i
ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು…
ಬೆಟ್ಟಿಂಗ್ ಶುರು, ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾಮ…
ವರದಿ–ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರಕ್ಕೆ ದೇಶದ ಎರಡನೇ, ರಾಜ್ಯದ ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.73.30 ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 18,56,876 ಮತದಾರರಲ್ಲಿ 13,61,031 ಮತದಾರರು ಮತಗಟ್ಟೆಯಲ್ಲಿ ಮತ ಚಲಾಯಿಸಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಈ ಬಾರಿ ಚುನಾವಣೆ ಕಣದಲ್ಲಿ 20 ಅಭ್ಯರ್ಥಿಗಳು ಸೇರಿದಂತೆ ಒಂದು ನೋಟಾ ಕೂಡ ಸೇರಿದೆ. 2 ಬ್ಯಾಲೆಟ್ ಯುನಿಟ್, ಒಂದು ಕಂಟ್ರೋಲ್ ಯುನಿಟ್ ಹಾಗೂ ಒಂದು ವಿವಿಪ್ಯಾಟ್ನೊಂದಿಗೆ ಯಶಸ್ವಿಯಾಗಿ ಚುನಾವಣೆ ಮುಗಿಸಿದ್ದಾರೆ.
20 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದೆ.
20 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಮಧ್ಯ ನೇರಾ ಹಣಾಹಣಿ ಏರ್ಪಟ್ಟಿತ್ತು.
ಇಷ್ಟು ದಿನಗಳಿಂದ ಅಬ್ಬರದಿಂದ ಚುನಾವಣೆ ಎದುರಿಸಿರುವ ಮೂರು ಪಕ್ಷಗಳ ಕಾರ್ಯಕರ್ತರು, ಮುಖಂಡರು ಪೆನ್ನು ಪೇಪರ್ ಹಿಡಿದು ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರುತ್ತವೆ. ಯಾವ್ಯಾವ ಜಾತಿ, ಜನಾಂಗ ನಮ್ಮ ಪಕ್ಷದ ಅಭ್ಯರ್ಥಿ ಮತ ಹಾಕಿರುವ ಸಾಧ್ಯತೆ ಇದೆ. ಆಯಾಯ ಪಕ್ಷದವರು ಯಾವ ಊರು, ಯಾವ ಬೂತ್ ನಲ್ಲಿ ನಮಗೆ ಲೀಡ್ ಬರಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಚಿಂತನೆ–
ಮತದಾರರು ಅದರಲ್ಲೂ ಮಹಿಳಾ ಮತದಾರರು ಗ್ಯಾರಂಟಿ ನಮ್ಮ ಅಭ್ಯರ್ಥಿಯ ಕೈ ಹಿಡಿದಿದ್ದಾರೆ. ಮಹಿಳೆಯರು ಮೋಸ ಮಾಡಿರಲು ಸಾಧ್ಯವಿಲ್ಲ. ಅದರಲ್ಲೂ ಇಡೀ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ 7 ಶಾಸಕರು ತಾವೇ ಸ್ಪರ್ಧೆ ಮಾಡಿರುವಂತೆ ಕೆಲಸ ಮಾಡಿದ್ದಾರೆ. ಎಲ್ಲ ಕಡೆಗಳಲ್ಲೂ ಮತದಾರರಿಗೆ ನಿಯತ್ತಾಗಿ ಸೇರಬೇಕಾದದ್ದು ಸೇರಿಯಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳಿಂದ ಹೆಚ್ಚಿನ ಮತ ಬಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ವರ್ಷ ಮಹಿಳೆಯರಿಗೆ ಒಂದು ಲಕ್ಷ ರೂ.ಹಣ ಸಿಗಲಿದೆ. ಹಾಗಾಗಿ ನಿರೀಕ್ಷೆಗೂ ಮೀರಿ ಮತದಾರರು ಅದರಲ್ಲೂ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿರುವುದರಿಂದ ಸೋಲುವ ಮಾತೆ ಇಲ್ಲ, ಸಿದ್ದರಾಮಯ್ಯ, ಪ್ರಿಯಾಂಕಾ ಗಾಂಧಿ ಸೇರಿದಂತೆ ಮತ್ತಿತರರು ಅಬ್ಬರದ ಪ್ರಚಾರ ಮಾಡಿದ್ದಾರೆಂದು ಸೋಲು, ಗೆಲುವಿನ ಲೆಕ್ಕಾಚಾರ ಪ್ರಮುಖರ ಮನೆ, ಕಚೇರಿ ಹಾಗೂ ಸಾರ್ವಜನಿಕ ವಲಯದಲ್ಲಿ ಬಿಸ ಬಿಸಿಯಾಗಿ ಚರ್ಚೆಯಾಗುತ್ತಿವೆ.
