i
ಕಾಂಗ್ರೆಸ್ ನ ಗ್ಯಾರಂಟಿ ಪದವನ್ನು ಬಿಜೆಪಿ ಕದ್ದಿದೆ: ಮಂಜುನಾಥ್ ಭಂಡಾರಿ…
ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ:
ರಾಜ್ಯ ಸರ್ಕಾರದ ಯಶಸ್ವಿ ಗ್ಯಾರಂಟಿ ಯೋಜನೆಯ ಗ್ಯಾರಂಟಿ ಪದವನ್ನು ಕದ್ದ ಬಿಜೆಪಿಯವರು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ, ಬಿಜೆಪಿ ಗ್ಯಾರಂಟಿ ಎಂದು ಪಕ್ಷದ ಹೆಸರನ್ನು ಹೇಳಲು ಹೆದರುತ್ತಿದ್ದು,ಮೋದಿ ಹೆಸರಲ್ಲಿ ಮತಯಾಚನೆ ಮಾಡುತ್ತಿದ್ದು, ಕಳೆದ ಹತ್ತು ವರ್ಷದ ಕೇಂದ್ರದ ಬಿಜೆಪಿ ಸರ್ಕಾರ ಪ್ರಗತಿಯ ಬಗ್ಗೆ ಮಾತನಾಡದೆ,ಭಾವನಾತ್ಮಕ ವಿಚಾರಗಳ ಮೂಲಕ ಜನರ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಪಟ್ಟಣದ ಗಾಂಧಿ ಭವನದಲ್ಲಿ ನೆಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿಯವರಿಂದ ನಾವು ರಾಷ್ಠ್ರಪ್ರೇಮವನ್ನು ಕಲಿಯಬೇಕಿಲ್ಲ,ನಮ್ಮ ತಂದೆ,ತಾಯಿಗಳು ನಮಗೆ ಹಿಂದುತ್ವ ಕಲಿಸಿದ್ದಾರೆ,ನಮ್ಮ ಜೀವನ ಪದ್ಧತಿಯೆ ಹಿಂದುತ್ವ,ದೇಶದ ಯುವಕರಿಗೆ ಉದ್ಯೋಗ, ಶಿಕ್ಷಣ ಕೊಡಿಸಲಾಗದ ಬಿಜೆಪಿ ಯುವಕರ ಹೆಗಲಿಗೆ ಶಾಲು ಹಾಕಿ, ಕೈನಲ್ಲಿ ಧ್ವಜ ಹಿಡಿಸಿ ಕೋಮು ದ್ವೇಷ ಬಿತ್ತಲು ಹೊರಟಿದೆ, ಬಿಜೆಪಿಯವರ ಹಿಡನ್ ಅಜೆಂಡವೆಂದರೆ ಸುಳ್ಳು,ಪ್ರಚೋದನೆ, ಜನರ ಭಾವನೆಗಳೊಂದಿಗೆ ಆಡುವುದು ಎಂದರು.
ಕೇಂದ್ರ ಬಿಜೆಪಿ ಎಲೆಕ್ಟ್ರೋಬಾಂಡ್ ವಿಚಾರದಲ್ಲಿ ಪರೋಕ್ಷ ಭ್ರಷ್ಟಾಚಾರ ನೆಡೆಸಿದೆ,ಸರ್ವಾಧಿಕಾರಿ ಧೋರಣೆಯ ಮೋದಿ ಸರಕಾರ ಒಂದು ದೇಶ ಒಂದು ಚುನಾವಣೆ ಅನ್ನುತ್ತ ಮುಂದೆ ಒಂದೇ ಪಕ್ಷ,ಒಂದೇ ವ್ಯಕ್ತಿ ಎಂದು ಹೇಳಲೂಬಹುದು ಎಂದರು.
ರಾಜ್ಯ ಲೋಕ ಸಭಾ ಚುನಾವಣೆಯ ೧೮ಕ್ಷೇತ್ರಗಳಲ್ಲಿ ಕಾಂಗ್ರೇಸ್ ನಿಚ್ಚಳವಾಗಿ ಮುಂದಿದೆ, ನಾವು ೪೦೦ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ ಎನ್ನುವ ಬಿಜೆಪಿ, ಜೆಡಿಎಸ್ ಜೊತೆಗೆ ರಾಜ್ಯದಲ್ಲಿ ಹೊಂದಾಣಿಕೆ ಏಕೆ ಮಾಡಿಕೊಂಡರು ಎಂದು ಪ್ರಶ್ನಿಸಿದರು.