i
ಮೆಸೇಜ್ ಓಪನ್ ಮಾಡಿದ್ದಕ್ಕೆ ಶಿಕ್ಷಕಿಯ 7 ಲಕ್ಷ ರೂ ಢಮಾರ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿಕ್ಷಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಏಕಾಏಕಿ 7 ಲಕ್ಷ ರೂ. ಹಣ ನಾಪತ್ತೆಯಾಗಿದೆ. ಹಣ ಕಡಿತದ ಸಾಲು ಸಾಲು ಮೆಸೇಜ್ ಬಂದಾಗ ಶಿಕ್ಷಕಿ ಆಘಾತಕ್ಕೊಂಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ಶಿಕ್ಷಕಿಯೊಬ್ಬರು ಯುನಿಯನ್ ಬ್ಯಾಂಕ್ನಲ್ಲಿ ಖಾತೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಹೊಂದಿದ್ದಾರೆ. ಮೇ 3ರಂದು ಮಧ್ಯಾಹ್ನ ಶಿಕ್ಷಕಿಯ ಮೊಬೈಲ್ಗೆ ಯುನಿಯನ್ ಬ್ಯಾಂಕ್ನಿಂದ ಸಾಲು ಸಾಲು ಮೆಸೇಜ್ ಬಂದಿವೆ. ಒಮ್ಮೆ 3 ಲಕ್ಷ, ಎರಡನೇ ಬಾರಿ 2 ಲಕ್ಷ, ಮೂರನೆ ಬಾರಿ 2 ಲಕ್ಷ ರೂ. ಹಣ ಕಡಿತವಾಗಿದೆ ಎಂದು ಮೆಸೇಜ್ನಲ್ಲಿ ತಿಳಿಸಲಾಗಿತ್ತು. ಕೂಡಲೆ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದಾಗ, ನಿಮ್ಮ ಖಾತೆಯಲ್ಲಿರುವ ಉಳಿಕೆ ಹಣವನ್ನು ಕೂಡಲೆ ಬೇರೆ ಖಾತೆ ವರ್ಗಾಯಿಸಿ ಎಂದು ಸೂಚಿಸಿದ್ದರು.
ಶಿಕ್ಷಕಿ ಕೂಡಲೆ ತಮ್ಮ ಖಾತೆಯಲ್ಲಿದ್ದ ಉಳಿಕೆ ಹಣದ ಪೈಕಿ 50 ಸಾವಿರ ರೂ. ಅನ್ನು ಮಗಳ ಖಾತೆಗೆ ವರ್ಗಾಯಿಸಿದ್ದರು. ಬ್ಯಾಂಕ್ನಲ್ಲಿ ವಿಚಾರಿಸಿದಾಗ ಶಿಕ್ಷಕಿಯ ವೈಯಕ್ತಿಕ ಮಾಹಿತಿ ಕದ್ದು, ಒಟಿಪಿ ಶೇರ್ ಮಾಡದೆ 7 ಲಕ್ಷ ರೂ. ಹಣವನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.