ಬಿಜೆಪಿ ತರ್ಕ-
ಚಿತ್ರದುರ್ಗ ಮತದಾರರು ಅತ್ಯಂತ ಪ್ರಜ್ಞಾವಂತರು. ಪುಕ್ಕಟ್ಟೆ ಯೋಜನೆಗಳಿಗೆ ಕಿವಿ ಗೊಟ್ಟಿಲ್ಲ. ದೇಶದ ಭದ್ರತೆ, ಸುರಕ್ಷತೆ ದೃಷ್ಠಿಯಿಂದ, ಮಕ್ಕಳ ಭವಿಷ್ಯ ದೃಷ್ಠಿಯಿಂದ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ.
ಅದರಲ್ಲೂ ಮೂರನೇ ಬಾರಿಗೆ ಮೋದಿ ಅವರನ್ನ ಪ್ರಧಾನಿಯಾಗಿ ನೋಡಲು ಮತದಾರರು ತುಗಿಗಾಲ ಮೇಲೆ ನಿಂತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜೆಡಿಎಸ್ ಪಕ್ಷದ ಮೈತ್ರಿ ಗೆಲುವಿಗೆ ಶ್ರೀರಕ್ಷೆಯಾಗಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಉತ್ಸಾಹದಲ್ಲಿ ಚುನಾವಣೆ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಶ್ರಮ ಮತ್ತು ಬಿಜೆಪಿ-ಜೆಡಿಎಸ್ ಪಕ್ಷಗಳ ತಂತ್ರಗಾರಿಕೆ ಹೆಚ್ಚು ಕೆಲಸ ಮಾಡಿದೆ. ಹುಬ್ಬಳ್ಳಿಯ ನೇಹಾ ಕೊಲೆಯಿಂದ ಎಚ್ಚರಗೊಂಡಿರುವ ಹಿಂದೂ ಮತದಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗೆ ಮನ್ನಣೆ ನೀಡಿಲ್ಲ. ಗ್ಯಾರಂಟಿ ಫಲಾನುಭವಿ ಬಿಜೆಪಿ ಜೆಡಿಎಸ್ ನಲ್ಲಿದ್ದರೂ ಅವರ ಕುಟುಂಬದ ಯಜಮಾನನ ಮಾತು ಕೇಳಲಿದ್ದಾರೆ. ಎದುರಾಳಿ ಆಡಳಿತ ರೂಢ ಕಾಂಗ್ರೆಸ್ ಪಕ್ಷ ತಲುಪಿಸಿರುವ ದೊಡ್ಡ ಮಟ್ಟಕ್ಕಿಂತ ಬಿಜೆಪಿ ಹಿಂದೆ ಬೀಳದೆ ಕೈಲಾದದ್ದನ್ನ ತಲುಪಿಸಿದೆ. ಇದರ ಜೊತೆಯಲ್ಲಿ ಬಿಜೆಪಿ ರಾಜ್ಯ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಇತರೆ ನಾಯಕರು, ಜೆಡಿಎಸ್ ಪಕ್ಷದ ನಾಯಕರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಅಬ್ಬರದ ಪ್ರಚಾರದ ಭರಾಟೆ ನಡೆಸಿದ್ದಾರಲ್ಲದೆ ಮತದಾರರ ಮನವೊಲಿಸಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಅತೀ ಹೆಚ್ಚು ಮತದಾನವಾಗಿದ್ದು ಅದೂ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಚರ್ಚೆಗಲಾಗುತ್ತಿವೆ.
