i
ಶ್ರೇಷ್ಠ ಪಶು ವೈದ್ಯ ಪ್ರಶಸ್ತಿಗೆ ಭಾಜನರಾದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಬ್ಬಾಳದ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪಶು ವೈದ್ಯಕೀಯ ದಿನಾಚರಣೆಯಲ್ಲಿ ಹಿರಿಯೂರು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹೆಚ್.ಟಿ.ನಾಗರಾಜ್ ಅವರಿಗೆ ಪಶು ವೈದ್ಯಕೀಯ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಶ್ರೇಷ್ಠ ಪಶು ವೈದ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ನಾಗರಾಜ್ ಹೆಚ್.ಟಿ. ಇವರು ತಾಲ್ಲೂಕಿನ ಸೋಮೇರಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಅನುಸೂಯಮ್ಮ ಮತ್ತು ಬಿ.ತಿಪ್ಪೇಸ್ವಾಮಿ ಇವರ ಪುತ್ರನಾಗಿದ್ದು ೨೦೦೧ ರಲ್ಲಿ ಬೀದರ್ ಪಶುವೈದ್ಯಕೀಯ ಮಹಾ ವಿದ್ಯಾಲಯದಿಂದ ಪದವಿ ಪಡೆದು ೨೦೦೬ ರಲ್ಲಿ ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು.ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ೩ ವರ್ಷ, ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ 13 ವರ್ಷಗಳ ಸೇವೆ ಸಲ್ಲಿಸಿ ಹಾಲಿ ಹಿರಿಯೂರಿನ ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶ್ವ ಪಶುವೈದ್ಯಕೀಯ ದಿನಾಚರಣೆಯ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸುರೇಶ್ ಹೊನ್ನಪ್ಪ ಗೋಳ್, ಕರ್ನಾಟಕ ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯ ಬೀದರ್ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಬೆಂಗಳೂರಿನ ಕೆಪಿಎಫ್ ಬಿಎ ಅಧ್ಯಕ್ಷ ನವೀನ್ ಪಶುಪತಿ, ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ.ಎನ್ ನಾರಾಯಣಸ್ವಾಮಿ, ಕರ್ನಾಟಕ ಪಶು ವೈದ್ಯಕೀಯ ಪರಿಷತ್ತು ನಿಬಂಧಕ ಡಾ.ಟಿ.ತಿಪ್ಪೇಸ್ವಾಮಿ, ಬೆಂಗಳೂರು ನಗರ ಉಪನಿರ್ದೇಶಕ ಡಾ.ಟಿ.ಚಂದ್ರಶೇಖರ್ ಇವರುಗಳು ಡಾ.ನಾಗರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕರ್ನಾಟಕ ಪಶು ವೈದ್ಯಕೀಯ ಪರಿಷತ್ತು ಅಧ್ಯಕ್ಷ ಡಾ.ಎಚ್ ಸಿ ಇಂದ್ರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡೀನ್ ಡಾ.ಎಚ್.ಎ.ಉಪೇಂದ್ರ, ಪಶು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ ಎಂ ವೀರೆಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ ಇವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.