i
ಶ್ರೀನಿವಾಸ್ ಪ್ರಸಾದ್ ಅಗಲಿಕೆ ಇಡೀ ಶೋಷಿತ ವರ್ಗಕ್ಕೆ ತುಂಬಲಾರದ ನಷ್ಟ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಹು ಅಂಗಾಂಗಗಳ ಸಮಸ್ಯೆಗಳಿಂದ ಬಳಲುತ್ತಿದ್ದ ಬಿ.ಜೆ.ಪಿ ಸಂಸದ ಹಾಗೂ ಛಲವಾದಿ ಸಮುದಾಯದ ಹಿರಿಯ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಬಿ.ಜೆ.ಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಛಲವಾದಿ ಸಮುದಾಯದ ಮಹಿಳಾ ಮುಖಂಡರಾದ ಎನ್.ಬಿ.ಭಾರ್ಗವಿ ದ್ರಾವಿಡ್ ಸಂತಾಪ ಸೂಚಿಸಿದ್ದಾರೆ. ದೀನ ದಲಿತರ ನಾಯಕರು, ನಮ್ಮ ಸಮುದಾಯದ ಹಿರಿಯ ಮುತ್ಸದ್ದಿ ಕಳಂಕವಿಲ್ಲದ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ಇಡೀ ಶೋಷಿತ ವರ್ಗಕ್ಕೇ ತುಂಬಲಾರದ ನಷ್ಟವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿ ಆಗಿದ್ದ ಅವರು 1974ರಲ್ಲಿ ರಾಜಕೀಯ ಪ್ರವೇಶ ಮಾಡಿದರು. 1980ರಲ್ಲಿ ಮೊದಲ ಬಾರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಪಾದಾರ್ಪಣೆ ಮಾಡಿದರು. ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು. ಬಡವರು ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. 1972ರವರೆಗೆ ಸ್ವಯಂ ಸೇವಕರಾಗಿ ಜನಸಂಘ ಮತ್ತು ಎ.ಬಿ.ವಿ.ಪಿಯಲ್ಲಿ ಸಕ್ರಿಯವಾಗಿದ್ದವರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕರ ವ್ಯಾಜ್ಯಗಳ ಕೇಂದ್ರ ಸಚಿವರಾಗಿ ಮತ್ತು ಕರ್ನಾಟಕ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಭಾಗದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾಗಿದ್ದರು. 6 ಬಾರಿ ಸಂಸದರಾಗಿ, 2 ಬಾರಿ ವಿಧಾನ ಸಭೆಗೆ ಆಯ್ಕೆಯಾದವರು. ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.