i
ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ–ಹೆಚ್.ಡಿ.ಕೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹಾಸನದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ, ‘ಸಮಾಜದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ನಿಷ್ಪಕ್ಷಪಾತ ತನಿಖೆಯಾಗಲಿ. ತಮ್ಮ ಕುಟುಂಬ ಮಹಿಳೆಯರ ಬಗ್ಗೆ ಮೊದಲಿನಿಂದಲೂ ಗೌರವಯುತವಾಗಿ ನಡೆದುಕೊಂಡು ಬಂದಿದೆ’ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಈ ನಾಡಿನ ಕಾನೂನಿಗೆ ಪ್ರತಿಯೋರ್ವರು ತಲೆ ತಗ್ಗಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಎಸ್ಐಟಿ ರಚಿಸಿದೆ. ಎಫ್ಐಆರ್ ಕೂಡ ಆಗಿದೆ. ತನಿಖೆಯಿಂದ ಸತ್ಯಾಂಶ ಹೊರಬರಲಿ. ಈ ವಿಷಯದಲ್ಲಿ ತಾವು ಯಾರ ಮೇಲೂ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಸದರಿ ವಿಷಯ ತಮಗೆ ಗೊತ್ತಿರಲಿಲ್ಲ. ಮೊದಲೇ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಾಗಿತ್ತು. ಪ್ರಜ್ವಲ್ ರೇವಣ್ಣ ಎಲ್ಲಿ ಹೋಗುತ್ತಾರೆ ಎಂದು ಕಾದು ಕುಳಿತುಕೊಳ್ಳಲಾಗುತ್ತದೆಯೇ? ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಪಕ್ಷದಿಂದಲೂ ಕ್ರಮಕೈಗೊಳ್ಳಲಾಗುವುದು. ಎಸ್ಐಟಿ ವರದಿ ಬರಲಿ. ಸತ್ಯಾಂಶ ಏನೆಂಬುವುದು ಗೊತ್ತಾಗುತ್ತದೆ. ಸದ್ಯ ಈ ಪ್ರಕರಣದ ಬಗ್ಗೆ ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಿದ್ದೆನೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಪೂರ್ವದಲ್ಲಿ ಪೆನ್ ಡ್ರೈವ್ ಪ್ರಕರಣ ಚರ್ಚೆಗೆ ಬಂದಿದ್ದೇಕೆ. ಈ ಪ್ರಕರಣ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹೆಸರು ಏಕೆ ತರುತ್ತಿರಿ?
‘ವ್ಯಕ್ತಿ (ಪ್ರಜ್ವಲ್ ರೇವಣ್ಣ) ಬಗ್ಗೆ ಚರ್ಚೆ ಮಾಡಿಕೊಳ್ಳಿ. ಕುಟುಂಬದ ಪ್ರಶ್ನೆಯಲ್ಲ. ಕಾಂಗ್ರೆಸ್ ಮಹಾನ್ ನಾಯಕರ ಬಗ್ಗೆ ಎಲ್ಲ ಗೊತ್ತಿದೆ. ಹೆಚ್.ಡಿ.ದೇವೇಗೌಡ ಕುಮಾರಸ್ವಾಮಿಯವರ ಹೆಸರು ಏಕೆ ತರುತ್ತಿರಿ? ಈ ವಿಷಯದಲ್ಲಿ ತಮ್ಮೊಬ್ಬರಿಗೆ ಅಲ್ಲ. ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ. ಎಫ್ಐಆರ್ ಆಗಿದೆ. ತನಿಖಾ ವರದಿ ಬರಲಿ’ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.