲೆ ವಿದ್ಯಾರ್ಥಿನಿ ನೇಹ ಕೊಲೆ, ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದು ಕೂಗುವವರ ಮೇಲೆ ಕ್ರಮವಿಲ್ಲ. ಎಸ್.ಡಿ.ಪಿ.ಐ. ಪಿ.ಎಫ್.ಐ. ನವರ ಮೇಲೆ ದಾಖಲಾಗಿದ್ದ ೧೭೫ ಕೇಸುಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದು ಹಾಕಿ ೧೬೦೦ ಮಂದಿಯನ್ನು ಬಿಡುಗಡೆಗೊಳಿಸಿದೆ. ಕುಕ್ಕರ್ ಬಾಂಬರ್ಗಳೆಲ್ಲಾ ಕಾಂಗ್ರೆಸ್ನವರ ಬದ್ರರ್ಸ್ ರಾಜ್ಯದಲ್ಲಿ ಔರಂಜೇಬ, ಟಿಪ್ಪು ಆಡಳಿತ ನಡೆಯುತ್ತಿದೆ. ೧೭೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಜಾನುವಾರುಗಳಿಗೆ ಮೇವು ನೀರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಬರದ ಭಾಗ್ಯ, ಮಹಿಳೆಯರಿಗೆ ಹತ್ಯೆ ಭಾಗ್ಯ ಕೊಟ್ಟಿದ್ದಾರೆ. ಕ್ರೈಂ, ಸೈಬರ್ ಕ್ರೈಂ ಜಾಸ್ತಿಯಾಗಿದೆ. ಛಾಪ ಕಾಗದದ ಬೆಲೆ ಏರಿಕೆ, ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಇಂತಹ ಸರ್ಕಾರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನ ಸರಿಯಾದ ಬುದ್ದಿ ಕಲಿಸುತ್ತಾರೆಂದು ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಮಾತನಾಡಿ ದೇಶದ ಪ್ರಧಾನಿ ನರೇಂದ್ರಮೋದಿರವರ ಪಾರದರ್ಶಕ ಆಡಳಿತವನ್ನು ಮೆಚ್ಚಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ.ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನರೇಂದ್ರಮೋದಿಗೆ ಬಲ ಬಂದಂತಾಗಿದೆ. ದೇಶದ ಭದ್ರತೆಗೆ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ನಾಳೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬಹುಮತಗಳಿಂದ ಗೆಲ್ಲಿಸಿ ಸಂಸತ್ಗೆ ಕಳಿಸಿಕೊಡಿ ಎಂದು ಮತದಾರರನ್ನು ಕೋರಿದರು.ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ಬಿಜೆಪಿ. ಎಸ್ಸಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಪತ್ರಿಕಾಗೋಷ್ಠಿಯಲ್ಲಿದ್ದರು.