i
ಬೇಸಿಗೆ ಶಿಬಿರಗಳು ಮಕ್ಕಳಿಗೆ ಮತ್ತೊಂದು ಶಾಲೆ ಎನಿಸಬಾರದು- ಆರ್.ಎಂ ಶ್ಯಾಮ್ ರಾವ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಲು ಬೇಸಿಗೆಯ ಶಿಬಿರ ಅವಶ್ಯ ಆದರೆ ಬೇಸಿಗೆ ಶಿಬಿರಗಳು ಮಕ್ಕಳಿಗೆ ಮತ್ತೊಂದು ಶಾಲೆಯಂತೆನಿಸಬಾರದು ಮಕ್ಕಳಲ್ಲಿ ನಾಯಕತ್ವ ಗುಣ, ತಂಡಕ್ಕೆ ಮಾರ್ಗದರ್ಶನ ನೀಡುವ ಕೌಶಲವೂ ಅವರಲ್ಲಿ ತುಂಬ ಬೇಕು ಈಗ ಬಹಳಷ್ಟು ಮಂದಿ ಬೇಸಿಗೆ ಶಿಬಿರ ಎಂದರೆ ಹಣ ಮಾಡುವ ಮತ್ತೊಂದು ಮಾರ್ಗ ಎಂದು ಕೊಂಡಿದ್ದಾರೆ ಹಾಗಗಬಾರದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉಚಿತವಾಗಿ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಮಕ್ಕಳು ಪೋಷಕರು ಇದನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಶಿಬಿರದಲ್ಲಿ ಕಲಿಸಲಾಗುವ ವಿವಿಧ ರೀತಿಯ ಕಲೆಗಳನ್ನು ಕಲಿತು ಉತ್ತಮ ಪ್ರಜೆಗಳಾಗಿ ಬೆಳೆಯುವಂತಾಗಲಿ ಎಂದು ಚಿತ್ರದುರ್ಗದ ವಿಠ್ಠಲ ಬೆರಳಚ್ಚು ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಆರ್.ಎಂ.ಶ್ಯಾಮ್ ರಾವ್ ಹೇಳಿದರು.
ನಗರದ ತುರುವನೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಬುಧವಾರ ಸಂಜೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ಹಮ್ಮಿಕೊಂಡಿರುವ ಹತ್ತು ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ಮಕ್ಕಳ ದಿನಚರಿ ಮೊಬೈಲ್, ಕಂಪ್ಯೂಟರ್ನಲ್ಲೇ ಕಳೆದು ಹೋಗುತ್ತದೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅತಿಯಾದ ಮೊಬೈಲ್ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗಬಹುದು. ಆ ಕಾರಣಕ್ಕೆ ಬೇಸಿಗೆ ಶಿಬಿರ ಉತ್ತಮ ಎಂದು ಅಭಿಪ್ರಾಯ ಪಟ್ಟರು.
ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಸಮಾಜ ಸೇವಕರಾದ ಶ್ರೀಮತಿ ಶೈಲಜಾ ರೆಡ್ಡಿಯವರು ಮಾತನಾಡಿ ಶಿಬಿರಗಳಲ್ಲಿ ಮಕ್ಕಳಿಗೆ ಹೋಂವರ್ಕ್, ಟ್ಯೂಷನ್ ಎಂಬ ಒತ್ತಡಗಳು ಇಲ್ಲದೆ ಇರುವುದರಿಂದ ಮಕ್ಕಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ ಇದರಿಂದ ಮಕ್ಕಳಲ್ಲಿ ಮನೋಲ್ಲಾಸದ ಜೊತೆಗೆ ಹೊಸ ಪ್ರಯೋಗಗಳನ್ನು ಮಾಡಲು ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸ ಸ್ನೇಹಿತರನ್ನು ಭೇಟಿಯಾದಾಗ ಅವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಲು ಬೇಸಿಗೆ ಶಿಬಿರ ಸಹಾಯ ಭಾಗವಹಿಸಿದ್ದ ಬೇಸಿಗೆ ಶಿಬಿರದಲ್ಲಿನ ಮತ್ತೊಂದು ಬಹುಮುಖ್ಯ ಅನುಕೂಲ ಎಂದರೆ ಪ್ರಕೃತಿಯೊಂದಿಗೆ ಬೆರೆಯುವುದು. ಸದಾ ತಂತ್ರಜ್ಞಾನದ ನಡುವೆ ಬೆಳೆಯುವ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪ್ರಕೃತಿಯ ಮಧ್ಯೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಪ್ರಕೃತಿಯು ಎಲ್ಲಾ ಇಂದ್ರಿಯಗಳನ್ನು ಪ್ರಚೋದಿಸುತ್ತದೆ. ಇದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ಸುಮಾರು 55ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಶಿಬಿರವನ್ನು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗಿಡಕ್ಕೆ ನೀರೆರೆತುವುದರೊಂದಿಗೆ ಪ್ರಾರಂಭಗೊಂಡಿತು. ಶಿಬಿರದಲ್ಲಿ ಬಾಲಗೋಕುಲದ ಮಾತಾ ನಾಗಲತಾರವರು ಹೇಳಿಕೊಟ್ಟ ಸ್ವಾಗತ ಗೀತೆಯೊಂದಿಗೆ ಪ್ರಾರಂಭಗೊಂಡು ಶ್ರೀಮತಿ ನಿರ್ಮಲ ಗುರುವಂದನಾ ಹಾಡು, ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯ ಶಿಕ್ಷಕ ತಿಪ್ಪೇರುದ್ರಪ್ಪ ಹೇಳಿಕೊಟ್ಟ ಅಬಾಕಸ್ ಮಕ್ಕಳಿಗೆ ಖುಷಿನೀಡಿದವು. ಶಿಬಿರದ ಆಯೋಜಕರಾದ ರವಿ ಅಂಬೇಕರ್ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನೃತ್ಯ ಕಲಾವಿದೆ ಕು.ಗಗನ, ಭಜನೆ ಹಾಡುಗಾರ್ತಿ ಅಂಬುಜಾಕ್ಷಿ, ನಳಿನಾಕ್ಷಿ, ಚೈತ್ರ, ಶಿಕ್ಷಕಿ ರೇಣುಕಾ, ಸುನೀತಾ, ಇನ್ನಿತರರು ಭಾಗವಹಿಸಿದ್ದರು.