i
ಅಪರಿಚಿತ ಮಹಿಳೆಯ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸುಮಾರು 15 -20 ದಿನಗಳ ಹಿಂದೆ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ತೂಬಗೆರೆ ಹೋಬಳಿ ನಾರಸಿಂಹನಹಳ್ಳಿ ಬಳಿ ಅಪರಿಚಿತ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ, ಶವದ ಗುರುತು ಪತ್ತೆಯಾಗದಂತೆ ನಿರ್ಜನಪ್ರದೇಶದಲ್ಲಿ ಬೆಂಕಿ ಹಚ್ಚಿ ಸುಟ್ಟು ನಂತರ ಹಂತಕರು ಪರಾರಿಯಾಗಿರುವ ಘಟನೆ ನಡೆದಿದೆ.
ಸುಮಾರು 15 -20 ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಇಂದುಬೆಳಕಿಗೆ ಬಂದಿದೆ. 25 ವರ್ಷದ ಮಹಿಳೆಯ ಶವ ಸುಟ್ಟು ಗುರುತು ಸಿಗದಷ್ಟು ಕೊಳೆತು ಹೋಗಿದೆ ಎನ್ನಲಾಗಿದೆ.
ಜಕ್ಕಲಮೊಡಗು ಜಲಾಶಯಕ್ಕೆ ಸಾಗುವ ರಸ್ತೆಯಲ್ಲಿನ ನಾರಸಿಂಹನಹಳ್ಳಿ ಸಮೀಪದ ಪೊದೆಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ಗೆ ಶವ ಕಂಡು ಬಂದಿದ್ದು, ಸ್ಥಳಕ್ಕೆ ಡಿವೈಎಎಸ್ಪಿ ಪಿ.ರವಿ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಮಹಿಳೆಗೆ ಸಂಬಂಧಿಸಿದ ಯಾವುದೇ ಗುರುತು, ದಾಖಲೆಗಳ ಮಾಹಿತಿ ಸಿಗದ ಕಾರಣ ಪ್ರಕರಣ ಭೇದಿಸಿ ಹಂತಕರ ಪತ್ತೆ ಹಚ್ಚುವುದು ಪೊಲೀಸರಿಗೆ ಕಗ್ಗಂಟಿನ ಕೆಲಸವಾಗಿದೆ ಎನ್ನಲಾಗುತ್ತಿದೆ.