ಇದರ ಜೊತೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಗಳಲ್ಲೂ ಮತದಾರರ ಪಟ್ಟಿ ಹಿಡಿದು ಆಯಾ ಅಭ್ಯರ್ಥಿಗಳ ಪರವಾದ ಏಜೆಂಟರು ಮತದಾನ ಮಾಡಿದರು ಎನ್ನುವುದನ್ನು ಗುರುತು ಮಾಡಿಕೊಂಡು ಇಂತಹವರೆ ನಮ್ಮ ಪಕ್ಷಕ್ಕೆ ಈ ಆಧಾರದಲ್ಲಿ ನಮ್ಮ ಅಭ್ಯರ್ಥಿಗೆ ಯರ್ಯಾರು ಮತ ಹಾಕಿರಬಹುದು, ನಾವು ಗೆಲ್ಲುತ್ತೇವಾ, ಮತಗಳ ಅಂತರ ಎಷ್ಟಿರಬಹುದು ಎಂಬ ಬಿರುಸಿನ ಚರ್ಚೆಗಳಲ್ಲಿ ತೊಡಗಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಎನ್.ಚಂದ್ರಪ್ಪ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರಿಂದ ಇಬ್ಬರಲ್ಲಿ ಯಾರು ಗೆಲ್ಲಬಹುದು, ಯಾವ ಭಾಗದಲ್ಲಿ ಯಾರಿಗೆ ಒಲವು ಲಭಿಸಿದೆ ಎಂದು ಹಳ್ಳಿ ಹಳ್ಳಿಗಳಲ್ಲೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ಬೂತ್ ಮಟ್ಟದ ಕಾರ್ಯಕರ್ತರಿಂದ ಈಗಾಗಲೇ ಮಾಹಿತಿ ಕಲೆ ಹಾಕಿರುವ ಅಭ್ಯರ್ಥಿಗಳು ತಮ್ಮ ಅಭ್ಯರ್ಥಿಗೆ ಎಷ್ಟು ಮತಗಳು ಬಿದ್ದಿರಬಹುದು ಎಂಬುದನ್ನು ಅಂದಾಜು ಮಾಡಿಕೊಂಡಿದ್ದಾರೆ. ತಮ್ಮದೇ ದೃಷ್ಟಿಕೋನ ಮತ್ತು ಊಹೆಯಲ್ಲಿ ಈ ಲೆಕ್ಕಾಚಾರ ನಡೆದಿರುವುದರಿಂದ ನಾನೇ ಮುಂದಿನ ಸಂಸದ ಎಂಬ ನಂಬಿಕೆ ಇಬ್ಬರೂ ಅಭ್ಯರ್ಥಿಗಳಲ್ಲಿ ಮೂಡಿದೆ. ಆದರೆ ಮತದಾರ ಪ್ರಭುಗಳ ಆಂತರ್ಯದ ಗುಟ್ಟು ಫಲಿತಾಂಶದ ದಿನವಷ್ಟೇ ಹೊರ ಬರಲಿದ್ದು ಅಲ್ಲಿಯ ವರೆಗೆ ಅಳೆದು ತೂಗುವುದನ್ನು ಬಿಟ್ಟು ಯಾರು ಗೆದ್ದವರು ಎನ್ನುವುದನ್ನು ನಿಖರವಾಗಿ ಹೇಳುವುದು ಯಾರಿಂದಲೂ ಕಷ್ಟಸಾಧ್ಯ.
ಮಹಿಳೆಯರದ್ದೇ ಮೇಲುಗೈ ಆಗಿದ್ದರೂ ಮತದಾನ ಮಾತ್ರ ಕಡಿಮೆ:
ಚಳ್ಳಕೆರೆ ಕ್ಷೇತ್ರದಲ್ಲಿ 111280 ಪುರುಷ, 113160 ಮಹಿಳೆ ಸೇರಿ ಒಟ್ಟು 224447 ಮತದಾರರು ಇದ್ದು ಇದರಲ್ಲಿ 81990 ಪುರುಷ, 81225 ಮಹಿಳೆ ಹಾಗೂ 1 ಇತರೆ ಸೇರಿ 163216 ಮತದಾನ ಮಾಡಿದ್ದು ಮಹಿಳೆಯರು ಕಡಿಮೆ ಪ್ರಮಾಣದಲ್ಲಿ ಮತಚಲಾಯಿಸಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 131358 ಪುರುಷ, 136415 ಮಹಿಳೆ ಸೇರಿ ಒಟ್ಟು 267814 ಮತದಾರರು ಇದ್ದು 94999 ಪುರುಷ, 94302 ಮಹಿಳೆ ಸೇರಿ ಒಟ್ಟು 189321 ಮತದಾರರು ಮತಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲೂ ಮಹಿಳೆಯರ ಮತದಾನ ಪ್ರಮಾಣ ಕಡಿಮೆ ಆಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 122532 ಪುರುಷ, 125406 ಮಹಿಳೆ ಸೇರಿ ಒಟ್ಟು 247954 ಮತದಾರರು ಇದ್ದು ಇದರಲ್ಲಿ 88988 ಪುರುಷ, 88354 ಮಹಿಳೆಯರು ಸೇರಿ ಒಟ್ಟು 177350 ಮತದಾರರು ಮತಚಲಾಯಿಸಿದ್ದು ಈ ಕ್ಷೇತ್ರದಲ್ಲೂ ಮಹಿಳೆಯರು ನಿರೀಕ್ಷಿತ ಪ್ರಮಾಣದಲ್ಲಿ ಮತ ಚಲಾಯಿಸಿಲ್ಲ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 118806 ಪುರುಷ, 119554 ಮಹಿಳೆ ಸೇರಿ ಒಟ್ಟು 238370 ಮತದಾರರು ಇದ್ದು ಇದರಲ್ಲಿ 92421 ಪುರುಷ, 87421 ಮಹಿಳೆ ಸೇರಿ ಒಟ್ಟು 179844 ಮತದಾರರು ಮತಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಮಹಿಳೆಯರು ಮತದಾನ ಕೇಂದ್ರಕ್ಕೆ ಆಗಮಿಸಿಲ್ಲ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 100439 ಪುರುಷ, 100418 ಮಹಿಳೆ ಸೇರಿ ಒಟ್ಟು 200857 ಮತದಾರರು ಇದ್ದಾರೆ. ಇದರಲ್ಲಿ 75388 ಪುರುಷ, 73256 ಮಹಿಳೆ ಮತದಾರರು ಸೇರಿ 148644 ಮತದಾರರು ಮತಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಕೇವಲ 21 ಮಹಿಳಾ ಮತದಾರರು ಕಡಿಮೆ ಇದ್ದಾರೆ. ಆದರೆ ಮಹಿಳೆಯರು ಇಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ 100873 ಪುರುಷ, 97358 ಮಹಿಳೆ ಸೇರಿ ಒಟ್ಟು 198240 ಮತದಾರರು ಇದ್ದಾರೆ. ಇದರಲ್ಲಿ 70997 ಪುರುಷ, 68801 ಮಹಿಳಾ ಮತದಾರರು ಸೇರಿ ಒಟ್ಟು 139798 ಮತದಾರರು ಮತಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ತಲಾ 30 ಸಾವಿರಕ್ಕಿಂತ ಹೆಚ್ಚಿನ ಮತದಾರರು ಚುನಾವಣಾ ಪ್ರಕ್ರಿಯಿಂದ ಹೊರಗುಳಿದಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 114525 ಪುರುಷ, 113950 ಮಹಿಳೆ ಸೇರಿ ಒಟ್ಟು 228483 ಮತದಾರರು ಇದ್ದಾರೆ. ಇದರಲ್ಲಿ 87384 ಪುರುಷ, 85568 ಮಹಿಳೆ ಸೇರಿ ಒಟ್ಟು 172953 ಮತದಾರರು ಮತಚಲಾಯಿಸಿದ್ದಾರೆ. ಪುರುಷರಿಗಿಂತ ಕೇವಲ 575 ಮಹಿಳೆಯರು ಕಡಿಮೆ ಇದ್ದು ಈ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ಮತ ಹಾಕಿದ್ದಾರೆ.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದೆ. ಈ ಕ್ಷೇತ್ರದಲ್ಲಿ 125730 ಪುರುಷ, 124968 ಮಹಿಳೆ ಸೇರಿ ಒಟ್ಟು 250711 ಮತದಾರರು ಇದ್ದಾರೆ. ಇದರಲ್ಲಿ 96329 ಪುರುಷ, 93569 ಮಹಿಳೆ ಮತದಾರರು ಸೇರಿ 189905 ಮತದಾರರು ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ 762 ಮಹಿಳೆಯರು ಕಡಿಮೆ ಇದ್ದಾರೆ. ಇಲ್ಲೂ ಮಹಿಳೆಯರು ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡಿರುವುದು ಕಂಡು ಬರುತ್ತಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ಹೆಚ್ಚು ಸಂಖ್ಯೆಯಲ್ಲಿದ್ದು ಮತ ಚಲಾವಣೆ ಮಾಡಿದ ಸರಾಸರಿಯಲ್ಲಿ ಮಹಿಳೆಯರು ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡಿರುವುದು ಕಂಡು ಬಂದಿದೆ.
ಬೆಟ್ಟಿಂಗ್ ಶುರು- ನಮ್ಮ ಅಭ್ಯರ್ಥಿಯೇ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ. ಯಾರು ಎಷ್ಟು ಕಟ್ಟುತ್ತೀರಿ ಕಟ್ಟಿ, ನಾನು ಎರಡು ಕೊಡುತ್ತೇನೆ, ನೀನು ಒಂದು ಕೊಡು ಸಾಕು ಎನ್ನುವ ಬಾಜಿ ಆಟ ಶುರುವಾಗಿದೆ.